ಭುವನೇಶ್ವರ : ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತ ದೃಷ್ಟಿ ವಿಕಲಚೇತನ ವಿದ್ಯಾರ್ಥಿನಿ ತಪಸ್ವಿನಿ ದಾಸ್ ಅವರು ಒರಿಸ್ಸಾ ಸಾರ್ವಜನಿಕ ಸೇವಾ ಆಯೋಗ ನಡೆಸಿದ ಒರಿಸ್ಸಾ ನಾಗರಿಕ ಸೇವಾ ಪರೀಕ್ಷೆ 2018 ರಲ್ಲಿ ಉತ್ತೀರ್ಣರಾಗಿದ್ದಾರೆ.
ತನ್ನ ಗುರಿಯನ್ನು ಸಾಧಿಸಲು ದೃಢ ನಿಶ್ಚಯರಾಗಿದ್ದ ಅವರು, ಪರೀಕ್ಷೆಯಲ್ಲಿ 161 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಪರೀಕ್ಷೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು, ಆದರೆ ಕೇವಲ 218 ಮಂದಿ ಮಾತ್ರ ಅರ್ಹತೆ ಪಡೆದುಕೊಂಡಿದ್ದಾರೆ.
ಎರಡನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಗ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ತಪಸ್ವಿನಿ ಅವರು ವೈದ್ಯರ ನಿರ್ಲಕ್ಷ್ಯದ ಕಾರಣದಿಂದಾಗಿ ಕಣ್ಣು ಕಳೆದುಕೊಳ್ಳಬೇಕಾಯಿತು.
“ನಾನು ಏಳು ವರ್ಷದವಳಿದ್ದಾಗ ತಲೆನೋವು ಉಂಟಾಗಲು ಪ್ರಾರಂಭಿಸಿತು ಮತ್ತು ನನ್ನ ದೃಷ್ಟಿ ಕ್ರಮೇಣ ಕಡಿಮೆಯಾಯಿತು. ನನ್ನ ಕುಟುಂಬವು ನನ್ನನ್ನು ವೈದ್ಯರ ಬಳಿಗೆ ಕರೆದೊಯ್ದರು, ಆದರೂ ನಾನು ಎಡಗಣ್ಣಿನ ದೃಷ್ಟಿ ಕಳೆದುಕೊಂಡೆ ಮತ್ತು ಬಲ ಕಣ್ಣು ಭಾಗಶಃ ದೃಷ್ಟಿ ಕಳೆದುಕೊಂಡಿತು. ಆದರೀಗ ನನ್ನ ಬಲ ಕಣ್ಣು ಕೂಡ ಸಂಪೂರ್ಣ ದೃಷ್ಟಿ ಕಳೆದುಕೊಂಡಿದೆ “ಎಂದು ತಪಸ್ವಿನಿ ಹೇಳುತ್ತಾರೆ.
ತನ್ನ ಸ್ಫೂರ್ತಿದಾಯಕ ಸಾಧನೆಯ ಕುರಿತು ಮಾತನಾಡಿರುವ ಆಕೆ, “ನಾನು ಇದನ್ನು ಯಶಸ್ಸು ಎಂದು ನೋಡುವುದಿಲ್ಲ, ಇದನ್ನು ನನ್ನ ಗೆಲುವು ಎಂದು ನಾನು ನೋಡುತ್ತೇನೆ. ಯಶಸ್ಸಿನ ಹಾದಿಯಲ್ಲಿ ಇದು ನನ್ನ ಮೊದಲ ಹೆಜ್ಜೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಒರಿಸ್ಸಾದ ರಾಜ್ಯ ವಿಕಲಚೇತನರ ಆಯುಕ್ತ ಸುಲೋಚನಾ ದಾಸ್ ಅವರು ಆಕೆಯ ಸಾಧನೆಯನ್ನು ಶ್ಲಾಘಿಸಿದರು ಮತ್ತು ಆಕೆ ನಮ್ಮ ರಾಜ್ಯದ ಆಡಳಿತ ಸೇವಾ ಅಧಿಕಾರಿಯಾಗಿರುವ ಮೊದಲ ದೃಷ್ಟಿ ವಿಕಲಚೇತನ ಮಹಿಳೆ ಎಂದು ಕೊಂಡಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.