ಕೆಲವೇ ವರ್ಷಗಳ ಹಿಂದಿನವರೆಗೆ ಭಾರತ ಜಗತ್ತಿನ ಅತಿ ದೊಡ್ಡ ರಕ್ಷಣಾ ಸಾಮಗ್ರಿಗಳ ಆಮದುದಾರನಾಗಿತ್ತು. ಸೈನಿಕರು ಬಳಸುವ ಬಂದೂಕು, ಕ್ಷಿಪಣಿ, ಟ್ಯಾಂಕ್, ಫಿರಂಗಿ, ಹಿಮ ಜಾಕೆಟ್, ಕೊನೆಗೆ ಶರೀರಕ್ಕೆ ಅಗತ್ಯವಿರುವ ಜಾಕೆಟ್, ಬೂಟುಗಳವರೆಗೆ ಎಲ್ಲವನ್ನೂ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇತ್ತು, ಹಾಗಾಗಿ ನಮ್ಮ ಸೈನ್ಯದ ಬಲವರ್ಧನೆ ಬಲಾಢ್ಯ ವಿದೇಶಗಳ ಇಷ್ಟಾನಿಷ್ಟಗಳನ್ನೇ ಅವಲಂಬಿಸಿತ್ತೆಂದರೆ ತಪ್ಪಲ್ಲ. ಅಮೆರಿಕ, ರಷ್ಯಾ, ಫ್ರಾನ್ಸ್, ಇಂಗ್ಲೆಂಡ್ ಗಳ ತಾಳಕ್ಕೆ ತಕ್ಕಂತೆ ಕುಣಿದರೆ, ಅವುಗಳಿಗೆ ‘ಜೀ ಹುಜೂರ್’ ಎನ್ನುತ್ತಾ ಸಲಾಂ ಹೊಡೆಯುತ್ತಿದ್ದರೆ ಮಾತ್ರ ನಾವು ಅಪೇಕ್ಷಿಸುವ ಸುಧಾರಿತ ರಕ್ಷಣಾ ಸಲಕರಣೆಗಳನ್ನು ಪಡೆಯಬಹುದಿತ್ತು.
ಆದರೀಗ ಆ ಸ್ಥಿತಿ ಬದಲಾಗಿದೆ. ರಕ್ಷಣಾ ಸಾಮಗ್ರಿಗಳಿಗಾಗಿ ಬೇರೆ ಬಲಾಢ್ಯ ದೇಶಗಳತ್ತ ಕೈ ಚಾಚುವ ದೈನೇಸಿ ಸ್ಥಿತಿಯಿಂದ ಭಾರತ ಹೊರಬಂದಿದೆ. ರಕ್ಷಣಾ ಕ್ಷೇತ್ರಕ್ಕೆ ಬೇಕಾದ ಸಲಕರಣೆಗಳನ್ನು ದೇಶೀಯವಾಗಿಯೇ ಉತ್ಪಾದಿಸುವತ್ತ ಭಾರತ ದಾಪುಗಾಲು ಇಡತೊಡಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ರಕ್ಷಣಾ ಸಲಕರಣೆಗಳನ್ನೂ ದೇಶದಲ್ಲೇ ಉತ್ಪಾದಿಸಬೇಕು ಎಂಬ ಕೇಂದ್ರ ಸರ್ಕಾರದ ಸಂಕಲ್ಪ ತೃಪ್ತಿದಾಯಕ ಮಟ್ಟದಲ್ಲಿ ಫಲ ನೀಡತೊಡಗಿದೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ. ಮೂರು ತಿಂಗಳ ಹಿಂದಷ್ಟೇ ಭಾರತದ ಎಲ್ ಆ್ಯಂಡ್ ಟಿ ಕಂಪನಿ ಗುಜರಾತ್ ನಲ್ಲಿ ಅತ್ಯಾಧುನಿಕ ಕೆ-9 ವಜ್ರ ಟ್ಯಾಂಕ್ ಗಳನ್ನು ಉತ್ಪಾದಿಸಿ ಸೇನಾಪಡೆಗೆ ನೀಡಿತ್ತು. ಅದಾದ ಸ್ವಲ್ಪ ದಿನಗಳಲ್ಲೇ ಕಳೆದ ತಿಂಗಳು ಉತ್ತರ ಪ್ರದೇಶದ ಅಮೇಥಿಯಲ್ಲಿ ರಷ್ಯಾ ಹಾಗೂ ಭಾರತದ ಸಹಭಾಗಿತ್ವದಲ್ಲಿ ಕಲಾಶ್ನಿಕೋವ್ ರೈಫಲ್ ಉತ್ಪಾದನಾ ಘಟಕ ಆರಂಭಗೊಂಡಿತ್ತು. ಈ ಘಟಕದಲ್ಲಿ ಜಗತ್ತಿನ ಅತ್ಯಂತ ಸುಧಾರಿತ ಗನ್ ಎನ್ನಲಾದ ಎ.ಕೆ. ಸರಣಿಯ ಗನ್ ಗಳನ್ನು ಉತ್ಪಾದಿಸಿ ದೊಡ್ಡ ಪ್ರಮಾಣದಲ್ಲಿ ಭಾರತೀಯ ಸೇನಾ ಪಡೆಗೆ ಪೂರೈಕೆ ಮಾಡಲಾಗುತ್ತಿದೆ. ಇದೀಗ ದೇಶದಲ್ಲಿ ಮೊತ್ತಮೊದಲ ಬಾರಿಗೆ ಸ್ವದೇಶಿ ತಂತ್ರಜ್ಞಾನದಡಿ ತಯಾರಿಸಲಾದ ಅತ್ಯಾಧುನಿಕ ‘ಧನುಷ್’ ಫಿರಂಗಿಯನ್ನು ಸೇನಾಪಡೆಗೆ ಸೇರ್ಪಡೆ ಮಾಡಲಾಗುತ್ತಿದೆ. ಈಗಾಗಲೇ ಮೊದಲನೇ ಕಂತಿನ ಧನುಷ್ ಫಿರಂಗಿಗಳು ನಮ್ಮ ಸೇನಾಪಡೆಗೆ ರವಾನೆಯಾಗಿರುವುದು ರಕ್ಷಣಾ ವಲಯದಲ್ಲಿ ಸಂತಸ ಸಂಚಲನ ಮೂಡಿಸಿದೆ.
ಈ ಹಿಂದೆ 1980 ಹಾಗೂ 1990 ರ ದಶಕದಲ್ಲಿ ಸ್ವೀಡನ್ ಮೂಲದ ಬೊಫೋರ್ಸ್ ಫಿರಂಗಿ ಆಮದು ವ್ಯವಹಾರದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರವೇ ನಡೆದು, ಅದೇ ಕಾರಣಕ್ಕೆ ಆಗಿನ ಪ್ರಧಾನಿ ರಾಜೀವ್ ಗಾಂಧಿಯ ಸುತ್ತ ಬೋಫೋರ್ಸ್ ವಿವಾದದ ಹುತ್ತವೇ ಸುತ್ತಿಕೊಂಡಿದ್ದುದು ಈಗ ಇತಿಹಾಸ. ಆ ವಿವಾದ ಏನೇ ಇರಲಿ, ಆ ಬೋಫೋರ್ಸ್ ಫಿರಂಗಿಗಿಂತಲೂ ಸುಧಾರಿತ ಫಿರಂಗಿ ಧನುಷ್ ಎಂಬುದು ದೇಶಕ್ಕೆ ಹೆಮ್ಮೆ ತರುವ ಸಂಗತಿ. ಒಟ್ಟಾರೆ ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ಎಂಬ ಯೋಜನೆ ಹಂತ ಹಂತವಾಗಿ ಫಲ ನೀಡುತ್ತಿದ್ದು, ಭಾರತವೂ ಮುಂದೊಂದು ದಿನ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬಹುದು ಎಂಬ ಭರವಸೆಯನ್ನಂತೂ ಬಿತ್ತಿದೆ.
