ನವದೆಹಲಿ: ನೆದರ್ಲ್ಯಾಂಡ್ಸ್ ರಾಜ ವಿಲಿಯಂ-ಅಲೆಕ್ಸಾಂಡರ್ ಮತ್ತು ರಾಣಿ ಮ್ಯಾಕ್ಸಿಮಾ ಐದು ದಿನಗಳ ಭೇಟಿಗಾಗಿ ಭಾನುವಾರ ಭಾರತಕ್ಕೆ ಆಗಮಿಸಿದ್ದಾರೆ. ಇಂದು ರಾಷ್ಟ್ರಪತಿ ಭವನದಲ್ಲಿ ಇವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.
ಡಚ್ ರಾಜ ಮನೆತನದ ದಂಪತಿಗಳು ಭಾನುವಾರ ಐದು ದಿನಗಳ ಭಾರತ ಪ್ರವಾಸಕ್ಕಾಗಿ ನವದೆಹಲಿಗೆ ಆಗಮಿಸಿದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಅವರಿಗೆ ಸಾಂಪ್ರದಾಯಿಕ ಸ್ವಾಗತವನ್ನು ಕೋರಲಾಯಿತು, ಹಲವಾರು ಅಧಿಕಾರಿಗಳು ಇವರನ್ನು ಬರಮಾಡಿಕೊಂಡರು.
2013 ರಲ್ಲಿ ಸಿಂಹಾಸನಕ್ಕೆ ಏರಿದ ಬಳಿಕ ವಿಲಿಯಂ-ಅಲೆಕ್ಸಾಂಡರ್ ಅವರು ಕೈಗೊಳ್ಳುತ್ತಿರುವ ಮೊದಲ ಭಾರತ ಭೇಟಿ ಇದಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಡಚ್ ರಾಜನನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ದೆಹಲಿಯಲ್ಲಿ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹೊರತಾಗಿ, ಇವರಿಬ್ಬರು ಮುಂಬಯಿ ಮತ್ತು ಕೇರಳಕ್ಕೂ ಭೇಟಿ ನೀಡಲಿದ್ದಾರೆ.
ನವದೆಹಲಿಯಲ್ಲಿ ನಡೆಯಲಿರುವ 25 ನೇ ತಂತ್ರಜ್ಞಾನ ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ರಾಯಲ್ ದಂಪತಿಗಳು ಭಾಗವಹಿಸಲಿದ್ದಾರೆ. ನೆದರ್ಲ್ಯಾಂಡ್ಸ್ ಈ ಶೃಂಗಸಭೆಯ ಪಾಲುದಾರ ರಾಷ್ಟ್ರವಾಗಿದೆ.
ಭಾರತ ಮತ್ತು ನೆದರ್ಲ್ಯಾಂಡ್ಸ್ ದ್ವಿಪಕ್ಷೀಯ ವ್ಯಾಪಾರ ವಹಿವಾಟು 12.87 ಬಿಲಿಯನ್ ಡಾಲರ್ (2018-2019) ಆಗಿದೆ. 2000 ಮತ್ತು 2017 ರ ನಡುವೆ 23 ಶತಕೋಟಿ ಡಾಲರ್ಗಳನ್ನು ಭಾರತದಲ್ಲಿ ಹೂಡಿಕೆ ಮಾಡಿರುವ ನೆದರ್ಲ್ಯಾಂಡ್ಸ್ ಭಾರತದ 5 ನೇ ಅತಿದೊಡ್ಡ ಹೂಡಿಕೆದಾರನಾಗಿದೆ.
ನೆದರ್ಲ್ಯಾಂಡ್ಸ್ 235,000 ಭಾರತೀಯ ವಲಸೆಗಾರರಿಗೆ ನೆಲೆಯಾಗಿದೆ, ಇದು ಯುರೋಪಿನ ಮುಖ್ಯ ಭೂಭಾಗವೂ ಹೌದು. ರಾಯಲ್ ದಂಪತಿಗಳ ಈ ಭೇಟಿಯು ಉಭಯ ದೇಶಗಳ ನಡುವೆ ಆರ್ಥಿಕ ಮತ್ತು ರಾಜಕೀಯ ಸಹಕಾರವನ್ನು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.