ನವದೆಹಲಿ: ಇರಾನ್ ಮತ್ತು ಅಮೆರಿಕಾದ ನಡುವೆ ತಲೆದೋರಿರುವ ಉದ್ವಿಗ್ನ ಪರಿಸ್ಥಿತಿ ಯುದ್ಧ ಭೀತಿಯನ್ನು ಸೃಷ್ಟಿ ಮಾಡಿದೆ. ಈ ಹಿನ್ನಲೆಯಲ್ಲಿ ಒಂದು ವೇಳೆ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾದರೆ ಇಸ್ಲಾಮಿಕ್ ರಾಷ್ಟ್ರದಲ್ಲಿ ನೆಲೆಸಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರಲು ಐಎನ್ಎಸ್ ತ್ರಿಖಂಡ್ ಅನ್ನು ನಿಯೋಜಿಸಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, “ಸೆಪ್ಟೆಂಬರ್ 2019 ರಿಂದ ಒಮನ್ ಕೊಲ್ಲಿಯಲ್ಲಿರುವ ಭಾರತೀಯ ನೌಕಾ ಹಡಗು ಐಎನ್ಎಸ್ ತ್ರಿಖಂಡ್, ಅಗತ್ಯವಿದ್ದಲ್ಲಿ ಭಾರತೀಯರನ್ನು ಸ್ಥಳಾಂತರಿಸಲು ನಿಯೋಜನೆಗೊಳ್ಳಲಿದೆ” ಎಂದಿದ್ದಾರೆ.
ತಲ್ವಾರ್-ಕ್ಲಾಸ್ ಫ್ರಿಗೇಟ್ ಆಗಿರುವ ಐಎನ್ಎಸ್ ತ್ರಿಖಂಡ್ ಅನ್ನು ರಷ್ಯಾದ ಯಂತರ್ ಶಿಪ್ಯಾರ್ಡ್ನಲ್ಲಿ ನಿರ್ಮಿಸಲಾಗಿದ್ದು, ಇದನ್ನು ಜೂನ್ 29, 2013 ರಂದು ಭಾರತೀಯ ನೌಕಾಪಡೆಗೆ ನಿಯೋಜಿಸಲಾಗಿದೆ. ಗರಿಷ್ಠ 30 ನಾಟ್ಸ್ ವೇಗದಲ್ಲಿ (ಗಂಟೆಗೆ 56 ಕಿಲೋಮೀಟರ್) ಸಾಮರ್ಥ್ಯ ಹೊಂದಿರುವ ಐಎನ್ಎಸ್ ತ್ರಿಖಂಡ್ 14 ನಾಟ್ಸ್ಗೆ 4,850 ನಾಟಿಕಲ್ ಮೈಲುಗಳ ವ್ಯಾಪ್ತಿಯನ್ನು ಹೊಂದಿದೆ. ಈ ಯುದ್ಧನೌಕೆ 18 ಅಧಿಕಾರಿಗಳು ಸೇರಿದಂತೆ 180 ನೌಕಾ ಸಿಬ್ಬಂದಿಯನ್ನು ಹೊಂದಿದೆ.
ಪ್ರಸ್ತುತ ಒಮನ್ ಕೊಲ್ಲಿಯಲ್ಲಿ ಈ ಯುದ್ಧ ನೌಕೆ ಇದ್ದು, ಅಗತ್ಯಬಿದ್ದರೆ ಇದನ್ನು ಇರಾನ್-ಇರಾಕ್ ದೇಶಗಳಲ್ಲಿ ಇರುವ ಭಾರತೀಯರನ್ನು ರಕ್ಷಣೆ ಮಾಡಲು ಬಳಸಿಕೊಳ್ಳುವುದಾಗಿ ವಿದೇಶಾಂಗ ಸಚಿವಾಲಯ ಹೇಳಿದೆ.
ಈಗಾಗಲೇ ಭಾರತೀಯರಿಗೆ ಇರಾನಿಗೆ ಅನಗತ್ಯ ಪ್ರಯಾಣ ಕೈಗೊಳ್ಳದಂತೆ ಮನವಿ ಮಾಡಿಕೊಳ್ಳಲಾಗಿದೆ. ಅಲ್ಲದೇ, ಅಲ್ಲಿ ನೆಲೆಸಿರುವ ಭಾರತೀಯರು ಕೂಡ ಆ ದೇಶದೊಳಗೆ ಪ್ರಯಾಣಿಸುವುದನ್ನು ಆದಷ್ಟು ಕಡಿಮೆ ಮಾಡಬೇಕು ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.