ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯು, ದೇಶದ ಶತ್ರುಗಳೊಂದಿಗೆ ಹೋರಾಟ ನಡೆಸುವವರ ಮತ್ತು ರಾಜಕೀಯ ಕಾರಣಗಳಿಗಾಗಿ ದೇಶದ ಶಸ್ತ್ರಾಸ್ತ್ರ ಪಡೆಗಳ ಸಾಧನೆಯನ್ನು ಪ್ರಶ್ನಿಸುವವರ ನಡುವೆ ನಡೆಯಲಿದೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಭಾನುವಾರ ಕೊಲ್ಹಾಪುರದಲ್ಲಿ ನಡೆದ ಶಿವಸೇನೆ ಮತ್ತು ಬಿಜೆಪಿಯ ಜಂಟಿ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಹಾಲಕ್ಷ್ಮೀ ದೇಗುಲಕ್ಕೆ ತೆರಳಿ ಅಂಬಾಬಾಯಿ ದೇವಿಗೆ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ಫಡ್ನವಿಸ್ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯವರು ಚುನಾವಣಾ ಪ್ರಚಾರ ಸಮಾವೇಶಕ್ಕೆ ಚಾಲನೆಯನ್ನು ನೀಡಿದರು.
‘ನಮ್ಮ ಮೈತ್ರಿಗಳನ್ನು ನಾವು ನಿರ್ಧರಿಸಿದ್ದೇವೆ ಮತ್ತು ಟಿಕೆಟ್ಗಳನ್ನೂ ಹಂಚಿಕೆ ಮಾಡಿದ್ದೇವೆ, ಆದರೆ ಪ್ರತಿಪಕ್ಷಗಳ ಕಥೆ ಏನು? ನಮ್ಮ ಬಳಿ 56 ಪಕ್ಷಗಳಿವೆ ಎಂದು ಅವರು ಹೇಳುತ್ತಿದ್ದಾರೆ, ಆದರೆ ಚುನಾವಣೆ ಗೆಲ್ಲಲು ನಿಮಗೆ 56 ಪಕ್ಷಗಳ ಅಗತ್ಯವಿಲ್ಲ. ನಿಮಗೆ 56 ಇಂಚು ಎದೆಗಾರಿಕೆಯ ಅವಶ್ಯಕತೆ ಇದೆ’ ಎನ್ನುವ ಮೂಲಕ ಫಡ್ನವಿಸ್ ಪ್ರತಿಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಶಿವಸೇನೆಯೊಂದಿಗಿನ ತಮ್ಮ ಪಕ್ಷದ ಮೈತ್ರಿಯನ್ನು ‘ಹಿಂದುತ್ವವಾದಿ’ ಮೈತ್ರಿ ಎಂದು ಅವರು ಬಣ್ಣಿಸಿದ್ದು, ಜಾತಿ, ಧರ್ಮ, ಭಾಷೆಗೂ ಮೀರಿದ ಮೈತ್ರಿಯಾಗಿದೆ ಎಂದಿದ್ದಾರೆ. ಅಲ್ಲದೇ ನಮ್ಮ ಡಿಎನ್ಎನಲ್ಲಿಯೇ ರಾಷ್ಟ್ರೀಯತೆ ಇದೆ ಎನ್ನುವ ಮೂಲಕ, ಶರದ್ ಪವಾರ್ ಅವರ ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ)ಗೆ ಟಾಂಗ್ ನೀಡಿದ್ದಾರೆ.
ಭಾರತ ಮತ್ತು ಮಹಾರಾಷ್ಟ್ರ ಒಟ್ಟೊಟ್ಟಿಗೆ ಬದಲಾವಣೆ ಕಾಣುತ್ತಿದೆ ಎಂದಿರುವ ಫಡ್ನವಿಸ್, ಕಳೆದ 15 ವರ್ಷಗಳ ಅಂಕಿ-ಅಂಶವನ್ನು ತೆಗೆದು ಅದನ್ನು ಈಗಿನ ನಾಲ್ಕೂವರೆ ವರ್ಷಕ್ಕೆ ಹೋಲಿಸಿ ನೋಡಿ ಎಂದು ಕಾಂಗ್ರೆಸ್ ಪಕ್ಷದವರಿಗೆ ಸವಾಲು ಹಾಕಿದ್ದಾರೆ.
ಮಹಾರಾಷ್ಟ್ರದಲ್ಲಿ ಎಪ್ರಿಲ್ 11 ಮತ್ತು ಮೇ 19 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 23ರಂದು ಫಲಿತಾಂಶ ಬರಲಿದೆ. ಬಿಜೆಪಿ-ಶಿವಸೇನಾ ಮೈತ್ರಿ ಇಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿಯ ವಿರುದ್ಧ ಸೆಣಸಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.