ನವದೆಹಲಿ: ಬಿಜೆಪಿಯ ಅಧ್ಯಕ್ಷರಾಗಿ ನೇಮಕಗೊಂಡ ನಾಲ್ಕು ತಿಂಗಳ ನಂತರವೂ ಜೆಪಿ ನಡ್ಡಾ ತಮ್ಮ ಹೊಸ ತಂಡವನ್ನು ರಚಿಸಿಲ್ಲ, ಆದರೆ ಈಗ ಮೂಲಗಳು ಅವರ ಹೊಸ ತಂಡವನ್ನು ರಚನೆ ಮಾಡುವ ಸುಳಿವು ನೀಡಿವೆ. ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಜೂನ್ ಆರಂಭದ ವೇಳೆಗೆ ನಡ್ಡಾ ತಮ್ಮ ತಂಡವನ್ನು ರಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಿಂದೆ ಚುನಾವಣೆಗಳಿಂದಾಗಿ ಮತ್ತು ನಂತರ ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ, ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆಗಳನ್ನು ಕೈಗೊಳ್ಳಲಾಗಲಿಲ್ಲ. ಆದರೆ ಈಗ ಮೂಲಗಳು ಪ್ರಕಾರ, ನಡ್ಡಾ ಅವರು ಪಕ್ಷದ ಹಿರಿಯ ಮುಖಂಡರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ತಮ್ಮ ಹೊಸ ಪದಾಧಿಕಾರಿಗಳ ತಂಡವನ್ನು ರಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.
ಈ ವರ್ಷದ ಜನವರಿಯಲ್ಲಿ ನಡ್ಡಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದರು.
ಬಿಜೆಪಿಯ ಹಿರಿಯ ಮುಖಂಡರೊಬ್ಬರ ಪ್ರಕಾರ, “ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಜೂನ್ ಮೊದಲ ವಾರದ ವೇಳೆಗೆ ನಡ್ಡಾ ತನ್ನ ಹೊಸ ತಂಡವನ್ನು ಘೋಷಿಸುವ ಸಾಧ್ಯತೆಗಳಿವೆ”.
ಮೂಲಗಳ ಪ್ರಕಾರ, ಅವರ ಹೊಸ ತಂಡವು ಹೊಸ ಮುಖಗಳನ್ನು ಹೊಂದಿರಬಹುದು. ಸಮಾಜದ ಎಲ್ಲಾ ವರ್ಗಗಳು ಮತ್ತು ಎಲ್ಲಾ ರಾಜ್ಯಗಳಿಗೆ ಪ್ರಾತಿನಿಧ್ಯ ದೊರಕುವ ನಿರೀಕ್ಷೆ ಇದೆ.
ಎಲ್ಲಾ ರಾಜ್ಯಗಳಿಗೆ ಇತ್ತೀಚೆಗೆ ಕಳುಹಿಸಲಾದ ಸುತ್ತೋಲೆಯಲ್ಲಿ, ನಡ್ಡಾ ತನ್ನ ಹೊಸ ತಂಡಕ್ಕೆ ಯುವಕರು ಮತ್ತು ಮಹಿಳೆಯರನ್ನು ಮತ್ತು ಹೊಸ ಮುಖಗಳನ್ನು ಆಯ್ಕೆ ಮಾಡಲು ಒತ್ತು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರು ರಾಜ್ಯಗಳಿಂದ ಪಟ್ಟಿಯನ್ನು ಕೇಳಿದ್ದರು.
ಅವರ ಹೊಸ ತಂಡವು ಕೆಲವು ಹಳೆಯ ನಾಯಕರು ಮತ್ತು ಹೊಸ ಮುಖಗಳ ಮಿಶ್ರಣವನ್ನು ಹೊಂದಿರಬಹುದು ಎಂದು ಮೂಲಗಳು ತಿಳಿಸಿವೆ. ಬಿಹಾರದ ಉಸ್ತುವಾರಿ ಭುಪೇಂದ್ರ ಯಾದವ್ ಅವರನ್ನು ನಡ್ಡಾ ಮುಂದುವರಿಸುವ ಸಾಧ್ಯತೆ ಇದೆ ಮತ್ತು ಪಶ್ಚಿಮ ಬಂಗಾಳದಲ್ಲಿ ಕೈಲಾಶ್ ವಿಜಯವರ್ಗಿಯಾ ತಮ್ಮ ಜವಾಬ್ದಾರಿಯನ್ನು ಮುಂದುವರಿಸಲಿದ್ದಾರೆ ಎನ್ನಲಾಗಿದೆ.
ತಮ್ಮ ಹೊಸ ತಂಡದಲ್ಲಿ ರಾಜಸ್ಥಾನ, ಛತ್ತೀಸ್ಗಢ, ಮಹಾರಾಷ್ಟ್ರ, ಜಾರ್ಖಂಡ್, ದೆಹಲಿ ಮತ್ತು ಉತ್ತರ ಪ್ರದೇಶಗಳಲ್ಲಿ ಪಕ್ಷವನ್ನು ಮುನ್ನಡೆಸಲು ನಡ್ಡಾ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನಡ್ಡಾ ತನ್ನ ಇಡೀ ತಂಡವನ್ನು ಅಂದರೆ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರು ಮತ್ತು ಮಾಧ್ಯಮ ಉಸ್ತುವಾರಿಗಳನ್ನು ಒಂದೇ ಸಮಯದಲ್ಲಿ ಘೋಷಿಸುವ ಸಾಧ್ಯತೆಯಿದೆ. ಹೊಸ ಮುಖಗಳು ಹೊಸ ಪ್ರಧಾನ ಕಾರ್ಯದರ್ಶಿಗಳಾಗಿ ಹೊರಹೊಮ್ಮಬಹುದು, ಆದರೆ ಎಲ್ಲಾ ಕಣ್ಣುಗಳು ಪಕ್ಷದ ಸಂಸದೀಯ ಮಂಡಳಿಯ ಮೇಲೆ ಇರಲಿವೆ.
ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಮತ್ತು ಅನಂತ್ ಕುಮಾರ್ ಅವರ ನಿಧನದ ನಂತರ ಸಂಸದೀಯ ಮಂಡಳಿಯಲ್ಲಿ ಹಲವಾರು ಸ್ಥಾನಗಳು ಖಾಲಿ ಇವೆ. ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಸಂಸದೀಯ ಮಂಡಳಿಗೆ ಪ್ರವೇಶ ಪಡೆಯಬಹುದು, ಆದರೆ ಕೆಲವು ಮಾಜಿ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಡಾ.ರಮಣ್ ಸಿಂಗ್ ಅವರನ್ನು ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯಲ್ಲಿ ಸೇರಿಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಲಾಕ್ಡೌನ್ -4 ರಲ್ಲಿ ನಿರ್ಬಂಧಗಳನ್ನು ಸಡಿಲಿಸಿದ ನಂತರ, ನಡ್ಡಾ ಪಕ್ಷದ ಹಿರಿಯ ಮುಖಂಡರೊಂದಿಗೆ ನಿಯಮಿತವಾಗಿ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.