ಹಲವು ಕಾರಣಗಳಿಗಾಗಿ ಪೋಷಕರಿಂದ ದೂರವಾದ, ಪೋಷಕರೇ ಇಲ್ಲದ ಸಾಕಷ್ಟು ಸಂಖ್ಯೆಯ ಮಕ್ಕಳು ಸಮಾಜದಲ್ಲಿ ಇದ್ದಾರೆ. ಅಂತಹ ಮಕ್ಕಳ ಬಾಳಿಗೆ ನೆರಳಾಗಿ, ಪೋಷಕರ ಸ್ಥಾನ ತುಂಬಲು ಹಲವು ಸರ್ಕಾರೇತರ ಸಂಘ, ಸಂಸ್ಥೆಗಳು ಶ್ರಮಿಸುತ್ತಿವೆ. ಹುಬ್ಬಳ್ಳಿ ನಗರದ ಕೇಶ್ವಾಪುರ ಬನಶಂಕರಿ ಬಡಾವಣೆಯ ಸೇವಾ ಸದನದಲ್ಲಿರುವ ಸೇವಾ ಭಾರತಿ ಟ್ರಸ್ಟ್ನ ಪ್ರಕಲ್ಪವಾದ ಮಾತೃಛಾಯಾ ಕಲ್ಯಾಣ ಕೇಂದ್ರ ಅಂತಹ ಮಕ್ಕಳಿಗೆ ನೆಲೆ ಕಲ್ಪಿಸಿದ ಸಂಸ್ಥೆಗಳಲ್ಲಿ ಪ್ರಮುಖವಾದುದಾಗಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ, ಜೀವನ ನಡೆಸಲು ಬೇಕಾದ ಸಂಸ್ಕಾರಗಳನ್ನು ಇದು ನೀಡುತ್ತಿದೆ. ಹೊಲಿಗೆ, ಕಂಪ್ಯೂಟರ್ ತರಬೇತಿ ಮುಂತಾದ ಜೀವನ ನಿರ್ವಹಣಾ ತರಬೇತಿಯನ್ನೂ ನೀಡುತ್ತಿದೆ. ಯೋಗಾಸನ, ಸಂಗೀತ, ನೃತ್ಯ, ಭಜನೆ, ಸ್ವಚ್ಛತೆ ಇತ್ಯಾದಿಗಳನ್ನೂ ಇಲ್ಲಿ ಕಲಿಸಲಾಗುತ್ತಿದೆ.
ಇಬ್ಬರು ಯುವತಿಯರಿಗೆ ವಿದ್ಯಾಭ್ಯಾಸವನ್ನು ನೀಡಿ, ಬದುಕುವ ಕಲೆ ಕಲಿಸಿದ ಸೇವಾಭಾರತಿಯು ಅವರಿಬ್ಬರ ಮದುವೆಯನ್ನು ವಿಜೃಂಭಣೆಯಿಂದ ಮಾಡಿದೆ. ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದಲ್ಲಿಯೇ ಬಾಲ್ಯದಿಂದ ಆಡಿ ಬೆಳೆದಿರುವ ಜಾಹ್ನವಿ (24) ಹಾಗೂ ಸಂಜನಾ (20) ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿ ಹೆಗ್ಗದ್ದೆ-ಕೇಶವಳ್ಳಿಯ ಕಿರಣಕುಮಾರ ಹೆಗಡೆ ಅವರನ್ನು ಜಾಹ್ನವಿ ವರಿಸಿದ್ದಾರೆ. ಅದೇ ತಾಲೂಕಿನ ಅಚವೆ ತಾರಿಗದ್ದೆಯ ರವಿಂದ್ರ ಭಟ್ ಅವರು ಸಂಜನಾ ಅವರನ್ನು ಕೈ ಹಿಡಿದಿದ್ದಾರೆ. ಎರಡು ವರರ ಕುಟುಂಬಗಳು ಆರ್ಥಿಕವಾಗಿ ಸಮೃದ್ಧರಿದ್ದು, ಒಳ್ಳೆಯ ಸಂಪ್ರದಾಯಸ್ಥ ಕುಟುಂಬದವರಾಗಿದ್ದಾರೆ. ಎಂಟು ತಿಂಗಳ ಹಿಂದೆಯೇ ವರರು ಈ ಯುವತಿಯರನ್ನು ಭೇಟಿಯಾಗಿದ್ದು, ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದ ಹಿರಿಯರು ಎರಡೂ ಮನೆಯ ಸ್ಥಿತಿಗತಿ ಬಗ್ಗೆ ಪರಿಶೀಲಿಸಿ ಉತ್ತಮ ಕುಟುಂಬ ಅಂತ ನಿರ್ಧರಿಸಿದ ಮೇಲೆಯೇ ವಿವಾಹ ನಿಶ್ಚಯಿಸಿದ್ದಾರೆ.