ಅಮೇಥಿಯಲ್ಲಿ ಎ.ಕೆ. ಸರಣಿಯ ಗನ್ ಗಳನ್ನು ಉತ್ಪಾದಿಸುತ್ತಿರುವುದು ರಷ್ಯಾದ ಸಹಭಾಗಿತ್ವದಲ್ಲಿ. ಆ ಘಟಕದ ಹೆಸರೇ ಕಲಾಶ್ನಿಕೋವ್ ರೈಫಲ್ ಉತ್ಪಾದನಾ ಘಟಕ ಎಂದಿದೆ. ಹಾಗಿರುವಾಗ ಅದು ಸ್ವದೇಶಿ ಆಗುವುದಾದರೂ ಹೇಗೆ ? ಎಂದು ಕೆಲವು ಸಿನಿಕರು ಪ್ರಶ್ನೆಗಳ ವಾಗ್ಬಾಣ ಎಸೆಯಬಹುದು. ಮೊದಲು ವಿದೇಶಗಳಿಂದಲೇ ಎ.ಕೆ. ಗನ್ ಗಳು ಆಮದಾಗಬೇಕಿತ್ತು. ದೇಶಕ್ಕೆ ವಿಪರೀತ ವಿದೇಶಿ ವಿನಿಮಯ ವೆಚ್ಚದ ಹೊರೆಯಾಗುತ್ತಿತ್ತು. ಈಗ ದೇಶದಲ್ಲೇ ಅದು ಉತ್ಪಾದನೆಯಾಗುತ್ತಿರುವುದರಿಂದ ವಿದೇಶಿ ವಿನಿಮಯ ಉಳಿತಾಯವಾದಂತಾಗಲಿಲ್ಲವೇ? ಪ್ರಾರಂಭದಲ್ಲಿ ರಷ್ಯಾ ಸಹಭಾಗಿತ್ವದಲ್ಲಿ ಉತ್ಪಾದನೆ ಪ್ರಾರಂಭವಾಗಬಹುದು. ಕ್ರಮೇಣ ಆ ಉತ್ಪಾದನಾ ಘಟಕ ಸ್ವತಂತ್ರವಾಗಿ, ರಷ್ಯಾದ ನೆರವಿಲ್ಲದೆಯೇ ಉತ್ಪಾದನೆಯಲ್ಲಿ ತೊಡಗಬಹುದು ಎಂಬುದಕ್ಕೆ ನಿದರ್ಶನಗಳು ಸಾಕಷ್ಟಿವೆ. ಮೊದಲು ಕ್ಷಿಪಣಿ ತಂತ್ರಜ್ಞಾನಕ್ಕಾಗಿ ವಿದೇಶಗಳನ್ನೇ ನಾವು ನೆಚ್ಚಿಕೊಂಡಿದ್ದೇವೆ. ಹಾಗಾಗಿ ಭಾರತ ದುರ್ಬಲ ರಾಷ್ಟ್ರಗಳ ಸಾಲಿಗೆ ಸೇರಿತ್ತು. ಆದರೆ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ಡಿ.ಆರ್.ಡಿ.ಒ. ಮುಖಾಂತರ ನಡೆದ ಸಂಶೋಧನೆಗಳ ಫಲಶ್ರುತಿಯಾಗಿ ಪೃಥ್ವಿ. ತ್ರಿಶೂಲ್. ಅಂಕುಶ್. ನಾಗ್. ಅಗ್ನಿ. ಸಾಗರಿಕಾ, ಸೂರ್ಯ ಮುಂತಾದ ಹಲವು ಸ್ವದೇಶಿ ಕ್ಷಿಪಣಿಗಳು ತಯಾರಾದವು. ಅದರಲ್ಲೂ ಅಗ್ನಿ -2 ಭಾರತದ ಕ್ಷಿಪಣಿ ತಂತ್ರಜ್ಞಾನದಲ್ಲಿ ಒಂದು ಮೈಲಿಗಲ್ಲು. 2000 ಕಿಲೋಮೀಟರ್ ವ್ಯಾಪ್ತಿ ಕ್ರಮಿಸಬಲ್ಲ ಇದು ಖಂಡಾಂತರ ಕ್ಷಿಪಣಿ ತಂತ್ರಜ್ಞಾನಕ್ಕೆ ಪೂರಕವಾಗಿ ಮೂಡಿ ಬಂದಿದೆ. ನಿರ್ದಿಷ್ಟ ಗುರಿಯ ಇದು 1000 ಕೆ.ಜಿ. ಸ್ಫೋಟಕಗಳನ್ನು ಕೊಂಡೊಯ್ಯಬಲ್ಲದು.
