ನವದೆಹಲಿ: ಇತ್ತೀಚಿಗೆ ನಿಧನರಾದ ಮಾಜಿ ರಕ್ಷಣಾ ಸಚಿವ ಮತ್ತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಚಿತಾಭಸ್ಮವನ್ನು ಗೋವಾದ ಎಲ್ಲಾ 40 ಕ್ಷೇತ್ರಗಳ ನದಿಗಳಲ್ಲಿ ವಿಸರ್ಜನೆಗೊಳಿಸಲು ಗೋವಾ ಬಿಜೆಪಿ ಘಟಕ ನಿರ್ಧರಿಸಿದೆ. ಮಾತ್ರವಲ್ಲದೇ, ಪರಿಕ್ಕರ್ ಪುತ್ರರಾದ ಉತ್ಪಲ್ ಮತ್ತು ಅಭಿಜಾತ್ ಅವರನ್ನೂ ಬಿಜೆಪಿ ಮುಖಂಡರುಗಳು ಭೇಟಿಯಾಗಿ ತಂದೆಯ ಪರಂಪರೆ ಮುಂದುವರೆಸುವಂತೆ ಕೇಳಿಕೊಂಡಿದ್ದಾರೆ.
‘ಎಲ್ಲಾ 40 ಕ್ಷೇತ್ರಗಳ ನದಿಗಳಲ್ಲಿ ಚಿತಾಭಸ್ಮವನ್ನು ವಿಸರ್ಜನೆಗೊಳಿಸಲಾಗುತ್ತದೆ. ವಿಸರ್ಜನಾ ಪ್ರಕ್ರಿಯೆ ಮಾರ್ಚ್ 27ರಂದು ಪೂರ್ಣಗೊಳ್ಳಲಿದೆ’ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಗೋವಾ ಬಿಜೆಪಿ ಅಧ್ಯಕ್ಷ ವಿನಯ್ ತೆಂಡೂಲ್ಕರ್ ತಿಳಿಸಿದ್ದಾರೆ.
ದಿವಂಗತ ಮುಖ್ಯಮಂತ್ರಿಗಳ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಮತ್ತು ಪ್ರಾರ್ಥಿವ ಶರೀರಕ್ಕೆ ಅಂತಿಮ ಗೌರವವನ್ನು ಸಲ್ಲಿಸಲು ಸಾಧ್ಯವಾಗದೇ ಇರುವವರಿಗಾಗಿ ಈ ಕಾರ್ಯವನ್ನು ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಪರಿಕ್ಕರ್ ನಿಧನದ ಹಿನ್ನಲೆಯಲ್ಲಿ ಘೋಷಿಸಲಾದ 7 ದಿನಗಳ ಶೋಕಾಚರಣೆ ಭಾನುವಾರ ಅಂತ್ಯವಾಗಿದೆ, 12 ದಿನಗಳ ಶೋಕಾಚರಣೆ ಮಾರ್ಚ್ 28ಕ್ಕೆ ಅಂತ್ಯಗೊಳ್ಳಲಿದೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ಪರಿಕ್ಕರ್ ಅವರು ಮಾರ್ಚ್ 17ರಂದು ನಿಧನರಾಗಿದ್ದರು.
‘ಪರಿಕ್ಕರ್ ಅವರ ಸಾವಿನ ಬಳಿಕ ಅವರ ಇಬ್ಬರೂ ಮಕ್ಕಳನ್ನು ಭೇಟಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅವಿನಾಶ್ ರಾಯ್ ಖನ್ನಾ ಅವರು, ಬಿಜೆಪಿ ಪಕ್ಷವನ್ನು ಸೇರುವಂತೆ ಮನವಿಯನ್ನು ಮಾಡಿದ್ದಾರೆ’ ಎಂದು ತೆಂಡೂಲ್ಕರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.