ಜಾಹ್ನವಿ 1999 ರಿಂದ ಹಾಗೂ ಸಂಜನಾ 2006 ರಿಂದ ಈ ಮಾತೃಛಾಯಾ ಕೇಂದ್ರದಲ್ಲಿದ್ದಾರೆ. ಜಾಹ್ನವಿ SSLC ವರೆಗೆ ವಿದ್ಯಾಭ್ಯಾಸ ನಡೆಸಿ ಬಳಿಕ ಸೇವಾಭಾರತಿಯ ಬಾಗಲಕೋಟೆಯಲ್ಲಿರುವ ಮಕ್ಕಳ ಕೇಂದ್ರವಾದ ಆಶ್ರಯಧಾಮದಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದಾರೆ. ತಮ್ಮ ಸೇವೆಯ ಮೂಲಕ ಅಲ್ಲಿನ ಮಕ್ಕಳ, ಹಿತೈಷಿಗಳ, ಸ್ವಯಂಸೇವಕರ ಜನಮನವನ್ನು ಗೆದ್ದಿದ್ದಾರೆ. ಇನ್ನೊಬ್ಬರು ಯುವತಿ ಸಂಜನಾ ಅವರು ಹೋಮ್ ನರ್ಸಿಂಗ್ ಕೋರ್ಸನ್ನು ಪೂರೈಸಿದ್ದಾರೆ.
ಇಂದು ಮಧ್ಯಾಹ್ನ 12.45 ಕ್ಕೆ ಈ ಯುವತಿಯರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಪ್ರತಿ ಹೆಣ್ಣುಮಕ್ಕಳಿಗೆ ಮದುವೆಯ ಸಂದರ್ಭದಲ್ಲಿ ಕೊಡುವಂತಹ ಚಿನ್ನದ ಆಭರಣಗಳು, ಬಟ್ಟೆ, ಇತರ ಸಾಮಗ್ರಿಗಳನ್ನು ಕೇಂದ್ರದ ಪ್ರಮುಖರು ಉಡುಗೊರೆಯಾಗಿ ನೀಡಿದ್ದಾರೆ. ಸಕಲ ಸಂಪ್ರದಾಯಗಳೊಂದಿಗೆ ಶಾಂತಣ್ಣ ಕಡಿವಾಳ ದಂಪತಿ ಸಂಜನಾರನ್ನು ಹಾಗೂ ಭಾರತಿ ನಂದಕುಮಾರ (ಸೇವಾ ಭಾರತಿ ಟ್ರಸ್ಟ ಕಾರ್ಯದರ್ಶಿ) ದಂಪತಿ ಜಾಹ್ನವಿ ಅವರನ್ನು ಧಾರೆ ಎರೆದುಕೊಟ್ಟಿದ್ದಾರೆ. ರಘು ಅಕಮಂಚಿ ಅವರು ಜಾಹ್ನವಿಗೆ ಹಾಗೂ ಮಹಾದೇವ ಕರಮರಿ ಅವರು ಸಂಜನಾರಿಗೆ ಸೋದರ ಮಾವನ ಸ್ಥಾನದಲ್ಲಿ ನಿಂತು ವಿವಾಹ ಕಾರ್ಯ ನಡೆಸಿಕೊಟ್ಟಿದ್ದಾರೆ. 2014ರಲ್ಲಿ ಇದೆ ರೀತಿ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದಲ್ಲಿದ್ದ ಯಶೋಧಾರನ್ನು ಕೊಪ್ಪಳಕ್ಕೆ, ಮಾಧುರಿಯನ್ನು ಸುರಪುರಕ್ಕೆ ಮದುವೆ ಮಾಡಿಕೊಡಲಾಗಿತ್ತು. ಈ ಎರಡು ದಂಪತಿಗಳು ತಮ್ಮ ಕುಟುಂಬ ಸಮೇತ ಆಗಮಿಸಿ ವಧು ವರರಿಗೆ ಆಶಿರ್ವದಿಸಿದರು.
