ಭಾರತದ ಬೀದಿಯಲ್ಲಿ ಯಾವುದೇ ಸಮಯದಲ್ಲಿ ಸುತ್ತಾಡಿದರೂ ಕನಿಷ್ಠ ಒಂದು ಬಳಸಿದ ಪ್ಲಾಸ್ಟಿಕ್ ಬಾಟಲಿಯಾದರೂ ನಮ್ಮ ಕಣ್ಣಿಗೆ ಕಾಣಿಸುತ್ತದೆ. ಕರ್ನಾಟಕದ ಶಿರಸಿ ತೋಟಗಾರಿಕಾ ಕಾಲೇಜಿನ ಪ್ರಾಧ್ಯಾಪಕ ಶಿವಾನಂದ್ ಹೊಂಗಲ್ ಅವರಿಗೂ ನಿತ್ಯ ಪ್ಲಾಸ್ಟಿಕ್ ಬಾಟಲಿಗಳ ದರ್ಶನವಾಗುತ್ತಿತ್ತು. ಆದರೆ ಬಹುತೇಕರಂತೆ ಅವರು ಅದನ್ನು ಕಂಡೂ ಕಾಣದಂತೆ ಹೋಗುವ ಜಾಯಮಾನದವರಲ್ಲ.
ಪ್ರಕೃತಿ ಪ್ರೇಮಿಯಾಗಿರುವ ಅವರಿಗೆ ವಿವೇಚನೆಯಿಲ್ಲದ ಜನರು ಎಲ್ಲೆಂದರಲ್ಲಿ ಕಸ ಹಾಕುವುದನ್ನು ನೋಡಿ ತೀವ್ರ ನೋವಾಗುತ್ತಿತ್ತು ಮತ್ತು ಜವಾಬ್ದಾರಿಯುತ ನಾಗರಿಕರಾಗಿ, ಬಿಸಾಕಿದ ಬಾಟಲಿಗಳನ್ನು ತೆಗೆದುಕೊಂಡು ಹೋಗಿ ಹತ್ತಿರದ ತೊಟ್ಟಿಯಲ್ಲಿ ಹಾಕಿ ಬರುತ್ತಿದ್ದರು.
2018 ರ ಜನವರಿಯಲ್ಲಿ ಕೃಷಿ ವಿಜ್ಞಾನಗಳ ಸಮಾವೇಶಕ್ಕಾಗಿ ಅವರು ಇಸ್ರೇಲ್ಗೆ ಭೇಟಿ ನೀಡುವವರೆಗೂ ಇದು ಮುಂದುವರೆದಿತ್ತು.
ಬಿಸಾಡಬಹುದಾದ ಪ್ಲಾಸ್ಟಿಕ್ ಪ್ಲೇಟು ಮತ್ತು ವಸ್ತುಗಳ ಬಳಕೆಯಲ್ಲಿ ಇಸ್ರೇಲ್ ಎರಡನೇ ಸ್ಥಾನದಲ್ಲಿದೆ ಮತ್ತು ಅದು ಉತ್ಪಾದಿಸುವ ಅರ್ಧದಷ್ಟು ಪ್ಲಾಸ್ಟಿಕ್ ಮಾತ್ರ ಮರುಬಳಕೆಯಾಗುತ್ತದೆ. ಆದರೆ, ಈಗ ಆ ದೇಶವು ಪ್ಲಾಸ್ಟಿಕ್ ಕಡಿತಗೊಳಿಸುವ ಕ್ರಮಗಳನ್ನು ಜಾರಿಗೊಳಿಸುತ್ತಿದೆ.
ಪ್ರತಿ ವರ್ಷ ಕಾಲೇಜು ಕಾರ್ಯಕ್ರಮಗಳಿಗೆ ಬಳಸುವ ನೂರಾರು ನೀರಿನ ಬಾಟಲಿಗಳನ್ನು ಕ್ಯಾಂಪಸ್ನಲ್ಲಿ ಎಸೆಯಲಾಗುತ್ತಿತ್ತು. ನಾನು ಇಸ್ರೇಲ್ಗೆ ಭೇಟಿ ನೀಡಿದಾಗ, ಒಬ್ಬ ಸಾಮಾನ್ಯ ರೈತ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಅವುಗಳಲ್ಲಿ ಅಲಂಕಾರಿಕ ಸಸ್ಯಗಳನ್ನು ಬೆಳೆಸುತ್ತಿರುವುದನ್ನು ನೋಡಿದೆ. ಇದು ಅದ್ಭುತ, ಕೈಗೆಟುಕುವ ಮತ್ತು ಪರಿಸರ ಸ್ನೇಹಿ ಕಲ್ಪನೆ ಎನಿಸಿತು ಎಂದು ಹೊಂಗಲ್ ಹೇಳುತ್ತಾರೆ.
