ತಿರುವನಂತಪುರಂ: ತನಗೆ ಮಾಹಿತಿ ನೀಡದೆಯೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿರುವ ಕೇರಳ ಸರ್ಕಾರದ ಕ್ರಮವನ್ನು ಅಲ್ಲಿಯ ಗವರ್ನರ್ ಆರೀಫ್ ಮೊಹಮ್ಮದ್ ಖಾನ್ ತೀವ್ರವಾಗಿ ಖಂಡಿಸಿದ್ದಾರೆ. ಎಡ ಸರ್ಕಾರ ಕಾನೂನು ಉಲ್ಲಂಘಿಸಿದೆ ಎಂದು ಹೇಳಿರುವ ಅವರು, ಈ ಬಗ್ಗೆ ಪಿನರಾಯಿ ವಿಜಯನ್ ಸರ್ಕಾರ ನೀಡಿರುವ ವಿವರಣೆಯನ್ನು ತಿರಸ್ಕರಿಸಿದ್ದಾರೆ.
ಪಿನರಾಯಿ ವಿಜಯನ್ ನೇತೃತ್ವದ ಸರ್ಕಾರದಿಂದ ಈ ಬಗ್ಗೆ ವರದಿ ಕೇಳಿರುವ ಅವರು, ನಾನು ಯಾವುದೇ ಕಾರಣಕ್ಕೂ ಮೌನ ಪ್ರೇಕ್ಷಕನಾಗಿ ಉಳಿಯುವುದಿಲ್ಲ ಎಂದಿದ್ದಾರೆ. ಅಲ್ಲದೇ, ಸರ್ಕಾರದ ಯಾವುದೇ ವಿವರಣೆ ನನಗೆ ತೃಪ್ತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಕೇರಳದ ಮುಖ್ಯ ಕಾರ್ಯದರ್ಶಿ ಟಾಮ್ ಜೋಸ್ ಅವರರು ರಾಜ ಭವನಕ್ಕೆ ತೆರಳಿ ಖಾನ್ ಅವರನ್ನು ಭೇಟಿಯಾಗಿ ರಾಜ್ಯ ಸರ್ಕಾರವು ಕೇಂದ್ರದ ಸಿಎಎ ವಿರುದ್ಧ ಮೊಕದ್ದಮೆ ಹೂಡಿದ ಕಾರಣಗಳ ಬಗ್ಗೆ ವಿವರಣೆ ನೀಡಿದ ನಂತರ ರಾಜ್ಯಪಾಲರಿಂದ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸರ್ಕಾರ ಉದ್ದೇಶಪೂರ್ವಕವಾಗಿ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಜೋಸ್ ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಸರ್ಕಾರದ ಯಾವುದೇ ವಿವರಣೆ ನನಗೆ ತೃಪ್ತಿ ನೀಡಲು ಸಾಧ್ಯವಿಲ್ಲ, ಅವರು ಮಾಡಿದ್ದು ಕಾನೂನು ಬಾಹಿರ ಮತ್ತು ಅಕ್ರಮ ಎಂದು ಖಾನ್ ಸುದ್ದಿಗಾರರಿಗೆ ಹೇಳಿದ್ದಾರೆ.
“ನನ್ನ ಅಭಿಪ್ರಾಯವೆಂದರೆ, ಸರ್ಕಾರದ ಕ್ರಮಕ್ಕೆ ಅನುಮೋದನೆಯ ಅಗತ್ಯವಿತ್ತು. ಅವರು ನನಗೆ ಮಾಹಿತಿ ನೀಡದೆ ಸುಪ್ರೀಂ ಕೋರ್ಟ್ಗೆ ಹೋಗಿದ್ದಾರೆ. ಅದು ಕಾನೂನುಬಾಹಿರ ಕೃತ್ಯವಾಗಿದೆ, ಅವರು ಕಾನೂನುಬದ್ಧವಾಗಿ ನಡೆದುಕೊಂಡಿಲ್ಲ. ಆದ್ದರಿಂದ ಅವರ ಯಾವುದೇ ವಿವರಣೆಯು ನನ್ನನ್ನು ತೃಪ್ತಿಪಡಿಸುವುದಿಲ್ಲ” ಎಂದು ಖಾನ್ ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುವ ವಿಷಯಗಳು ಬಂದಾಗ, ವ್ಯವಹಾರ ನಿಯಮ 34 (2) ಉಪವಿಭಾಗ 5 ರ ಪ್ರಕಾರ ರಾಜ್ಯ ಸರ್ಕಾರಗಳು ರಾಜ್ಯಪಾಲರಿಗೆ ತಿಳಿಸಬೇಕು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.