ಋಷಿಕೇಶ್: ಋಷಿಕೇಶದಲ್ಲಿ 450 ಅಡಿ ಉದ್ದದ ಕಬ್ಬಿಣದಿಂದ ನಿರ್ಮಿಸಲ್ಪಟ್ಟ ಐತಿಹಾಸಿಕ ಲಕ್ಷ್ಮಣ್ ಝುಲಾ ಸೇತುವೆಯನ್ನು 90 ವರ್ಷಗಳ ಬಳಿಕ ಜುಲೈ 12 ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನದಿಯ ಪಶ್ಚಿಮ ದಂಡೆಯಲ್ಲಿರುವ ಗರ್ಹ್ವಾಲ್ ಜಿಲ್ಲೆಯ ತಪೋವನ್ ಮತ್ತು ಪೂರ್ವ ದಂಡೆಯಲ್ಲಿರುವ ಪೌರಿ ಗರ್ವಾಲ್ ಜಿಲ್ಲೆಯ ಜೊಂಕ್ ಅನ್ನು ಈ ಸೇತುವೆ ಸಂಪರ್ಕಿಸುತ್ತದೆ. ಪ್ರಸ್ತುತ ಈ ಸೇತುವೆಗೆ ಪರ್ಯಾಯವಾಗಿ ಗಾಜಿನ ಅದ್ಭುತ ತೂಗು ಸೇತುವೆಯೊಂದನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಇದು ನಗರದ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಜನರಿಗೆ ಗಾಜಿನ ಸೇತುವೆಯ ಮೇಲೆ ನಡೆಯುವ ರೋಚಕ ಅನುಭವವನ್ನು ಸಹ ನೀಡಲಿದೆ. ಲಕ್ಷ್ಮಣ್ ಝುಲಾ ಸೇತುವೆಯನ್ನು ಗಾಜಿನ ತೂಗು ಸೇತುವೆಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನಗಳು ಆರಂಭವಾಗಿದೆ.
ಐತಿಹಾಸಿಕ ಸೇತುವೆಗೆ ಪರ್ಯಾಯವಾಗಿ ಆಕರ್ಷಕ ಗಾಜಿನ ಸೇತುವೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 50 ಲಕ್ಷ ರೂ. ಗಳ ಬಜೆಟ್ ಅನ್ನು ಈಗಾಗಲೇ ಇದಕ್ಕೆ ನಿಗದಿಪಡಿಸಲಾಗಿದೆ. ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳು ಅದರ ಮೂಲಕ ಹಾದುಹೋಗುವ ರೀತಿಯಲ್ಲಿ ಸೇತುವೆಯನ್ನು ವಿನ್ಯಾಸಗೊಳಿಸಲಾಗುವುದು. ಗಾಜಿನ ಸೇತುವೆಗೆ ಪ್ರವೇಶಿಸಲು ಮೂರು ಚಕ್ರಗಳ ವಾಹನಗಳಿಗೆ ಅಥವಾ ಟೆಂಪೋಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು, ಲಕ್ಷ್ಮಣ್ ಜುಲಾ ರಾಜ್ಯದ ಸಾಂಸ್ಕೃತಿಕ ಪರಂಪರೆಯ ಒಂದು ಭಾಗವಾಗಿದೆ, ಅದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತಜ್ಞರ ವರದಿಯನ್ನು ಆಧರಿಸಿ ಈ ಸೇತುವೆಯನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕೆ ಪರ್ಯಾಯವಾಗಿ ಮತ್ತೊಂದು ಸೇತುವೆ ನಿರ್ಮಿಸಲಾಗುವುದು” ಎಂದಿದ್ದಾರೆ.
ಐತಿಹಾಸಿಕ ಲಕ್ಷ್ಮಣ್ ಝುಲಾ ಸೇತುವೆ ಭಾಗಗಳು ಕುಸಿತದ ಸ್ಥಿತಿಯಲ್ಲಿರುವುದನ್ನು ಕಂಡುಕೊಂಡ ತಜ್ಞರ ತಂಡ, ಅದನ್ನು ಸ್ಥಗಿತಗೊಳಿಸಲು ಶಿಫಾರಸ್ಸು ಮಾಡಿತ್ತು. ಅವರ ಶಿಫಾರಸ್ಸಿನ ಮೇರೆಗೆ ಸೇತುವೆಯನ್ನು ಮುಚ್ಚಲಾಗಿದೆ ಎಂದು ಅಧಿಕಾರಿ ಓಂ ಪ್ರಕಾಶ್ ತಿಳಿಸಿದ್ದಾರೆ.
ಹೆಚ್ಚಿನ ದಟ್ಟಣೆಯನ್ನು ಉಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲದ ಕಾರಣ ಎಲ್ಲಾ ಸಂಚಾರ ಮತ್ತು ಪಾದಚಾರಿಗಳ ಸಂಚಾರಕ್ಕೆ ಸೇತುವೆಯನ್ನು ತಕ್ಷಣ ಮುಚ್ಚಲು ತಂಡ ಶಿಫಾರಸು ಮಾಡಿದೆ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಲಕ್ಷ್ಮಣ್ ಝುಲಾ ಸೇತುವೆಯ ಉದ್ದಕ್ಕೂ ಸಂಚಾರ ಮತ್ತು ಪಾದಚಾರಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ ಮತ್ತು ಸೇತುವೆ ಗೋಪುರಗಳು ಒಂದು ಕಡೆ ವಾಲುತ್ತಿರುವಂತೆ ಕಂಡುಬರುತ್ತಿದೆ. ಹೀಗಾಗಿ ಅದನ್ನು ಸ್ಥಗಿತಗೊಳಿಸಬೇಕಾಗಿದ್ದು ಅನಿವಾರ್ಯ ಆಗಿತ್ತು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.