ಅಲ್ಲಿಂದ ಸಸ್ಯ ಬಾಟಲಿಗಳ ಬಗೆಗೆ ಒಲವನ್ನು ಬೆಳೆಸಿಕೊಂಡ ಅವರು ಶೀಘ್ರ ತನ್ನ ಕಾಲೇಜಿನಲ್ಲಿ ಅದನ್ನು ಕಾರ್ಯರೂಪಕ್ಕೆ ತಂದರು.
“ಅದೃಷ್ಟವಶಾತ್, ಬೋಧನಾ ಸಿಬ್ಬಂದಿ ಹೇಗಾದರೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಎಂಬ ತುಡಿತದಲ್ಲಿದ್ದರು. ಈ ವಿಚಾರದ ಬಗ್ಗೆ ನಾವು ವಿದ್ಯಾರ್ಥಿಗಳಿಗೆ ಹೇಳಿದಾಗ, ಅವರಲ್ಲಿ ಹಲವರು ಇದಕ್ಕೆ ಉತ್ಸಾಹವನ್ನು ವ್ಯಕ್ತಪಡಿಸಿದರು” ಎಂದು ಹೊಂಗಲ್ ಹೇಳುತ್ತಾರೆ.
ಈ ವರ್ಷದ ಮೇ ತಿಂಗಳಲ್ಲಿ, ವಿದ್ಯಾರ್ಥಿಗಳು ಕ್ಯಾಂಪಸ್ ಮತ್ತು ಅವರ ನೆರೆಹೊರೆಯಿಂದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಒಟ್ಟು 700 ಜೈವಿಕ ವಿಘಟನೀಯವಲ್ಲದ ಬಾಟಲಿಗಳನ್ನು ಸಂಗ್ರಹಿಸಲಾಯಿತು.
ಪ್ರಾಯೋಗಿಕವಾಗಿ, ಕೆಲವು ಬಾಟಲಿಗಳನ್ನು ಮಾತ್ರ ವಿದ್ಯಾರ್ಥಿಗಳು ಮತ್ತು ಹೊಂಗಲ್ ಜೊತೆ ಸೇರಿ ಅಡ್ಡಲಾಗಿ ಮತ್ತು ಲಂಬವಾಗಿ ಕತ್ತರಿಸಿದರು.
“ಸರಿಯಾಗಿ ತಯಾರಿ ಮಾಡುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಸಾಕಷ್ಟು ಯೂಟ್ಯೂಬ್ ವೀಡಿಯೊಗಳನ್ನು ನೋಡಿದ್ದೇವೆ. ಕೆಲವು ಬಾಟಲಿಗಳಿಗೆ ಮಣ್ಣಿನ ತೂಕವನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೂ, ಇನ್ನು ಕೆಲವು ಬಾಟಲಿಗಳನ್ನು ಸರಿಯಾಗಿ ಕಟ್ ಮಾಡಲು ಬರಲಿಲ್ಲ. ಸರಿಯಾದ ತಂತ್ರವನ್ನು ಕಂಡುಕೊಳ್ಳುವ ಮೊದಲು ನಾವು ಸಾಕಷ್ಟು ಪ್ರಯೋಗಗಳು ಮತ್ತು ತಪ್ಪುಗಳನ್ನು ಮಾಡಿದ್ದೇವೆ ”ಎಂದು ಅವರು ಹೇಳುತ್ತಾರೆ.
ಕಟ್ ಸೈಡ್ ಹೊಂದಿದ ಬಾಟಲಿಗಳಲ್ಲಿ ಕೊತ್ತಂಬರಿ, ಬೇವು, ಪಾಲಕ್ ಮುಂತಾದ ತರಕಾರಿಗಳಿಗೆ ಬಳಸಲಾಗುತ್ತದೆ, ಮತ್ತು ಲಂಬವಾದ ಕಟ್ ಹೊಂದಿರುವ ಬಾಟಲಿಗಳನ್ನು ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿ ಮುಂತಾದ ಸಸ್ಯಗಳನ್ನು ಬೆಳೆಸಲು ಬಳಸಲಾಯಿತು.
ವಿದ್ಯಾರ್ಥಿಗಳನ್ನು ಈ ಕಾರ್ಯಕ್ಕೆ ಗುಂಪುಗಳಾಗಿ ವಿಂಗಡಿಸಲಾಗಿದೆ, ಮತ್ತು ಪ್ರತಿ ತಂಡಕ್ಕೆ ಬಾಟಲಿಗಳನ್ನು ನೇತಾಡಿಸಲು ನಿರ್ದಿಷ್ಟ ಸ್ಥಳವನ್ನು ನೀಡಲಾಯಿತು.
