ಲಾನ್ ಗ್ಟಲಾಯ್ ಮಿಜೋರಾಂನ ಅತ್ಯಂತ ಹಿಂದುಳಿದ ಮತ್ತು ವಿಪತ್ತು ಪೀಡಿತ ಜಿಲ್ಲೆ. ಮಳೆಗಾಲದ ವೇಳೆಗೆ ಇಲ್ಲಿ 170 ಗ್ರಾಮಗಳ ಪೈಕಿ 40 ಗ್ರಾಮಗಳು ಸಂಪೂರ್ಣ ಸಂಪರ್ಕವನ್ನು ಕಳೆದುಕೊಳ್ಳುತ್ತವೆ. ಆಹಾರ ಸಾಮಾಗ್ರಿಗಳು ಇಲ್ಲಿಗೆ ತಲುಪಲು ದಿನಗಟ್ಟಲೆ ತೆಗೆದುಕೊಳ್ಳುತ್ತವೆ. ಹಣ್ಣು, ತರಕಾರಿಗಳು ಇಲ್ಲಿಗೆ ಬರುವ ವೇಳೆಗೆ ಒಣಗಿ ಹೋಗಿರುತ್ತವೆ. ಮಾತ್ರವಲ್ಲ ಇವುಗಳ ಬೆಲೆ ಕೂಡ ಗಗನಮುಖಿಯಾಗಿರುತ್ತದೆ.
ಇಲ್ಲಿಗೆ ನೇಮಕಗೊಳ್ಳುವ ಐಎಎಸ್ ಅಧಿಕಾರಿಗಳು, ಜಿಲ್ಲಾ ಕೇಂದ್ರಗಳು ಮತ್ತು ರಾಜ್ಯದ ರಾಜಧಾನಿ ನಡುವಿನ ದೂರವನ್ನ ಲೆಕ್ಕ ಹಾಕುತ್ತಿದ್ದರು. ಯಾಕೆಂದರೆ, ಜಿಲ್ಲಾ ಕೇಂದ್ರಗಳು ಸ್ವಾವಲಂಬಿಯಾಗಿರಲಿಲ್ಲ ಎಲ್ಲದಕ್ಕೂ ರಾಜಧಾನಿಯನ್ನೇ ಅವಲಂಬಿಸಬೇಕಿತ್ತು. ಈ ಜಿಲ್ಲೆ ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಅಪಾರ ಸಂಖ್ಯೆಯ ಮಕ್ಕಳನ್ನು ಹೊಂದಿತ್ತು. ಐದು ವರ್ಷಕ್ಕಿಂತ ಕೆಳಗಿನ ಶೇ.22ರಷ್ಟು ಮಕ್ಕಳು ಇಲ್ಲಿ ಕಡಿಮೆ ತೂಕ ಸಮಸ್ಯೆಯಿಂದ ಬಳಲುತ್ತಿದ್ದರು.
ಆದರೆ ಈ ಜಿಲ್ಲೆಗೆ ಐಎಎಸ್ ಅಧಿಕಾರಿ ಶಶಾಂಕ ಅಳೆ ಅವರು ಡೆಪ್ಯೂಟಿ ಕಮಿಷನರ್ ಆಗಿ ನೇಮಕಗೊಂಡ ಬಳಿಕ ನಿಧಾನಕ್ಕೆ ಈ ಜಿಲ್ಲೆಯಲ್ಲಿ ಬದಲಾವಣೆಯ ಗಾಳಿ ಬೀಸಿತು.
ಈ ಜಿಲ್ಲೆಯ ಅಪೌಷ್ಠಿಕತೆ ನಿವಾರಣೆಗೆ ಶಶಾಂಕ ಮತ್ತು ಅವರ ತಂಡ ‘ಮೈ ಸ್ಕೂಲ್, ಮೈ ಫಾರ್ಮ್’ ಎಂಬ ವಿಭಿನ್ನ ಉಪಕ್ರಮವನ್ನ ವಿನ್ಯಾಸಗೊಳಿಸಿತು. ಅದನ್ನು ಕೇಂದ್ರ ಸರ್ಕಾರ ಪೋಷಣ್ ಅಭಿಯಾನದೊಂದಿಗೆ ಸಂಯೋಜನೆಗೊಳಿಸಿತು. ಮಕ್ಕಳ ಆಹಾರದ ಮತ್ತು ಪೌಷ್ಠಿಕತೆಯ ವಿಷಯದಲ್ಲಿ ಇಂದು ಈ ಯೋಜನೆ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗುತ್ತಿದೆ.
