ದೆಹಲಿ : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಮಂಗಳವಾರ ಆರೆಸ್ಸೆಸ್ ಕಾರ್ಯಕರ್ತರಾದ ಚಂದ್ರಕಾಂತ್ ಮತ್ತು ಅವರ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್ಓ) ಮೃತಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆ ಮತ್ತು ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ನಿಲುವಿನ ಬಗೆಗಿನ ಭಯೋತ್ಪಾದಕ ಗುಂಪುಗಳ ಹತಾಶೆ ಇಲ್ಲಿ ಎದ್ದು ತೋರುತ್ತಿದೆ.
ಸಂಘದ ನಿಷ್ಠಾವಂತ ಕಾರ್ಯಕರ್ತ ಚಂದ್ರಕಾಂತ ಶರ್ಮಾ (ವಯಸ್ಸು 50 ವರ್ಷ) ಜಿಲ್ಲೆ, ವಿಭಾಗದ ಅನ್ಯಾನ್ಯ ಜವಾಬ್ದಾರಿಗಳನ್ನು ನಿರ್ವಹಿಸಿ ಪ್ರಸ್ತುತ ಆರೆಸ್ಸೆಸ್ ನ ಪ್ರಾಂತ ಸಹ ಸೇವಾ ಪ್ರಮುಖರಾಗಿದ್ದ ಕಿಶ್ತ್ವಾರ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಿಶ್ತ್ವಾರ್ನಲ್ಲಿ ಭಯೋತ್ಪಾದಕರು ಆಸ್ಪತ್ರೆಯ ಆವರಣ ಪ್ರವೇಶಿಸಿ, ಚಂದ್ರಕಾಂತ್ ಶರ್ಮಾರನ್ನು ಹಲ್ಲೆ ಮಾಡಿ ತೀವ್ರವಾಗಿ ಗಾಯಗೊಳಿಸಿದರು. ಗಂಭೀರ ಸ್ಥಿತಿಯಲ್ಲಿದ್ದ ಶರ್ಮರನ್ನು ತಕ್ಷಣ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಈ ದಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳ ಪೈಕಿ ಒಬ್ಬರಾದ ರಾಜೇಂದ್ರ ಕುಮಾರ್ ಅವರೂ ದೇಹ ತ್ಯಾಗ ಮಾಡಿದರು ಮತ್ತು ಇನ್ನೊಬ್ಬರು ಆಸ್ಪತ್ರೆಯಲ್ಲಿ ತೀವ್ರತರವಾದ ಸ್ಥಿತಿಯಲ್ಲಿ ದಾಖಲಾಗಿದ್ದಾರೆ. ಚಂದ್ರಕಾಂತ್ ಶರ್ಮಾ ಅವರು ಗಂಭೀರ ಸ್ಥಿತಿಯಲ್ಲಿದ್ದರಾದ್ದರಿಂದ ಅವರನ್ನು ಜಮ್ಮು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ.
ಈ ದುರ್ಘಟನೆಯ ನಂತರ ಭಯೋತ್ಪಾದಕರನ್ನು ಹುಡುಕಲು ಕಿಶ್ತ್ವಾರಿನಲ್ಲಿ ಹುಡುಕಾಟ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಗಡಿಯ ಪ್ರವೇಶ ಮತ್ತು ನಿರ್ಗಮನದ ಜಾಗಗಳನ್ನು ಬಂದೋಬಸ್ತ್ ಮಾಡಲಾಗಿದೆ. ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಒಂದುಗೂಡಿದ್ದಾರೆ. ಈ ಘಟನೆಯ ಸೂಕ್ಷ್ಮತೆಯಿಂದಾಗಿ, ಮೊಬೈಲ್ ಅಂತರ್ಜಾಲವನ್ನು ಕಿಶ್ತ್ವಾರಿನಲ್ಲಿ ನಿಷೇಧಿಸಲಾಗಿದೆ.
ಇದು ಕಿಶ್ತ್ವಾರ್ನಲ್ಲಿ ನಡೆಯುತ್ತಿರುವ ಮೊದಲ ದಾಳಿ ಅಲ್ಲ. ನವೆಂಬರ್ 2018 ರಲ್ಲಿ ಬಿಜೆಪಿ ನಾಯಕ ಅನಿಲ್ ಪರಿಹಾರ್ ಮತ್ತು ಅವರ ಸಹೋದರನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದರು. ಆ ಕೊಲೆ ನಡೆಸಿದ ಕೊಲೆಗಾರರು ಈತನಕ ಸಿಕ್ಕಿಲ್ಲ. ಅನಿಲ್ ಪರಿಹಾರ್ ಹತ್ಯೆಯ ನಂತರ ಹಿಂದುಗಳನ್ನು ಸಂಘಟಿಸುವ ಕೆಲಸದಲ್ಲಿ, ವಂಚಿತ, ಶೋಷಿತರ ಕ್ಷೇಮಕ್ಕಾಗಿ, ಸೇನೆಯಲ್ಲಿರುವವರಿಗೆ ಸಹಯೋಗ ನೀಡುವ ಕೆಲಸದಲ್ಲಿ ನಿರತರಾಗಿದ್ದ ಚಂದ್ರಕಾಂತರ ಮೇಲೂ ಭಯೋತ್ಪಾದಕ ದಾಳಿ ನಡೆಯಬಹುದೆಂದು ಶಂಕಿಸಲಾಗಿತ್ತು ಹಾಗೂ ಅದಕ್ಕಾಗಿಯೇ ಅವರಿಗೆ ಭದ್ರತೆಯನ್ನು ಒದಗಿಸಲಾಗಿತ್ತು. ಪ್ರಾಂತದಲ್ಲಿ ಭಯೋತ್ಪಾದನೆಯ ವಿರುದ್ಧವಾಗಿ ಅಲ್ಪಸಂಖ್ಯಾತರನ್ನು ರಕ್ಷಿಸಲು ಚಂದ್ರಕಾಂತ್ ಅವರು ಬಹಳಷ್ಟು ಕೆಲಸ ಮಾಡಿದ್ದರು, ಹಾಗೂ ಇದು ಅವರ ಮೇಲೆ ನಡೆದ ಮೂರನೇ ದಾಳಿಯಾಗಿದೆ.
ಅವರು ಹಾಗೂ ಅವರ ಕುಟುಂಬದವರು ಧಾರ್ಮಿಕ ಚಟುವಟಿಕೆಗಳಲ್ಲಿ, ಸಮಾಜ ಸೇವಾ ಕಾರ್ಯದಲ್ಲಿ ಆಸ್ಥೆ ವಹಿಸಿದವರಾಗಿದ್ದರು. ಪತ್ನಿ ಹಾಗೂ ಹತ್ತನೆಯ ತರಗತಿಯಲ್ಲಿ, ಏಳನೆಯ ತರಗತಿಯಲ್ಲಿ ಓದುತ್ತಿದ್ದ ಮಕ್ಕಳನ್ನು ಚಂದ್ರಕಾಂತ ಶರ್ಮ ಅಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.