ಮಣ್ಣಿನ ಬದಲು ಇಲ್ಲಿ ಹಗುರವಾಗಿರುವ ಕೊಕೊ ಪೀಟ್ ಅನ್ನು ಬಳಕೆ ಮಾಡಲಾಗಿದೆ ಮತ್ತು ಸಸ್ಯಗಳನ್ನು ಪೌಷ್ಟಿಕವಾಗಿಸಲು ಸ್ವಲ್ಪ ಪ್ರಮಾಣದ ಸಾವಯವ ಗೊಬ್ಬರವನ್ನು ಸೇರಿಸಲಾಗಿದೆ. ಮಳೆಗಾಲದ ಪ್ರಾರಂಭದಲ್ಲಿ ಬೀಜಗಳನ್ನು ಹಾಕಿದ್ದರಿಂದ, ಇಳುವರಿ ಸಾಕಷ್ಟು ಉತ್ತಮವಾಗಿ ಬಂದಿದೆ.
ಅಪ್ಸೈಕ್ಲಿಂಗ್ ಮತ್ತು ತೋಟಗಾರಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳಿಗೆ ಕೇವಲ ಎರಡು ದಿನಗಳು ಸಾಕಾಯಿತು.
ಈ ಯೋಜನೆಯಿಂದ ಪಡೆದ ಯಶಸ್ಸು ಮತ್ತು ತೃಪ್ತಿಯು ಕಾಲೇಜನ್ನು ಇನ್ನಷ್ಟು ಪ್ರೇರೇಪಿಸಿತು, ತ್ಯಾಜ್ಯ ನಿರ್ವಹಣೆಯನ್ನು ಮಾಡಲು ಇಲ್ಲಿನ ವಿದ್ಯಾರ್ಥಿಗಳು ಮುಂದಾದರು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈಗ ಹಣ್ಣುಗಳು ಮತ್ತು ವಿವಿಧ ತರಕಾರಿಗಳನ್ನು ಬೆಳೆಯಲು ಪ್ಲಾಸ್ಟಿಕ್ ಚೀಲಗಳು, ಸಿಮೆಂಟ್ ಚೀಲಗಳು, ಮರದ ಹಲಗೆಗಳು, ಡಬ್ಬಿಗಳು ಮತ್ತು ಬಕೆಟ್ಗಳನ್ನು ಬಳಕೆ ಮಾಡುತ್ತಿದ್ದಾರೆ. ಇದರಲ್ಲಿ ದ್ವಿದಳ ಧಾನ್ಯಗಳು, ಸೊಪ್ಪು, ಮುಂತಾದ ವಿವಿಧ ತರಕಾರಿಗಳನ್ನೂ ಬೆಳೆಸುತ್ತಿದ್ದಾರೆ.
ಹಳೆಯ ಮತ್ತು ಬಿಸಾಕಿದ ವಸ್ತುಗಳನ್ನು ಉತ್ತಮ ಗುಣಮಟ್ಟ ಮತ್ತು ಪರಿಸರ ಗುಣಮಟ್ಟವನ್ನು ಹೊಂದಿರುವ ಹೊಸ ಉತ್ಪನ್ನಗಳಾಗಿ ಪರಿವರ್ತಿಸುವ ಪ್ರಕ್ರಿಯೆಯೇ ಅಪ್ಸೈಕ್ಲಿಂಗ್ ಆಗಿದೆ.
ಸಾಮಾನ್ಯವಾಗಿ, ಎಸೆಯಲ್ಪಟ್ಟ ಹೆಚ್ಚಿನ ಸರಕುಗಳು ಸಾಕಷ್ಟು ಉಪಯೋಗವನ್ನು ಹೊಂದಿರುತ್ತವೆ. ಅಂತಹ ವಸ್ತುಗಳನ್ನು ಉನ್ನತೀಕರಿಸುವ ಮೂಲಕ, ಅವು ಭೂಮಿಗೆ ಸೇರುವುದನ್ನು ತಡೆಯಬಹುದು. ಅದೇ ಸಮಯದಲ್ಲಿ, ಹೊಸ ಉತ್ಪನ್ನಗಳನ್ನು ಖರೀದಿಸುವ ಬದಲು ವಸ್ತುಗಳನ್ನು ಮರುಬಳಕೆ ಮಾಡುವುದರಿಂದ ವೆಚ್ಚವನ್ನೂ ತಗ್ಗಿಸಬಹುದು, ತ್ಯಾಜ್ಯವನ್ನೂ ತಗ್ಗಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.