ಗುಂಡಿ ಬಿದ್ದ ರಸ್ತೆಗಳು ವಾಹನ ಚಾಲಕರ ಜೀವಕ್ಕೆ ಅಪಾಯವನ್ನು ತಂದೊಡ್ಡುತ್ತವೆ ಎಂಬುದು ಬಗ್ಗೆ ಅರಿವಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಮಂಗಳೂರಿನಲ್ಲೂ ಇದೇ ಪರಿಸ್ಥಿತಿ, ರಸ್ತೆ ಗುಂಡಿ ಬಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದನ್ನು ಮನಗಂಡ 72 ವರ್ಷದ ಉದ್ಯಮಿಯೊಬ್ಬರು ತಾವೇ ಸ್ವತಃ ಗುಂಡಿ ಮುಚ್ಚುವ ಕಾಯಕದಲ್ಲಿ ನಿರತರಾಗಿದ್ದಾರೆ.
ಗಿಲ್ಬರ್ಟ್ ಡಿಸೋಜಾ, ಸೋಜಾ ಸಂಸ್ಥೆಯ ಮಾಲೀಕರು, ರಸ್ತೆಗುಂಡಿಗಳ ಬಗ್ಗೆ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸಿರುವುದನ್ನು ಕಂಡು ತೀವ್ರ ಬೇಸರಗೊಂಡು ತಾವೇ ಗುಂಡಿ ಮುಚ್ಚುವ ಕಾಯಕಕ್ಕೆ ಇಳಿದಿದ್ದಾರೆ. ಬೆಂದೂರು ಸಮೀಪ ಇವರು ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ಅರ್ಜುನ್ ಮಾಸ್ಕರೇನಸ್ ಮತ್ತು ಅಬ್ದುಲ್ ರಾವೂಫ್, ನಾಸೀರ್ ಮತ್ತು ಜಾಯ್ ಗೋನ್ಸಾಲ್ವೆಸ್ ಸಹಾಯ ಮಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಿಲ್ಬರ್ಟ್ ಅವರು, “ನಾವು ಕಂಕನಾಡಿಯನ್ನು ಪಂಪ್ವೆಲ್ಗೆ ಸಂಪರ್ಕಿಸುವ ರಸ್ತೆಯಲ್ಲಿನ ಗುಂಡಿಗಳನ್ನು ತುಂಬಲು ನಿರ್ಧರಿಸಿದ್ದೇವೆ. ಗುಂಡಿಗಳ ಕಾರಣದಿಂದಾಗಿ ಜನರು ಈ ರಸ್ತೆಯಲ್ಲಿ ಸಂಚರಿಸುವುದನ್ನು ಆದಷ್ಟು ತಪ್ಪಿಸಲು ಪ್ರಾರಂಭಿಸಿದ್ದರು. ಬ್ಯಾರಿಕೇಡ್ ಇರಿಸಲಾಯಿತು, ಆದರೆ ಅದು ಉದ್ದೇಶವನ್ನು ಪೂರೈಸುತ್ತಿಲ್ಲ. ಸ್ವಲ್ಪ ಸಮಯದವರೆಗೆ ಪರಿಸ್ಥಿತಿಯನ್ನು ಗಮನಿಸಿದ ನಂತರ, ನಾವು ಗುಂಡಿಗಳನ್ನು ತುಂಬಲು ನಿರ್ಧರಿಸಿದೆವು. ಗುಂಡಿ ತುಂಬುವುದು ದೊಡ್ಡ ವಿಷಯವಲ್ಲ, ಯಾರು ಬೇಕಾದರೂ ಇದನ್ನು ಮಾಡಬಹುದು” ಎಂದು ಅವರು ಹೇಳುತ್ತಾರೆ.
ನಾಗರಿಕ ಸಮಸ್ಯೆಗಳನ್ನು ನೀಗಿಸುವ ಉದ್ದೇಶದಿಂದ, ಅವರು 1991 ರಲ್ಲಿ ಇಂಡಿಯನ್ ಸರ್ವಿಸ್ ಕ್ಲಬ್ ಅನ್ನು ಪ್ರಾರಂಭಿಸಿದರು. ಅದರ ಮೂಲಕ ಅವರು ಸ್ವಚ್ಛ ನಗರ ಅಭಿಯಾನಗಳನ್ನು ಪ್ರಾರಂಭಿಸಿದರು. ವಾಸ್ ಲೇನ್ ಅನ್ನು ಸ್ವಚ್ಛಗೊಳಿಸುವಲ್ಲಿ ಯಶಸ್ವಿಯಾದರು. ಆರ್ಯ ಸಮಾಜ ರಸ್ತೆಯನ್ನು ಸ್ವಚ್ಛಗೊಳಿಸಲು ಅವರಿಗೆ ಸಾಕಷ್ಟು ಬೆಂಬಲವನ್ನು ಪಡೆಯಲು ಸಾಧ್ಯವಾಗದಿದ್ದಾಗ, ಕ್ಲಬ್ ಅನ್ನು ವಿಸರ್ಜನೆಗೊಳಿಸಿದರು. “ಈ ಬಾರಿ ಬೆಂಬಲವು ಉತ್ತೇಜನಕಾರಿಯಾಗಿದೆ. ಒಂದು ಗುಂಡಿ ತುಂಬಲು 10,000 ರೂ.ಗಿಂತ ಹೆಚ್ಚು ವೆಚ್ಚವಾಗುವುದಿಲ್ಲ, ಆದರೆ ಕೆಲಸವನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕಾಗುತ್ತದೆ. ನಾವು ಗುಂಡಿ ಇನ್ನಷ್ಟು ಅಗಲವಾಗಲು ಅವಕಾಶ ಕಲ್ಪಿಸಿಕೊಡಬಾರದು. ನಾವು ಸುಮಾರು ಮೂರು ಗುಂಡಿಗಳನ್ನು ತುಂಬಿದ್ದೇವೆ ಮತ್ತು ಶೀಘ್ರದಲ್ಲೇ ಇನ್ನಷ್ಟು ಗುಂಡಿಗಳನ್ನು ಮುಚ್ಚುತ್ತೇವೆ. ನಮ್ಮ ಆಂದೋಲನಕ್ಕೆ ನಗರ ಪೊಲೀಸರು ಬೆಂಬಲ ನೀಡಿದ್ದಾರೆ ”ಎಂದು ಗಿಲ್ಬರ್ಟ್ ಹೇಳುತ್ತಾರೆ.