ನಮ್ಮ ದೇಶ ರಕ್ಷಣಾ ಸಾಮಗ್ರಿಗಳಿಗಾಗಿ ಅಮೆರಿಕ, ರಷ್ಯಾ, ಇಸ್ರೇಲ್, ಫ್ರಾನ್ಸ್, ಇಟಲಿ ಮುಂತಾದ ದೇಶಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಸ್ವಲ್ಪ ಕಾಲದವರೆಗೆ ಅದು ಅನಿವಾರ್ಯವೂ ಹೌದು. ಆದರೆ ಸದಾಕಾಲ ವಿದೇಶಗಳ ಹಂಗಿನಲ್ಲೇ ಬೀಳುವುದು ಸ್ವಾಭಿಮಾನಿ ಎನಿಸಿಕೊಳ್ಳುವ ರಾಷ್ಟ್ರಕ್ಕೆ ತರವಲ್ಲ. ಭಾರತ ಇದುವರೆಗೆ ಜಗತ್ತಿನ ನಂಬರ್ ಒನ್ ರಕ್ಷಣಾ ಸಾಮಗ್ರಿಗಳ ಆಮದುದಾರ ರಾಷ್ಟ್ರ ಎಂಬ ಹಣೆಪಟ್ಟಿ ತಗುಲಿಸಿಕೊಂಡಿತ್ತು. ಆದರೆ 2014-18 ರ ಅವಧಿಯಲ್ಲಿ ಈ ಹಣೆಪಟ್ಟಿಯ ಕಳಂಕ ಕಳಚಿ ಹೋಗಿದೆ. ಆ ಸ್ಥಾನವನ್ನು ಈಗ ಸೌದಿ ಅರೇಬಿಯಾ ಆಕ್ರಮಿಸಿದೆ ! ಇಷ್ಟಾದರೂ, ಈಗಲೂ ಜಗತ್ತಿನ ಎಲ್ಲ ದೇಶಗಳು ಆಮದು ಮಾಡಿಕೊಳ್ಳುವ ರಕ್ಷಣಾ ಸಾಮಗ್ರಿಗಳ ಪೈಕಿ ಶೇ. 9.5 ರಷ್ಟನ್ನು ಭಾರತವೇ ಆಮದು ಮಾಡಿಕೊಳ್ಳುತ್ತಿದೆ. ಇದಕ್ಕೆ ವೆಚ್ಚವಾಗುವ ವಿದೇಶಿ ವಿನಿಮಯ ಸಾವಿರಾರು ಕೋಟಿ ರೂಪಾಯಿ. ಭಾರತದಲ್ಲೇ ರಕ್ಷಣಾ ಸಾಮಗ್ರಿಗಳನ್ನು ಉತ್ಪಾದಿಸುವ ಪ್ರಮಾಣ ಹೆಚ್ಚಳವಾದರೆ ಅದರಿಂದ ಈ ಕ್ಷೇತ್ರಕ್ಕೆ ಸಂಬಂಧಿಸಿದ ನಮ್ಮದೇ ಆದ ಖಾಸಗಿ ಹಾಗೂ ಸರ್ಕಾರಿ ಕಂಪನಿಗಳು ಅಭಿವೃದ್ಧಿಯಾಗುವುದಲ್ಲದೆ ಉದ್ಯೋಗಾವಕಾಶಗಳು ಹೆಚ್ಚಿ, ರಕ್ಷಣಾ ಸಾಮಗ್ರಿಗಳ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ದಿಟ್ಟ ಹೆಜ್ಜೆ ಇಟ್ಟಂತಾಗುತ್ತದೆ. ಇದರಿಂದ ಉಳಿತಾಯವಾಗುವ ಸಾವಿರಾರು ಕೋಟಿ ರೂ. ಹಣವನ್ನು ಸಾಮಾಜಿಕ ಕಲ್ಯಾಣ, ಶಿಕ್ಷಣ ಹಾಗೂ ಇತರೆ ಅಭಿವೃದ್ಧಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಬಹುದು.
