ನವದೆಹಲಿ: ನಮ್ಮ ದೇಶದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಬೆಲೆ ಇಲ್ಲದಂತಾಗಿದೆ. ರಾಷ್ಟ್ರೀಯ ಮಟ್ಟದ ಬಾಕ್ಸಿಂಗ್ನಲ್ಲಿ ಚಾಂಪಿಯನ್ ಆಗಿದ್ದ ಕ್ರೀಡಾಪಟುವೊಬ್ಬ ಈಗ ಕಸ ಗುಡಿಸುತ್ತಿದ್ದಾನೆ ಎಂದರೆ ನಾವು ಕ್ರೀಡೆಗೆ, ಕ್ರೀಡಾಪಟುಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದೇವೆ ಎಂಬುದು ತಿಳಿಯುತ್ತದೆ.
ರಾಷ್ಟ್ರೀಯ ಬಾಕ್ಸಿಂಗ್ ಆಟಗಾರ ಕೃಷ್ಣ ರಾವತ್ 1987ರಲ್ಲಿ, ತನ್ನ 15ನೇ ವಯಸ್ಸಿನಲ್ಲಿ ಆಲ್ ಇಂಡಿಯಾ ಇನ್ವಿಟೇಶನಲ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಬಂಗಾರದ ಪದಕ ಗೆದ್ದವರು. ಅಂದು ದೇಶ ಅವರನ್ನು ಕೊಂಡಾಡಿತ್ತು. ಆದರೆ ಇಂದು ಅವರ ಸ್ಥಿತಿ ಶೋಚನೀಯವಾಗಿದೆ.
ಈಗ ಹೌರಾದ ಮುನ್ಸಿಪಾಲಿಟಿಯಲ್ಲಿ ಕಸ ಗುಡಿಸುವ ಕೆಲಸ ಮಾಡಿ ಹೊಟ್ಟೆ ಹೊರೆಯುತ್ತಿರುವ ಅವರಿಗೆ, 43 ವರ್ಷ ಪ್ರಾಯ. ದಿನಕ್ಕೆ 200 ರೂಪಾಯಿ ಸಂಪಾದನೆ ಮಾಡಿ ಹೆಂಡತಿ, ೩ ಮಕ್ಕಳು ಮತ್ತು ಟಿಬಿ ಪೀಡಿತ ಸಹೋದರನನ್ನು ಸಾಕುತ್ತಿದ್ದಾರೆ. ಒಂದು ರೂಮಿನ ಮುರುಕಲು ಮನೆಯಲ್ಲಿ ವಾಸಿಸುತ್ತಿದ್ದಾರೆ.
ಬಾಕ್ಸಿಂಗ್ನಲ್ಲಿ ಬೆಳೆಯಬೇಕೆಂಬ ಮಹದಾಸೆ ಇದ್ದರೂ ಸರ್ಕಾರದ ಬೆಂಬಲವಿಲ್ಲದ ಕಾರಣ ಅದು ಸಾಧ್ಯವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಕಸ ಗುಡಿಸುವ ಕಾಯಕ ಮಾಡಬೇಕಾಯಿತು. ತಿಂಗಳಿಗೆ 5 ಸಾವಿರದವರೆಗೆ ದುಡಿಯುತ್ತೇನೆ. ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ಉತ್ತಮ ಶಿಕ್ಷಣ ನೀಡುವುದೂ ಸಾಧ್ಯವಾಗುತ್ತಿಲ್ಲ. ನನ್ನ ಕೆಲಸ ಖಾಯಂಗೊಂಡರೆ ಅನುಕೂಲವಾಗುತ್ತಿತ್ತು ಎಂದು ರಾವತ್ ಹೇಳಿಕೊಳ್ಳುತ್ತಾರೆ.
ತನ್ನ ಕನಸು ಸಾಕಾರಗೊಳ್ಳದ ನೋವು ಅವರಿಗಿದೆ. ಆದರೂ ಸದ್ಯಕ್ಕೆ ಅವರಿಗಿರುವ ಆಸೆ ಮುನ್ಸಿಪಾಲಿಟಿಯಲ್ಲಿನ ತನ್ನ ಕೆಲಸ ಖಾಯಂಗೊಳ್ಳಬೇಕು ಎಂಬುದಷ್ಟೇ.
ಸರ್ಕಾರದ ಮತ್ತು ಜನರ ನಿರ್ಲಕ್ಷ್ಯದಿಂದಾಗಿ ಭಾರತಕ್ಕೆ ಒಬ್ಬ ಉತ್ತಮ ಬಾಕ್ಸರ್ ದೊರೆಯುವ ಅವಕಾಶ ಕೈತಪ್ಪಿದೆ. ಕನಿಷ್ಠ ಈಗಲಾದರೂ ರಾವತ್ ಅವರ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಚಾಂಪಿಯನ್ ಆದವನೂ ಈಗ ಕಸ ಗುಡಿಸಿ ಹೊಟ್ಟೆ ಹೊರೆಯುತ್ತಾನೆ ಎಂದರೆ ಅದಕ್ಕಿಂತ ದುಸ್ಥಿತಿ ಬೇರೆಯಿದೆಯೇ?.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.