ನವದೆಹಲಿ: ಕಳೆದ ತಿಂಗಳು ಎರಡು ದಿನಗಳ ಕಾಲ ಪಾಕಿಸ್ಥಾನದ ವಶದಲ್ಲಿದ್ದು, ಬಳಿಕ ಬಿಡುಗಡೆಗೊಂಡಿದ್ದ ಭಾರತೀಯ ವಾಯಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ನಾಲ್ಕು ವಾರಗಳ ಕಾಲ ಅನಾರೋಗ್ಯ ರಜೆಯಲ್ಲಿದ್ದರೂ ಕೂಡ ಮನೆಗೆ ತೆರಳದೆ ತನ್ನ ಶ್ರೀನಗರ ಸ್ಕ್ವಾಡ್ರನ್ಗೆ ಮರಳಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಜೆ ನೀಡಲಾಗಿದ್ದರೂ ಕೂಡ ಅಭಿನಂದನ್ ಅವರು ಚೆನ್ನೈನಲ್ಲಿನ ತಮ್ಮ ಮನೆಗೆ ತೆರಳುವ ಬದಲು ಶ್ರೀನಗರದಲ್ಲಿನ ಸ್ಕ್ವಾಡ್ರನ್ಗೆ ತೆರಳಿದ್ದಾರೆ ಎಂದಿವೆ.
ಪಾಕಿಸ್ಥಾನದಿಂದ ವಾಪಾಸ್ ಬಂದ ಬಳಿಕ ಅಭಿನಂದನ್ ಅವರನ್ನು ಎರಡು ವಾರಗಳ ಕಾಲ ಪರಿಶೀಲನೆಗೆ ಒಳಪಡಿಸಿದ್ದ ಭದ್ರತಾ ಪಡೆಗಳು, ಬಳಿಕ ಅವರಿಗೆ ನಾಲ್ಕು ವಾರಗಳ ಅನಾರೋಗ್ಯ ರಜೆಯನ್ನು ನೀಡಿತ್ತು.
ಆದರೆ ಈ ರಜೆಯಲ್ಲಿ ವರ್ತಮಾನ್ ಅವರು ಚೆನ್ನೈಗೆ ತೆರಳಿ ತಮ್ಮ ಪೋಷಕರೊಂದಿಗೆ ಇರಬಹುದಿತ್ತು, ಆದರೆ ಹಾಗೆ ಮಾಡದೆ ನೇರವಾಗಿ ತಮ್ಮ ಸ್ಕ್ವಾಡ್ರನ್ಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತ ಪಾಕಿಸ್ಥಾನದ ಬಾಲಕೋಟ್ ಉಗ್ರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಮರುದಿನ ಫೆ. 27 ರಂದು ಪಾಕಿಸ್ಥಾನ ವಿಮಾನಗಳು ಭಾರತದ ವಾಯುಗಡಿಯನ್ನು ಆಕ್ರಮಿಸುವ ದುಸ್ಸಾಹಸ ಮಾಡಿದಾಗ, ಅಭಿನಂದನ್ ತಮ್ಮ ಮಿಗ್-21 ಬಿಸನ್ ಜೆಟ್ ಮೂಲಕ ಅದನ್ನು ಹಿಮ್ಮೆಟ್ಟಿಸಿದ್ದರು. ಈ ವೇಳೆ ಅವರ ವಿಮಾನ ಪತನಗೊಂಡಿತ್ತು, ಪ್ಯಾರಾಚೂಟ್ ಬಳಸಿ ಕೆಳಕ್ಕೆ ಜಿಗಿದಿದ್ದ ಅವರು ಪಾಕ್ ಭೂಪ್ರದೇಶದಲ್ಲಿ ಬಿದ್ದಿದ್ದರು. ಈ ವೇಳೆ ಅವರನ್ನು ಪಾಕಿಸ್ಥಾನಿ ಅಧಿಕಾರಿಗಳು ಬಂಧಿಸಿದ್ದರು. ಎರಡು ದಿನಗಳ ತರುವಾಯ ಮಾ.1ರಂದು ಅವರನ್ನು ಭಾರತಕ್ಕೆ ಕಳುಹಿಸಲಾಗಿತ್ತು.
ಈ ಘಟನೆಯ ಬಳಿಕ ಅಭಿನಂದನ್ ಅವರು ದೇಶದ ಹೀರೋ ಆಗಿ ಹೊರಹೊಮ್ಮಿದ್ದಾರೆ. ಶತ್ರು ನೆಲದಲ್ಲಿ ಅವರು ತೋರಿಸಿದ ಅಪ್ರತಿಮ ಸಾಹಸ, ಧೈರ್ಯಕ್ಕೆ ಇಡೀ ದೇಶವೇ ತಲೆ ಬಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.