ನಾಗ್ಪುರ: ಲಘು ಉದ್ಯೋಗ್ ಭಾರತಿಯು ತನ್ನ ಮೂರು ದಿನಗಳ ಬೆಳ್ಳಿ ಮಹೋತ್ಸವ ವರ್ಷಾಚರಣೆಯ ಕಾರ್ಯಕ್ರಮವನ್ನು ಆಗಸ್ಟ್ 16 ರಿಂದ 18 ರ ವರೆಗೆ ನಾಗ್ಪುರದಲ್ಲಿ ನಡೆಸುತ್ತಿದೆ. ಮೂರು ದಿನಗಳಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಮತ್ತು ಅದರ ಸಮಗ್ರ ನೀತಿಯ ಕುರಿತು ಕಾರ್ಯಕ್ರಮದಲ್ಲಿ ಚರ್ಚೆ ನಡೆಯಲಿದೆ.
ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಆರ್ಎಸ್ಎಸ್ ಸರಸಂಘಚಾಲಕರಾದ ಡಾ. ಮೋಹನ್ ಜೀ ಭಾಗವತ್ ಅವರು ಆಗಸ್ಟ್ 16 ರಂದು ಉದ್ಘಾಟಿಸಲಿದ್ದಾರೆ. ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಮತ್ತು ಕೈಗಾರಿಕೆ ಮತ್ತು ರೈಲ್ವೆ ಸಚಿವರಾದ ಪಿಯೂಷ್ ಗೋಯಲ್ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವರಾದ ಸಂತೋಷ್ ಕುಮಾರ್ ಗಂಗ್ವಾರ್ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ಕಾರ್ಯಕ್ರಮದ ವಿವಿಧ ಸೆಷನ್ಗಳಲ್ಲಿ ಪಾಲ್ಗೊಳ್ಳಲಿದ್ದು, ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.
ಲಘು ಉದ್ಯೋಗ್ ಭಾರತಿಯನ್ನು 1994 ರ ಏಪ್ರಿಲ್ 25 ರಂದು ನಾಗ್ಪುರದಲ್ಲಿ “ರಾಷ್ಟ್ರೋದ್ಧಾರೋ ಲಘು ಉದ್ಯಮೆ” ಎಂಬ ಧ್ಯೇಯ ವಾಕ್ಯದೊಂದಿಗೆ ಸ್ಥಾಪಿಸಲಾಯಿತು. 25 ವರ್ಷಗಳ ಅವಧಿಯಲ್ಲಿ, ಲಘು ಉದ್ಯೋಗ್ ಭಾರತಿ ದೇಶಾದ್ಯಂತ 450 ಜಿಲ್ಲೆಗಳಲ್ಲಿ ನೆಟ್ವರ್ಕ್ ಹೊಂದಿರುವ ಅಖಿಲ ಭಾರತ ಸಂಸ್ಥೆಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಕಾರ್ಮಿಕ, ವಿದ್ಯುತ್, ಪರಿಸರ, ಹಣಕಾಸು ಮತ್ತು ತೆರಿಗೆ ಕುರಿತು ನೀತಿ ರೂಪಿಸಲು ಇಂದು ಲಘು ಉದ್ಯೋಗ್ ಭಾರತಿ ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರವನ್ನು ಸಮೃದ್ಧವಾಗಿಸಲು, ಲಘು ಉದ್ಯೋಗ್ ಭಾರತಿ ಆರ್ಥಿಕ ಮನೋಭಾವದಿಂದ ಕೆಲಸ ಮಾಡುತ್ತಿರುವುದು ಮಾತ್ರವಲ್ಲದೇ, ರಾಷ್ಟ್ರದ ಸರ್ವತೋಮುಖ ಪ್ರಗತಿಗಾಗಿ ಶ್ರಮಿಸುತ್ತಿದೆ.
ಲಘು ಉದ್ಯೋಗ್ ಭಾರತಿಯ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಮೊದಲ ತಲೆಮಾರಿನ ಸಫಲ ಉದ್ಯಮಿಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಕೈಗಾರಿಕಾ ಸಂಘಟನೆಗಳು ಸಮ್ಮೇಳನವನ್ನೂ ಸಹ ಆಯೋಜಿಸಲಿವೆ. ದೇಶದ ವಿವಿಧ ಭಾಗಗಳಿಂದ ಸುಮಾರು 125 ಸಂಘಗಳು ಸಮಾವೇಶಕ್ಕೆ ಆಗಮಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.