ನವದೆಹಲಿ: ಕಾರ್ಗಿಲ್ ಯುದ್ಧ ಆರಂಭವಾಗುವುದಕ್ಕೂ ಕೆಲವೇ ಸಮಯಗಳ ಮೊದಲು ರೈಫಲ್ ಮ್ಯಾನ್ ಸುನಿಲ್ ಜಂಗ್ ಮಹತ್ ಅವರ ಕುಟುಂಬ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಪೂರ್ವಜರ ಮನೆಗೆ ಸ್ಥಳಾಂತರಗೊಳ್ಳುವ ಯೋಜನೆ ಹಾಕುತ್ತಿತ್ತು. ಆದರೆ ಮೇ 15 ರಂದು ಅವರ ಮನೆಯ ಮಗ ಸುನಿಲ್ ಜಂಗ್ ಅವರು ಕಾರ್ಗಿಲ್ನಲ್ಲಿ ಹತ್ಯೆಯಾಗಿದ್ದಾರೆ ಎಂಬ ಸುದ್ದಿ ಬಂತು. ಆಗವರ ವಯಸ್ಸು ಕೇವಲ 19 ವರ್ಷ. ಇದಕ್ಕೂ ಎರಡು ತಿಂಗಳುಗಳ ಮುನ್ನ ಜಂಗ್ ಅವರ 1/11 ಗೋರ್ಖಾ ರೆಜಿಮೆಂಟ್ ಪುಣೆಗೆ ನಿಯೋಜನೆಗೊಂಡಿತ್ತು. ಹೀಗಾಗಿ ಜಂಗ್ ಕುಟುಂಬ ನಾವಿನ್ನು ಲಕ್ನೋದಲ್ಲಿ ಇರುವುದು ಬೇಡ, ಧರ್ಮಶಾಲಾಗೆ ಹೋಗೋಣ ಎಂದು ನಿರ್ಧರಿಸಿತ್ತು.
ಜಂಗ್ ಅವರ ತಾಯಿ ಬೀನಾ ಅವರು ಗ್ಯಾಸ್ ಏಜೆನ್ಸಿ ನಡೆಸುತ್ತಾರೆ. ಕಾರ್ಗಿಲ್ ಹುತಾತ್ಮರ ಪರಿಹಾರದ ಭಾಗವಾಗಿ ಇದನ್ನು ಅವರಿಗೆ ನೀಡಲಾಗಿದೆ. “ಭಾರತೀಯ ಸೇನೆಯನ್ನು ಸೇರುವುದು ಸುನಿಲನ ಬಾಲ್ಯದ ಕನಸಾಗಿತ್ತು” ಎಂದು ಆ ತಾಯಿ ಹೇಳುತ್ತಾರೆ.
ಜಂಗ್ ಅಜ್ಜ ಮೇಜರ್ ಜಂಗ್ ಮಹತ ಅವರು 1962 ರ ಯುದ್ಧ ವೀರರಾಗಿದ್ದಾರೆ. ಆತನ ತಂದೆ ನಾರಾಯಣ್ ಜಂಗ್ 1971ರ ಯುದ್ಧ ವೀರರಾಗಿದ್ದಾರೆ. ಸುನಿಲ್ ಸೇನೆಯನ್ನು ಸೇರಿದ್ದು 1995ರಲ್ಲಿ, ಅದೇ ವರ್ಷ ಅವರ ತಂದೆ ಸೇನೆಯಿಂದ ನಿವೃತ್ತಿ ಹೊಂದಿದರು.
“ಒಂದು ವೇಳೆ ಯುದ್ಧ ನಡೆಯದೇ ಇರುತ್ತಿದ್ದರೆ ನಾವಿಂದು ಧರ್ಮಶಾಲಾದಲ್ಲಿ ಇರುತ್ತಿದ್ದೆವು ಮತ್ತು ಜಂಗ್ ಸುಬೇದಾರ್ ಆಗಿ ಭಡ್ತಿ ಹೊಂದಿರುತ್ತಿದ್ದ” ಎಂದು ಬೀನಾ ಹೇಳುತ್ತಾರೆ. ಅಲ್ಲದೇ, ವೈದ್ಯ ಆಗು, ಶಿಕ್ಷಕ ಆಗು ಎಂದು ಪೀಡಿಸುತ್ತಿದ್ದ ಸಂಬಂಧಿಗಳೊಂದಿಗೆ ಆತ ಗುದ್ದಾಡುತ್ತಿದ್ದ ಎಂದಿದ್ದಾರೆ.
“ಇವತ್ತು ನಿಮ್ಮ ಹೆಸರಿನಿಂದ ನಾನು ಗುರುತಿಸಲ್ಪಟ್ಟಿದ್ದೇನೆ, ಮುಂದೊಂದು ದಿನ ನನ್ನ ಹೆಸರಿನಿಂದ ನೀವು ಗುರುತಿಸಲ್ಪಡುತ್ತೀರಿ ಎಂದು ಹೇಳುತ್ತಿದ್ದ, ಆತನ ಮಾತು ನಿಜವಾಗಿದೆ. ಆತನ ಹೆಸರಿನ ಮೂಲಕ ನಾವಿಂದು ಗುರುತಿಸಲ್ಪಡುತ್ತಿದ್ದೇವೆ” ಎಂದಿದ್ದಾರೆ.
ಜಂಗ್ ಮರಣದ ವೇಳೆ ಅವರ ತಂಗಿ 10ನೇ ತರಗತಿ ಓದುತ್ತಿದ್ದರು. ಇಂದಿಗೂ ಅವರ ಬಳಿ ಇರುವ ಅಣ್ಣ ಬರೆದ ಪತ್ರಗಳಿವೆ. “ಆತ ನಿರಂತರವಾಗಿ ನಮಗೆ ಪತ್ರ ಬರೆಯುತ್ತಿದ್ದ. ನಮ್ಮ ದೇಶ ಯುದ್ಧವನ್ನು ಗೆದ್ದುಕೊಂಡಿತು, ಆದರೆ ನಾನು ನನ್ನ ಅಣ್ಣನನ್ನು ಕಳೆದು ಕೊಂಡೆ” ಎಂದು ಭಾವುಕವಾಗಿ ಅವರು ನುಡಿದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.