ಗುಂಡಿಗಳನ್ನು ತುಂಬಲು ಅವರು ಕಾಂಕ್ರೀಟ್ ಮಿಶ್ರಣವನ್ನು ಬಳಸುತ್ತಾರೆ. ಭವಿಷ್ಯದಲ್ಲಿ ಇಂತಹ ಗುಂಡಿಗಳನ್ನು ಮುಚ್ಚಲು ಇಂಟರ್ಲಾಕ್ಗಳನ್ನು ಬಳಸಬೇಕೆಂದು ಅವರು ಆಶಿಸಿದ್ದಾರೆ. “ಭವಿಷ್ಯದಲ್ಲಿ ಗುಂಡಿಗಳನ್ನು ತುಂಬಲು ನಾವು ಗ್ರಾನೈಟ್ ತುಂಡುಗಳನ್ನು ಬಳಸಲು ಯೋಜಿಸುತ್ತಿದ್ದೇವೆ. ಇದರಿಂದ, ಮಳೆಗಾಲದಲ್ಲೂ ಗುಂಡಿ ಮುಚ್ಚುವಿಕೆಯನ್ನು ಕೈಗೊಳ್ಳಬಹುದು. ಹೆಚ್ಚಿನ ಯುವಕರು ಮುಂದೆ ಬಂದು ನಮ್ಮ ಕಾರ್ಯಾಚರಣೆಯಲ್ಲಿ ನಮ್ಮೊಂದಿಗೆ ಸೇರಿಕೊಳ್ಳಬೇಕೆಂದು ನಾವು ಆಶಿಸುತ್ತಿದ್ದೇವೆ, ”ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ, ಮಂಗಳೂರಿನ ಕಾನ್ಸ್ಟೆಬಲ್ ಪುಟ್ಟಾರಾಮ ಅವರು ಗುಂಡಿ ಬಿದ್ದ ರಸ್ತೆಯನ್ನು ತುಂಬುವ ಕಾರ್ಯವನ್ನು ಮಾಡಿ ಎಲ್ಲರ ಪ್ರಶಂಸೆಯನ್ನು ಗಳಿಸಿದ್ದರು. ಉತ್ತಮ ಕಾರ್ಯವನ್ನು ಗುರುತಿಸಿ ಗಿಲ್ಬರ್ಟ್ ಅವರ ಸಹೋದರ ಮೈಕೆಲ್ ಅವರಿಗೆ ಬಹುಮಾನವನ್ನೂ ನೀಡಿದ್ದರು.
ರಸ್ತೆ ಗುಂಡಿಗಳ ಕಾರಣದಿಂದಾಗಿ ಹಲವರು ಜೀವವನ್ನು ಕಳೆದುಕೊಂಡಿದ್ದಾರೆ, ಹಲವರು ಗಾಯಗೊಂಡಿದ್ದಾರೆ. ಆದರೂ ಗುಂಡಿ ಮುಚ್ಚುವ ಪ್ರಯತ್ನಗಳು ನಡೆಯುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯವನ್ನು ವಹಿಸಿದಾಗ ಅವರನ್ನು ಎಚ್ಚರಿಸಬೇಕಾದ ಹೊಣೆ ನಾಗರಿಕರದ್ದಾಗಿರುತ್ತದೆ. ಹೋರಾಟ, ಪ್ರತಿಭಟನೆಗಳಿಂದಲೇ ಎಲ್ಲವೂ ನಡೆಯುವುದಿಲ್ಲ, ಕೆಲವೊಮ್ಮೆ ಗಾಂಧಿ ಮಾರ್ಗವನ್ನು ಅನುಸರಿಸಿ ಚುರುಕು ಮುಟ್ಟಿಸಬೇಕಾಗುತ್ತದೆ. ಅಂತಹ ಕಾರ್ಯವನ್ನೇ ಗಿಲ್ಬರ್ಟ್ ಮಾಡುತ್ತಿದ್ದಾರೆ. ಅವರ ಕಾರ್ಯದಿಂದಾದರೂ ಎಚ್ಚೆತ್ತು ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚಲಿ ಎಂಬುದು ಜನರ ಆಶಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.