ಗಾಂಧೀನಗರ: ಸಾವು ಎನ್ನುವುದು ಯಾವುದೇ ಕ್ಷಣದಲ್ಲಿ ಬರುವಂತಹದ್ದು. ಅನುಮತಿ ಕೇಳಿ ಬರುವ ಪರಿಪಾಠ ಸಾವಿಗಿಲ್ಲ. ಹೀಗಿರುವಾಗ ವೈದ್ಯರು ಯಾವುದೇ ಕ್ಷಣದಲ್ಲಿ ಸಾವು ಸಂಭವಿಸಬಹುದು ಎಂದು ಷರಾ ಬರೆದು ಬಿಟ್ಟರೆ ಹೇಗಿರಬಹುದು ನಮ್ಮ ಜೀವನ? ಅದರಲ್ಲೂ ಮಾರಕ ಕಾಯಿಲೆಗಳನ್ನು ಬೆನ್ನಿಗೆ ಕಟ್ಟಿಕೊಂಡು ಬದುಕುವುದು ದುಸ್ತರವೇ ಸರಿ. ಕೆಲವರಂತೂ ಆ ಸಾವಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವವರಿರುತ್ತಾರೆ. ಪರಿಸ್ಥಿತಿ ಹೀಗಿರುವಾಗ ಇಲ್ಲೊಬ್ಬಳು ಹೆಣ್ಣುಮಗಳು ಸಾವಿನ ಬಾಗಿಲಿನಲ್ಲಿ ನಿಂತರೂ ಜಗತ್ತಿಗೆ ಮಾದರಿಯಾಗಿ ದಿನ ದೂಡುತ್ತಿದ್ದಾಳೆ.
ಗುಜರಾತಿನವಳಾದ ಆಕೆಯ ಹೆಸರು ಶ್ರುಚಿ ವಾಡಲಿಯಾ ವಯಸ್ಸು ಈಗ 27, ಎಲ್ಲರಂತಿದ್ದಳು. ಒಂದು ದಿನ ಗೆಳತಿಯೊಂದಿಗೆ ಮಾತನಾಡುತ್ತಿರುವಾಗಲೇ ತಲೆಸುತ್ತು ಬಂದು ಬಿದ್ದಳು. ವೈದ್ಯರು ಬ್ರೈನ್ ಟ್ಯೂಮರ್ ಖಾಯಿಲೆ ಆವರಿಸಿರುವುದನ್ನು ಖಚಿತ ಪಡಿಸಿದರು. ಆಕೆಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಭಾಸವಾಯಿತು. 25 ಕ್ಕೂ ಹೆಚ್ಚು ವೈದ್ಯರ ಬಳಿ ಪರೀಕ್ಷಿಸಲಾಯಿತು. ಬ್ರೈನ್ ಟ್ಯೂಮರ್ ಕೊನೆಯ ಹಂತ ತಲುಪಿತ್ತು, ಯಾವಾಗ ಪ್ರಾಣಪಕ್ಷಿ ಹಾರಿ ಹೋಗುತ್ತದೆ ಎಂಬುದರ ಕಲ್ಪನೆಯೇ ಇಲ್ಲ. ಅದರೂ ಶ್ರುಚಿ ಧೃತಿಗೆಡಲಿಲ್ಲ. ತನ್ನ ಸಾವು ಹತ್ತಿರವಿದ್ದಾಗಲೂ ಹಸಿರು ಬೆಳೆಸುವ ಕಾಯಕಕ್ಕೆ ಮನ ಮಾಡಿದಳು.
ಮಾರಕ ಕಾಯಿಲೆಯನ್ನು ಎರಡು ವರ್ಷಗಳಿಂದ ಹೊತ್ತುಕೊಂಡ ಶ್ರುಚಿ ವಾಡಲಿಯಾ ಆಸ್ಪತ್ರೆಯಿಂದ ಹೊರಬಂದ ಕೆಲವೇ ದಿನಗಳಲ್ಲಿ ಪರಿಸರ ರಕ್ಷಣೆ, ವಾಯುಮಾಲಿನ್ಯದ ವಿರುದ್ಧ ಹೋರಾಟದಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ಈವರೆಗೆ ಒಟ್ಟು 30,000 ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ. ಅಲ್ಲದೆ ಬೇರೆಯವರನ್ನೂ ಈ ಕೆಲಸಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ. ಹೆಚ್ಚು ದಿನ ಬದುಕುವುದಿಲ್ಲ ಎಂದು ಗೊತ್ತಾದ ಮೇಲಂತೂ ಪೂರ್ಣವಾಗಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
”ನಾನು ಇನ್ನೇನು ಕೆಲವೇ ದಿನಗಳಲ್ಲಿ ಸಾಯಬಹುದು. ಆದರೆ ನಾನು ನೆಟ್ಟಿರುವ ಮರಗಿಡಗಳ ಮೂಲಕ ಜನರ ಉಸಿರಾಗಿ ಇರುತ್ತೇನೆ. ಮರಗಿಡಗಳು ಪರಿಸರವನ್ನು ಸ್ವಚ್ಛವಾಗಿಡುತ್ತವೆ, ಕ್ಯಾನ್ಸರ್, ಬ್ರೇನ್ ಟ್ಯೂಮರ್ನಂತಹ ಮಾರಣಾಂತಿಕ ಕಾಯಿಲೆಗಳನ್ನು ತಡೆಯುತ್ತವೆ ” ಎಂಬುದು ನನ್ನ ಆಶಯ ಎಂದು ಶ್ರುಚಿ ವಾಡಲಿಯಾ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.