ನವದೆಹಲಿ: ಅನಿಲ್ ಕುಂಬ್ಳೆ ಭಾರತೀಯ ಕ್ರಿಕೆಟ್ ಲೋಕ ಕಂಡ ಅಪ್ರತಿಮ ಆಟಗಾರ. ದವಡೆಯಲ್ಲಿ ರಕ್ತಸೋರುತ್ತಿದ್ದರೂ ಕೆಚ್ಚೆದೆಯಿಂದ ಬೌಲಿಂಗ್ ಮಾಡಿ ವಿಕೆಟ್ ಕಬಳಿಸಿದ್ದ ಧೀರ. ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ತಾವು ನಡೆಸಿಕೊಟ್ಟ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ಅವರಿಗೆ ಸ್ಪೂರ್ತಿ ತುಂಬಲು ಕುಂಬ್ಳೆ ಅವರ ಉದಾಹರಣೆಯನ್ನು ನೀಡಿದ್ದರು.
2002ರಲ್ಲಿ ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದವಡೆಗೆ ಗಾಯ ಮಾಡಿಕೊಂಡರೂ ಹೋರಾಟ ಮನೋಭಾವವನ್ನು ಕೈಬಿಡದ ಅನಿಲ್ ಕುಂಬ್ಳೆ ಗಾಯವನ್ನು ಲೆಕ್ಕಿಸದೇ ಬೌಲಿಂಗ್ ಮಾಡಿ ಬ್ರಿಯಾನ್ ಲಾರಾ ಅವರ ಅಮೂಲ್ಯ ವಿಕೆಟ್ ಅನ್ನು ಕಬಳಿಸಿದ್ದರು.
ಮಕ್ಕಳೊಂದಿಗೆ ಮಾತನಾಡುತ್ತಾ ಮೋದಿಯವರು, “2002ರಲ್ಲಿ ಭಾರತೀಯ ತಂಡವು ವೆಸ್ಟ್ಇಂಡೀಸ್ಗೆ ಆಡಲು ತೆರಳಿತ್ತು. ಆ ಸಮಯದಲ್ಲಿ ನಮ್ಮ ಅತ್ಯುತ್ತಮ ಬೌಲರ್ ಅನಿಲ್ ಕುಂಬ್ಳೆ ಅವರಿಗೆ ಬೌನ್ಸರ್ ದಾಳಿಯಿಂದ ದವಡೆಗೆ ಪೆಟ್ಟಾಗಿತ್ತು. ಮುಖದಲ್ಲಿ ಬ್ಯಾಂಡೇಜ್ ಹಾಕಲಾಗಿತ್ತು. ದವಡೆಗೆ ಏಟಾದಾಗ ಅವರ ನೋವನ್ನು ನೀವೇ ಊಹಿಸಬಹುದು. ದಂತಕ್ಕೆ ಸ್ವಲ್ಪ ಏಟಾದಾಗ ಎಷ್ಟೊಂದು ನೋವಾಗುತ್ತದೆ. ಅನಿಲ್ ಬೌಲಿಂಗ್ ಮಾಡಬಲ್ಲರೇ ಇಲ್ಲವೇ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕುಂಬ್ಳೆ ತಮ್ಮ ಗಾಯ ಹಾಗೂ ನೋವನ್ನು ಲೆಕ್ಕಿಸಲಿಲ್ಲ. ಆಳುತ್ತಾ ಕುಳಿತುಕೊಳ್ಳಲಿಲ್ಲ. ಹಾಗೊಂದು ವೇಳೆ ಅವರು ಆಡದಿರುತ್ತಿದ್ದರೂ ಯಾರೂ ಕೂಡಾ ಅವರನ್ನು ತೆಗಳುತ್ತಿರಲಿಲ್ಲ. ಆದರೂ ತಮ್ಮ ಕರ್ತವ್ಯ ಎಂಬುದನ್ನು ಅರಿತು ಅನಿಲ್ ಕುಂಬ್ಳೆ ಆಡಿದರು. ನೋವಾದರೂ ಪರವಾಗಿಲ್ಲ ಮೈದಾನಕ್ಕಿಳಿಯುವ ಅಚಲ ನಿರ್ಧಾರ ತೆಗೆದುಕೊಂಡರು. ನಿಮಗೆ ಗೊತ್ತಿರಬಹುದು ಅಂದು ಬ್ರಿಯಾನ್ ಲಾರಾ ವಿಕೆಟ್ ಪಡೆಯುವುದು ದೊಡ್ಡ ಸಾಧನೆ ಎಂದೇ ಪರಿಗಣಿಸಲಾಗುತ್ತಿತ್ತು. ಆದರೆ ಗಾಯದಲ್ಲೂ ಕುಂಬ್ಳೆ ಲಾರಾ ವಿಕೆಟ್ ಪಡೆದು ಪಂದ್ಯದ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದರು. ಓರ್ವ ವ್ಯಕ್ತಿ ತಮ್ಮ ಸಂಕಲ್ಪದಿಂದ ಇತರರಿಗೂ ಹುರಿದುಂಬಿಸಲು ಹೇಗೆ ಕಾರಣವಾಗುತ್ತಾರೆ ಅವರೇ ಸಾಕ್ಷಿ. ಇಂತಹ ಹಲವು ಘಟನೆಗಳು ನಿಮ್ಮ ಮುಂದಿದೆ” ಎಂದಿದ್ದರು.
ಮಕ್ಕಳಿಗೆ ಸ್ಫೂರ್ತಿ ನೀಡುವ ಸಲುವಾಗಿ ಮೋದಿ ಅನಿಲ್ ಕುಂಬ್ಳೆ ಉಲ್ಲೇಖವನ್ನು ನೀಡಿದ್ದರು. ಎಂತಹ ಸಂದರ್ಭದಲ್ಲೂ ಎದೆಗುಂದಬಾರದು ಎಂಬುದು ಅವರ ಸಂದೇಶವಾಗಿತ್ತು.
ನರೇಂದ್ರ ಮೋದಿಯವರು ತಮ್ಮನ್ನು ಉಲ್ಲೇಖಿಸಿರುವ ಬಗ್ಗೆ ಸಂತೋಷಗೊಂಡಿರುವ ಅನಿಲ್ ಕುಂಬ್ಳೆ, ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಣೆ ಮಾಡಿದ್ದಾರೆ.
ಟ್ವಿಟ್ ಮಾಡಿರುವ ಕುಂಬ್ಳೆ, “ಪರೀಕ್ಷಾ ಪೇ ಚರ್ಚಾದಲ್ಲಿ ಉಲ್ಲೇಖಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಪರೀಕ್ಷೆ ಬರೆಯುವವರಿಗೆ ಆಲ್ ದಿ ಬೆಸ್ಟ್” ಎಂದಿದ್ದಾರೆ.
Honoured to have been mentioned in #ParikshaPeCharcha2020 Thankyou Hon. PM @narendramodi ji. Best wishes to everyone writing their exams. pic.twitter.com/BwsMXDgemD
— Anil Kumble (@anilkumble1074) January 22, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.