‘ಮೈ ಸ್ಕೂಲ್, ಮೈ ಫಾರ್ಮ್’ ಕಾರ್ಯಕ್ರಮದಡಿಯಲ್ಲಿ, ಪ್ರತಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ಅಡುಗೆ ಮನೆಗಳನ್ನು ಮತ್ತು ನ್ಯುಟ್ರಿಶನ್ ಗಾರ್ಡನ್ ಗಳನ್ನು ಆರಂಭಿಸಲಾಯಿತು. ಖಾಲಿ ಭೂಮಿಗಳು ಇಲ್ಲದ ಶಾಲೆಗಳಲ್ಲಿ, ಟೆರೆಸ್ ಮೇಲೆಯೇ ಗಾರ್ಡನ್ ಮಾಡಲಾಯಿತು. ಹಣ್ಣು ಮತ್ತು ತರಕಾರಿ ಬೀಜಗಳನ್ನು ಜಿಲ್ಲಾಡಳಿತದಿಂದ ತರಿಸಿ ಇಲ್ಲಿ ಬಿತ್ತನೆ ಮಾಡಲಾಗಿದೆ. ಈಗ ಈ ಅಂಗನವಾಡಿಗಳು ಮತ್ತು ಶಾಲೆಗಳು ತಮ್ಮ ಊಟಕ್ಕೆ ಬೇಕಾದ ತರಕಾರಿಗಳನ್ನು ತಮ್ಮಲ್ಲೇ ಬೆಳೆಯುತ್ತವೆ. ಹೀಗಾಗಿ ಹೊರ ಊರುಗಳಿಂದ ಬರುವ ತರಕಾರಿಗಳಿಗಾಗಿ ತಿಂಗಳುಗಟ್ಟಲೆ ಕಾಯುವ ಪ್ರಮೇಯ ಈಗ ಇವುಗಳಿಗೆ ಇಲ್ಲ.
ಹಳದಿ, ಶುಂಠಿ, ಟೊಮ್ಯಾಟೋ, ಬಟಾಟೆ, ಹಸಿರು ತರಕಾರಿ, ಕ್ಯಾರೆಟ್, ಜೋಳ, ಮೂಲಂಗಿ ಇತ್ಯಾದಿಗಳನ್ನೂ ಈ ಗಾರ್ಡನ್ ಗಳಲ್ಲಿ ಬೆಳೆದು ಎತೇಚ್ಛವಾಗಿ ಅಡುಗೆಗೆ ಬಳಕೆ ಮಾಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ಪೋಷಾಕಾಂಶದ ಪೂರೈಕೆಯಾಗುತ್ತಿದೆ.
ಪ್ರತಿ ಶಾಲೆಯಲ್ಲೂ ಗಾರ್ಡನ್ ಮಾಡಲು 1 ಸಾವಿರ ಚದರ ಅಡಿಯನ್ನು ಮೀಸಲಿಡುವಂತೆ ತಿಳಿಸಲಾಗಿದೆ. ಮಕ್ಕಳನ್ನು ತರಕಾರಿ ಬೆಳೆಯಲು ತೊಡಗಿಸುವ ಜವಾಬ್ದಾರಿಯನ್ನು ಮುಖ್ಯೋಪಾಧ್ಯಾಯರುಗಳಿಗೆ ನೀಡಲಾಗಿದೆ. ಈ ಯೋಜನೆಯಡಿಯಲ್ಲಿ ಮಕ್ಕಳಿಗೆ ಸಾವಯವ ಮಾದರಿಯಲ್ಲಿ ತರಕಾರಿಗಳನ್ನು ಬೆಳೆಯುವುದನ್ನು ಕಲಿಸಿಕೊಡಲಾಗುತ್ತಿದೆ. ಈ ಮೂಲಕ ಅವರಲ್ಲಿ ಪರಿಸರದ ಬಗ್ಗೆ ಕಾಳಜಿಯನ್ನೂ ಮೂಡಿಸಲಾಗುತ್ತಿದೆ.
ಮೊದಲ ಹಂತವಾಗಿ, 213 ಶಾಲೆಗಳು ಮತ್ತು ಅಂಗನವಾಡಿಗಳನ್ನು ಕಾರ್ಯಕ್ರಮದಡಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. 2ನೇ ಹಂತದಲ್ಲಿ, 500 ಶಾಲೆಗಳು ಮತ್ತು ಅಂಗನವಾಡಿಗಳು ಇದಕ್ಕೆ ಸೇರ್ಪಡೆಗೊಳ್ಳಲಿದೆ. ಮೂರನೇ ಹಂತದಲ್ಲಿ, ಹೈನುಗಾರಿಕೆ ಮತ್ತು ಕುಕುಟೋದ್ಯಮಕ್ಕೆ ಉತ್ತೇಜನವನ್ನು ನೀಡಲು ನಿರ್ಧರಿಸಲಾಗಿದೆ.
ಶಶಾಂಕ ಅವರು ಈ ಜಿಲ್ಲೆಯ ಡೆಪ್ಯೂಟಿ ಕಮಿಷನರ್ ಆಗಿ ಅಧಿಕಾರಕ್ಕೆ ಬಂದ ಬಳಿಕ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮ ಇಂದು ಜಿಲ್ಲೆಯ ಮಕ್ಕಳನ್ನು ಅಪೌಷ್ಠಿಕತೆಯಿಂದ ಹೊರಗಿಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.