ಜಗತ್ತಿನ ನಂಬರ್ ಒನ್ ರಕ್ಷಣಾ ಸಾಮಗ್ರಿಗಳ ಆಮದುದಾರ ರಾಷ್ಟ್ರ ಭಾರತ ಎಂಬ ಹಣೆಪಟ್ಟಿ 2014-18 ರ ಅವಧಿಯಲ್ಲಿ ಕಳಚಿದ್ದಾದರೂ ಹೇಗೆ? ಅದಕ್ಕೂ ಮೊದಲು ಈ ಕಳಂಕವನ್ನು ಕಳಚಿಕೊಳ್ಳಲು ಪ್ರಯತ್ನಗಳೇಕೆ ನಡೆಯಲಿಲ್ಲ? ಈ ಪ್ರಶ್ನೆಗಳು ಸ್ವಾಭಾವಿಕ. 2014 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಪ್ರಧಾನಿ ಮೋದಿ ಒಂದೇ ಸಮನೆ ವಿದೇಶಗಳನ್ನು ಸುತ್ತತೊಡಗಿದಾಗ ನಾನಾ ಬಗೆಯ ಟೀಕೆಗಳು ವ್ಯಕ್ತವಾದವು. ನರೇಂದ್ರ ಮೋದಿ ಮಜಾ ಉಡಾಯಿಸಲು ದೇಶ ವಿದೇಶಗಳ ಯಾತ್ರೆ ಕೈಗೊಂಡಿದ್ದಾರೆ, ಅದಕ್ಕಾಗಿ ದುಬಾರಿ ಬೆಲೆಯ ಸೂಟು ಬೂಟುಗಳನ್ನು ಧರಿಸತೊಡಗಿದ್ದಾರೆ ಎಂಬಲ್ಲಿವರೆಗಿನ ತೀರಾ ಕೆಳಮಟ್ಟದ ಟೀಕೆಗಳು ವಿರೋಧಿಗಳಿಂದ ಕೇಳಿಬಂತು. ಈ ಟೀಕೆಗಳಿಗೆ ಮೋದಿ ಉತ್ತರಿಸುವ ಗೋಜಿಗೇ ಹೋಗಲಿಲ್ಲ ! ಆದರೀಗ ಕೇವಲ ಐದು ವರ್ಷಗಳ ಆಡಳಿತಾವಧಿಯಲ್ಲಿ 7 ಅತ್ಯುನ್ನತ ಮಟ್ಟದ ಅಂತಾರಾಷ್ಟ್ರೀಯ ಪುರಸ್ಕಾರಗಳು ಮೋದಿಯವರನ್ನು ಅರಸಿ ಬಂದಾಗ, ಆಗ ಟೀಕಿಸುತ್ತಿದ್ದವರಿಗೆ ಸೂಕ್ತ ಪ್ರತ್ಯುತ್ತರ ದೊರಕಿರಬಹುದು! ಅತ್ಯುನ್ನತ ಮಟ್ಟದ ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ಸುಖಾಸುಮ್ಮನೆ ಏನೂ ಕೊಡುವುದಿಲ್ಲ. ಅದಕ್ಕೆ ಪ್ರಬಲ ಕಾರಣಗಳೇ ಇರುತ್ತವೆ.
ನಮ್ಮ ಪ್ರಧಾನಿಗೆ ಕಳೆದ 3 ವರ್ಷಗಳಲ್ಲಿ (1) ಜಾಯೇದ್ ಮೆಡಲ್ ಆಫ್ ಯುಎಇ (2) ಸೋಲ್ ಶಾಂತಿ ಪ್ರಶಸ್ತಿ (3) ಯುಎನ್ ಚಾಂಪಿಯನ್ಸ್ ಆಫ್ ಅರ್ಥ್ ಅವಾರ್ಡ್ -2018 (4) ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಪ್ಯಾಲೆಸ್ಟೀನ್ (5) ಅಮೀರ್ ಅಬ್ದುಲ್ಲಾ ಖಾನ್ ಅವಾರ್ಡ್ ಆಫ್ ಆಫ್ಘಾನಿಸ್ಥಾನ್ (6) ಕಿಂಗ್ ಅಬ್ದುಲ್ಲಾಜೀಜ್ ಸಾಶ್ ಅವಾರ್ಡ್ ಆಫ್ ಸೌದಿ ಅರೇಬಿಯಾ ಹಾಗೂ (7) ಆರ್ಡರ್ ಆಫ್ ಸೆಂಟ್ ಆ್ಯಂಡ್ರೂ ದಿ ಅಪೋಸ್ಟೆಲ್ (ರಷ್ಯಾದ ಅತ್ಯುನ್ನತ ನಾಗರಿಕ ಪುರಸ್ಕಾರ) ಹೀಗೆ ಏಳು ಅತ್ಯುನ್ನತ ಪುರಸ್ಕಾರಗಳು ದೊರಕಿದ್ದು ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಭಿವೃದ್ಧಿ, ಸಂಬಂಧ ಸುಧಾರಣೆ, ಶಾಂತಿ ಸ್ಥಾಪನೆ ಹಾಗೂ ಭಾರತವನ್ನು ತನ್ಮೂಲಕ ಸ್ವಾಭಿಮಾನಿ, ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸಿದ್ದಕ್ಕೆ ಹೊರತು ವಿದೇಶಗಳಿಗೆ ಪಿಕ್ನಿಕ್ ಹೋಗಿದ್ದಕ್ಕಲ್ಲ ! ಪ್ರಬಲ ರಾಷ್ಟ್ರಗಳೊಂದಿಗೆ ಉಭಯ ಕುಶಲೋಪರಿ ನಡೆಸಿ, ವ್ಯೂಹಾತ್ಮಕ ಪಾಲುದಾರಿಕೆಯನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ದು, ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಮೋದಿ ಶ್ರಮಿಸಿದ್ದರ ಫಲವೇ ಈಗ ರಕ್ಷಣಾ ವಲಯದಲ್ಲಿ ಸ್ವದೇಶಿ ನಿರ್ಮಿತ ರಕ್ಷಣಾ ಸಾಮಗ್ರಿಗಳನ್ನು ಉತ್ಪಾದಿಸುವಲ್ಲಿ ಯಶಸ್ವಿಯಾಗಿದ್ದು ಎಂಬುದನ್ನು ಮೋದಿ ಟೀಕಾಕಾರರು ಖಂಡಿತ ಒಪ್ಪಿಕೊಳ್ಳಲಾರರು!
ಅವರು ಒಪ್ಪಿಕೊಳ್ಳಲಿ, ಬಿಡಲಿ. ಆದರೆ ವಾಸ್ತವ ಮಾತ್ರ ಅದೇ. ಹಾಗಲ್ಲದಿದ್ದರೆ ‘ಮುಸಲ್ಮಾನರ ಬದ್ಧ ವೈರಿ ಮೋದಿ’ ಎಂದು ಪ್ರಗತಿಪರರು ಟೀಕಿಸುವ ಮೋದಿಯವರಿಗೆ ಯುಎಇ, ಆಫ್ಘಾನಿಸ್ಥಾನ, ಪ್ಯಾಲೆಸ್ತೀನ್, ಸೌದಿ ಅರೇಬಿಯಾ ಮೊದಲಾದ ಕಟ್ಟರ್ ಮುಸ್ಲಿಂ ದೇಶಗಳೇ ತಮ್ಮ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ನೀಡಿ ಗೌರವಿಸಲು ಏಕೆ ಮುಂದಾಗುತ್ತಿದ್ದವು ? ಆ ದೇಶಗಳಿಗೇನು ತಲೆ ಕೆಟ್ಟಿದೆಯೇ ?
ವಿದೇಶಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವುಗಳ ಸಹಕಾರ ಪಡೆದು, ಅನಂತರ ರಕ್ಷಣಾ ಉತ್ಪಾದನೆ ಹಾಗೂ ಅದಕ್ಕೆ ಬಳಸುವ ತಂತ್ರಜ್ಞಾನವನ್ನು ದೇಶದಲ್ಲೇ ಅಭಿವೃದ್ಧಿಪಡಿಸುವುದು ಮೋದಿ ಅವರ ಮಹತ್ವದ ಯೋಜನೆಯಾಗಿರುವ ಮೇಕ್ ಇನ್ ಇಂಡಿಯಾದ ಬಹುದೊಡ್ಡ ಕನಸು. ತಂತ್ರಜ್ಞಾನ ಮತ್ತು ಉತ್ಪಾದನೆ ಎರಡು ದೇಶೀಯವಾದಗಲೇ ಮೇಕ್ ಇನ್ ಇಂಡಿಯಾ ಸಂಪೂರ್ಣ ಯಶಸ್ವಿಯಾಗುವುದು. ಇನ್ನೈದು ವರ್ಷ ಮತ್ತೆ ಮೋದಿಯವರೇ ಪ್ರಧಾನಿಯಾಗಿದ್ದರೆ ಈ ಗುರಿ ಈಡೇರಲು ಸಾಧ್ಯ.
– ದು. ಗು. ಲಕ್ಷ್ಮಣ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.