ನಾಗಪುರ : ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ತನ್ನ ನಿತ್ಯದ ಹೊರಾಂಗಣ ಶಾಖಾ ಚಟುವಟಿಕೆ ಮತ್ತು ಇನ್ನಿತರ ಚಟುವಟಿಕೆಗಳಿಗೆ ವಿರಾಮ ನೀಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ತನ್ನ ಸ್ವಯಂಸೇವಕರನ್ನು ತಲುಪಲು ಹಾಗೂ ಪ್ರೇರೇಪಿಸಲು ಆನ್ಲೈನ್ ಮಾರ್ಗದ ಕೈಹಿಡಿದಿದೆ.
ಅಕ್ಷಯ ತೃತೀಯದ ಶುಭದಿನವಾದ ಇಂದು ಸಂಜೆ 5 ಗಂಟೆಗೆ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಆನ್ಲೈನ್ ಮೂಲಕ ತಮ್ಮ ಬೌದ್ಧಿಕ ವರ್ಗ ನಡೆಸಿಕೊಡಲಿದ್ದಾರೆ. ನಾಗಪುರದ ಸಂಘದ ಕೇಂದ್ರ ಕಚೇರಿಯಿಂದ ಆನ್ಲೈನ್ ಮೂಲಕ ದೇಶಾದ್ಯಂತ ಇರುವ ಸ್ವಯಂಸೇವಕರು ಹಾಗು ಹಿತೈಷಿಗಳು ಮತ್ತು ಅವರ ಕುಟುಂಬದವರನ್ನು ಉದ್ದೇಶಿಸಿ ಮಾತನಾಡಲಿರುವ ಸರಸಂಘಚಾಲಕರು “ವರ್ತಮಾನ ಸನ್ನಿವೇಶದಲ್ಲಿ ನಮ್ಮ ಪಾತ್ರ” ಕುರಿತು ಸ್ವಯಂಸೇವಕರು ಹಾಗೂ ಸಮಾಜ ಬಂಧುಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.
ಸಾಮಾನ್ಯವಾಗಿ ವಿಜಯದಶಮಿಯ ಸಂದರ್ಭದಲ್ಲಿ ಬಿಟ್ಟರೆ ಕೇವಲ ವಿಶೇಷ ಸಂದರ್ಭದಲ್ಲಿ ಮಾತ್ರ ಸರಸಂಘಚಾಲಕರ ಸಾರ್ವಜನಿಕ ಬೌದ್ಧಿಕ ವರ್ಗ ಇರುತ್ತದೆ. ಕೊರೋನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಅಖಿಲ ಭಾರತೀಯ ಪ್ರತಿನಿಧಿ ಸಭಾದಂತಹ ಪ್ರಮುಖ ಸಭೆಯನ್ನು ರದ್ದುಗೊಳಿಸಿದ್ದ ಸಂಘ ನಂತರ ಏಪ್ರಿಲ್-ಮೇ ತಿಂಗಳಲ್ಲಿ ದೇಶದಾದ್ಯಂತ ನಡೆಯಬೇಕಿದ್ದ ತನ್ನ ಸಂಘ ಶಿಕ್ಷಾ ವರ್ಗಗಳನ್ನು ಮುಂದೂಡಿದೆ. ಆದರೆ ಸ್ವಯಂಸೇವಕರ ಮೂಲಕ ಸಂಘ ದೇಶದಾದ್ಯಂತ ಕೊರೋನಾ ಸಾಂಕ್ರಾಮಿಕದ ಪೀಡಿತರ ಸೇವೆಯಲ್ಲಿ ತೊಡಗಿಗೊಂಡಿದೆ. ದೇಶದಲ್ಲಿನ ಲಕ್ಷಾಂತರ ಜನರಿಗೆ ಸಂಕಷ್ಟದ ಈ ಸಮಯದಲ್ಲಿ ಇದರಿಂದ ಉಪಯೋಗವಾಗಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ನಡೆಯಲಿರುವ ಸರಸಂಘಚಾಲಕರ ಬೌದ್ಧಿಕ ವರ್ಗ ಮಹತ್ವ ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.