ಮದುವೆಯ ಮುನ್ನಾದಿನ ಮಂಗಳವಾರ ಸೇವಾ ಸದನದಲ್ಲಿ ಮದುವೆ ಸಮಾರಂಭದ ವಾತಾವರಣ ಬಲು ಜೋರಾಗಿತ್ತು. ಸದನದಲ್ಲಿ ಚಪ್ಪರ ಹಾಕಿ ಬೆಳಿಗ್ಗೆ ಪೂಜೆ, ಮೆಹಂದಿ ಕಾರ್ಯಕ್ರಮಗಳು ನಡೆದವು. ಮಾತೃಛಾಯ ಮಕ್ಕಳು ಮೆಹಂದಿ ಹಾಕಿಕೊಂಡು ವಿಜೃಂಭಿಸಿದರು. ಸೇವಾ ಭಾರತಿ ಟ್ರಸ್ಟಿನ ಎಲ್ಲ ಸದಸ್ಯರು, ಸುತ್ತಮುತ್ತಲಿನ ಬಡಾವಣೆಗಳ ತಾಯಂದಿರು ಬಂಧುಗಳು ನವ ವಧುವರರಿಗೆ ಆಶಿರ್ವಾದ ಮಾಡಿದರು. ಬಿಜೆಪಿ ಮುಖಂಡ, ಸಚಿವ ಜಗದೀಶ್ ಶೆಟ್ಟರ್ ದಂಪತಿ ಮದುವೆ ಆಗಮಿಸಿ ಶುಭ ಕೋರಿದರು. ಸಂಘದ ಹಿರಿಯ ಪ್ರಚಾರಕರು, ಹಿತೈಷಿಗಳು, ಕಾರ್ಯಕರ್ತರು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದು ವಧು ವರರಿಗೆ ಶುಭ ಹಾರೈಸಿದರು.
ಮಾತೃಛಾಯಾ ಎಂಬ ಹೆಸರೇ ಹೇಳುವಂತೆ ತಾಯಿಯ ಛಾಯೆ (ನೆರಳು) ಅಂದರೆ ತಾಯಿ ಯಾವ ರೀತಿ ಮಕ್ಕಳಿಗೆ ಬದುಕುವ ರೀತಿಯನ್ನು ಕಲಿಸುತ್ತಾಳೋ ಹಾಗೇನೆ ಈ ಪ್ರಕಲ್ಪ ತಂದೆ ತಾಯಿಯರಿಲ್ಲದ ಮಕ್ಕಳಿಗೆ ಸಂಸ್ಕಾರದ ಜೊತೆಗೆ ಬದುಕುವ ರೀತಿಯನ್ನು ಕಲಿಸುತ್ತಿರೋದು ಕಣ್ಮುಂದೆ ಕಾಣುತ್ತಿದೆ. ಮಕ್ಕಳಿಗೆ ತಂದೆ ತಾಯಿಯ ನೆನಪಾಗದಂತೆ ತಾಯಂದಿರ ಪ್ರೀತಿ ಕಾಳಜಿಯನ್ನು ಮಾತೃಛಾಯಾ ನೀಡುತ್ತದೆ. ಹಬ್ಬದ ಸಂದರ್ಭಗಳಲ್ಲಿ ದಾನಿಗಳು ಅಥವಾ ಸಂಸ್ಥೆಯಿಂದ ಹೊಸ ಬಟ್ಟೆಯನ್ನು ಇವರಿಗೆ ಕೊಡಿಸಲಾಗುತ್ತದೆ. ಇಲ್ಲಿಂದ ಸಂಸ್ಕಾರ ಪಡೆದು ಸಿದ್ಧಗೊಂಡ ಮಕ್ಕಳು ಇಲ್ಲಿಂದ ಹೋದ ಮೇಲೆ ಸ್ವಯಂ ಬದುಕನ್ನು ಕಟ್ಟಿಕೊಂಡಿದ್ದಾರೆ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿದ್ದಾರೆ. ಅಂತಹ ಸಂಸ್ಕಾರ ಮಕ್ಕಳಿಗೆ ಸೇವಾಭಾರತಿ ಕಲಿಸುತ್ತಿದೆ. ಇದೆಲ್ಲವೂ ಸಾಧ್ಯವಾಗಿರುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗ ಸಂಸ್ಥೆಯಾದ ಸೇವಾಭಾರತಿಯ ಪ್ರಕಲ್ಪವಾದ ಮಾತೃಛಾಯಾದಿಂದ. ಇಂತಹ ಅನೇಕ ಮಕ್ಕಳಿಗೆ ವಿದ್ಯೆಯ ಜೊತೆಗೆ ಬದುಕು ರೂಪಿಸುತ್ತಿದೆ ಸಂಘದ ಸಂಸ್ಕಾರ.
✍ ಸ್ವಯಂಸೇವಕ, ಬಾಗಲಕೋಟೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.