ನವದೆಹಲಿ: ಭಾರತೀಯ ಸೇನೆಯ ನಿವೃತ್ತ ಸಿಬ್ಬಂದಿಗಳಿಗೆ ಸಂತಸದ ಸುದ್ದಿ ಸಿಕ್ಕಿದೆ, ಸೈನಿಕ್ ಕಲ್ಯಾಣ್ ಬೋರ್ಡ್ ಮೂಲಕ ಸೇನೆಯ ಮಾಜಿ ಯೋಧರನ್ನು ರೈಲ್ವೇಯಲ್ಲಿ ನೇಮಕ ಮಾಡಿಕೊಳ್ಳಲು ಭಾರತೀಯ ರೈಲ್ವೇ ನಿರ್ಧರಿಸಿದೆ.
ನೇಮಕಾತಿ ಆದೇಶದ ಮಾರ್ಪಾಡಿನ ಅನ್ವಯ, ನಿವೃತ್ತ ಸೇನಾ ಸಿಬ್ಬಂದಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ನೇಮಕ ಮಾಡಿಕೊಳ್ಳಲು ಪ್ರಧಾನ ವ್ಯವಸ್ಥಾಪಕರಿಗೆ ಭಾರತೀಯ ರೈಲ್ವೆ ಅಧಿಕಾರ ನೀಡಿದೆ. ಹಿಂದಿನ ಆದೇಶವು ವ್ಯವಸ್ಥಾಪಕರಿಗೆ ಸರ್ಕಾರಿ ಭದ್ರತಾ ಸಂಸ್ಥೆಗಳಾದ ಹೋಮ್ ಗಾರ್ಡ್, ಮಹಾರಾಷ್ಟ್ರ ಕೈಗಾರಿಕಾ ಭದ್ರತಾ ಪಡೆ ಮುಂತಾದವುಗಳ ಸಿಬ್ಬಂದಿಯನ್ನು ರೈಲ್ವೆ ಭದ್ರತೆಯ ವಲಯಗಳಲ್ಲಿ ನೇಮಿಸಿಕೊಳ್ಳಲು ಅವಕಾಶವನ್ನು ನೀಡಿತ್ತು. ಇದೀಗ ಅದಕ್ಕೆ ಮಾರ್ಪಾಡನ್ನು ತಂದು, ಸೇನೆಯ ಮಾಜಿ ಸಿಬ್ಬಂದಿಗಳನ್ನೂ ನೇಮಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ಮಾಹಿತಿಯ ಪ್ರಕಾರ, 76,563 ಸಿ ಮತ್ತು ಡಿ-ಲೆವೆಲ್ ಆರ್ಪಿಎಫ್ ಮತ್ತು ಆರ್ಪಿಎಸ್ಎಫ್ (ರೈಲ್ವೆ ಪ್ರೊಟೆಕ್ಷನ್ ಸ್ಪೆಶಲ್ ಫೋರ್ಸ್) ಸಿಬ್ಬಂದಿ ಪ್ರಸ್ತುತ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ, ಇದು ಅನುಮೋದಿತ ಸಾಮರ್ಥ್ಯಕ್ಕಿಂತ ಶೇಕಡಾ 15 ರಷ್ಟು ಕಡಿಮೆಯಾಗಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವವರೆಗೂ ಸಾಮರ್ಥ್ಯವನ್ನು ಹೆಚ್ಚಿಸುವ ಅಧಿಕಾರವನ್ನು ವ್ಯವಸ್ಥಾಪಕರಿಗೆ ನೀಡಲಾಗಿದೆ.
ಸೈನಿಕ್ ಕಲ್ಯಾಣ್ ಬೋರ್ಡ್ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಒಂದು ಇಲಾಖೆಯಾಗಿದ್ದು, ಇದು ಮಾಜಿ ಸೈನಿಕ ಪುನರ್ವಸತಿ ನೀತಿಗಳ ಬಗ್ಗೆ ಸಲಹೆ ನೀಡುತ್ತದೆ ಮತ್ತು ಮಾಜಿ ಸೈನಿಕರು ಮತ್ತು ವಿಧವೆಯರ ಕಲ್ಯಾಣಕ್ಕಾಗಿ ಶ್ರಮಿಸುತ್ತದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 60,000 ಸೇನಾ ಸಿಬ್ಬಂದಿಯನ್ನು ಸಕ್ರಿಯ ಕರ್ತವ್ಯದಿಂದ ಬಿಡುಗಡೆ ಮಾಡಲಾಗುತ್ತದೆ ಮತ್ತು ಇವರು 35-45 ವಯಸ್ಸಿನವರಾಗಿರುತ್ತಾರೆ. ಹೀಗಾಗಿ ಇವರಿಗೆ ಎರಡನೇ ವೃತ್ತಿಜೀವನದ ಅಗತ್ಯವಿರುತ್ತದೆ. ಇಂತಹವರಿಗೆ ರೈಲ್ವೇಯ ಹೊಸ ನಿರ್ಧಾರ ನಿಜಕ್ಕೂ ಆಶಾದಾಯಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.