ನವದೆಹಲಿ: ಬಾಲಕೋಟ್ ಉಗ್ರರ ಶಿಬಿರಗಳ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿದ ವೇಳೆ ಮೃತಪಟ್ಟ ಉಗ್ರರ ಶವಗಳನ್ನು ಪಾಕಿಸ್ಥಾನ ಈಗಲೂ ಲೆಕ್ಕ ಹಾಕುತ್ತಿದೆ, ಆದರೆ ನಮ್ಮ ದೇಶದ ಪ್ರತಿಪಕ್ಷಗಳು ಮಾತ್ರ ಈಗಲೂ ಸಾಕ್ಷಿಗಳನ್ನು ಕೇಳುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂದಿನ ವಾರ ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ಮತ್ತು ವಿಧಾನಸಭಾ ಚುನಾವಣೆಗಾಗಿ ಅವರು ಒರಿಸ್ಸಾದ ಕೊರಪುತ್ನಲ್ಲಿ ಪ್ರಚಾರ ಸಮಾವೇಶ ಆಯೋಜಿಸಿ ಮಾತನಾಡಿದರು.
‘ದಾಳಿ ನಡೆದು ಒಂದು ತಿಂಗಳಾಗುತ್ತಾ ಬಂದಿದೆ, ಪಾಕಿಸ್ಥಾನ ಈಗಲೂ ಸತ್ತ ಹೆಣಗಳ ಬಗ್ಗೆ ಲೆಕ್ಕ ಹಾಕುತ್ತಿದೆ. ಆದರೆ ಇವರು (ಪ್ರತಿಪಕ್ಷಗಳು) ಈಗಲೂ ಸಾಕ್ಷಿಗಳನ್ನು ಕೇಳುತ್ತಲೇ ಇದ್ದಾರೆ’ ಎಂದರು. ಅಲ್ಲದೇ ಫೆ.26ರ ವೈಮಾನಿಕ ದಾಳಿ ಬಗ್ಗೆ ಸಂಶಯಗಳನ್ನು ಹುಟ್ಟು ಹಾಕುತ್ತಿರುವ ಪ್ರತಿಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
‘ಮಿಶನ್ ಶಕ್ತಿ’ಯನ್ನು ರಾಷ್ಟ್ರೀಯ ಚಾನೆಲ್ನಲ್ಲಿ ಘೋಷಣೆ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೂ ಪ್ರತಿಪಕ್ಷಗಳನ್ನು ತರಾಟೆಗೆ ತೆಗದುಕೊಂಡ ಅವರು, ಪ್ರತಿಪಕ್ಷಗಳ ಧೋರಣೆ ವಿಜ್ಞಾನಿಗಳನ್ನು ಅವಮಾನಿಸಿದಂತಿದೆ ಎಂದರು.
‘ಎರಡು ದಿನಗಳ ಹಿಂದೆ ಒರಿಸ್ಸಾ ಸೇರಿದಂತೆ ಇಡೀ ದೇಶಕ್ಕೆ ಹೆಮ್ಮೆಯ ಸಂಗತಿಗೆ ಸಾಕ್ಷಿಯಾಯಿತು. ಭಾರತ ಬಾಹ್ಯಾಕಾಶ ಶಕ್ತಿಯಾಗಿ ಹೊರಹೊಮ್ಮಿತು, ಜಗತ್ತು ಅದನ್ನು ನೋಡಿತು. ಭಾರತ ಈಗ ಬಾಹ್ಯಾಕಾಶದಲ್ಲೂ ಚೌಕಿದಾರಿ ಮಾಡುತ್ತಿದೆ. ವಿಶ್ವವೇ ಇದನ್ನು ನೋಡಿ, ನಮ್ಮ ದೇಶದ ವಿಜ್ಞಾನಿಗಳ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದರೆ, ಕೆಲವರು ಮಾತ್ರ ಇಂತಹ ಸಾಧನೆಯ ಬಗ್ಗೆ ಆರೋಪ, ಪ್ರಶ್ನೆ, ಅವಮಾನಗಳನ್ನು ಮಾಡುತ್ತಿದ್ದಾರೆ’ ಎಂದರು.
‘ಈ ರೀತಿ ಮಾಡುವ ಮೂಲಕ ಅವರು ನಮ್ಮ ವಿಜ್ಞಾನಿಗಳ ಮತ್ತು ಯೋಧರ ಸಾಧನೆಯನ್ನು ಅವಮಾನಿಸುತ್ತಿದ್ದಾರೆ. ನಮ್ಮ ಯೋಧರಿಗೆ ಮತ್ತು ವಿಜ್ಞಾನಿಗಳಿಗೆ ಅವಮಾನ ಮಾಡುವ ಇಂತಹವರು ನಮಗೆ ಬೇಕೇ, ಅವರನ್ನು ಶಿಕ್ಷಿಸದೆ ಸುಮ್ಮನೆ ಬಿಡಬೇಕೇ’ ಎಂದು ಜನರನ್ನು ಅವರು ಪ್ರಶ್ನಿಸಿದರು. ಅಲ್ಲದೇ, ಸಮಾವೇಶದುದ್ದಕ್ಕೂ ನಿರಂತರವಾಗಿ, ನಿಮಗೆ ಬಲಿಷ್ಠ, ನಿರ್ಣಾಯಕ ಸರ್ಕಾರ ಬೇಕೇ ಅಥವಾ ದುರ್ಬಲ ಸರ್ಕಾರ ಬೇಕೇ ಎಂದು ಅವರು ಜನರನ್ನು ಕೇಳುತ್ತಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.