ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕೈಯಲ್ಲಿ ದೇಶದ ಸುಭದ್ರವಾಗಿದೆ ಎಂಬುದನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಪುನರುಚ್ಚರಿಸಿದ್ದಾರೆ. ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಅವರು, ಆ ಪಕ್ಷ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇಂತಹ ಪಕ್ಷವನ್ನು ಮುಂಬರುವ ಚುನಾವಣೆಯಲ್ಲಿ ಜನರು ನಂಬಲು ಸಾಧ್ಯವೇ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಜೇಟ್ಲಿಯವರು ‘Agenda 2019 Part – 2: Prime Minister Modi’s Evolving National Security Doctrine’ ಎಂಬ ಶೀರ್ಷಿಕೆಯ ಬ್ಲಾಗ್ನ್ನು ಬರೆದಿದ್ದಾರೆ.
‘2016ರ ಸೆಪ್ಟಂಬರ್ನಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ನ್ನು ವಿರೋಧ ಪಕ್ಷದವರು ಅಲ್ಲಗೆಳೆದಿದ್ದರು ಮತ್ತು ಹಿಂದೆಯೂ ಅಂತಹ ದಾಳಿಗಳನ್ನು ನಡೆಸಲಾಗಿತ್ತು ಎಂದು ಹೇಳಲಾರಂಭಿಸಿದರು. ವೈಮಾನಿಕ ದಾಳಿಯ ಬಗೆಗಿನ ಅವರ ಧೋರಣೆ ಇನ್ನಷ್ಟು ಅಘಾತಕಾರಿಯಾಗಿದೆ’ ಎಂದಿದ್ದಾರೆ.
‘ದೇಶೀಯ ರಾಜಕಾರಣದಲ್ಲಿ ತನ್ನ ಗುಂಡಿಯನ್ನು ತಾನೇ ತೋಡಿಕೊಳ್ಳುವ ಧೋರಣೆಯನ್ನು ಕಾಂಗ್ರೆಸ್ ತಾಳುತ್ತಿದೆ. ರಾಹುಲ್ ಗಾಂಧಿ ಸೇರಿದಂತೆ ಅದರ ಇನ್ನಿತರ ಮುಖಂಡರ ಹೇಳಿಕೆಗಳು ಪಾಕಿಸ್ಥಾನದ ಟೆಲಿವಿಷನ್ಗಳಲ್ಲಿ ಪ್ರಸಾರಗೊಳ್ಳುತ್ತಿವೆ. ತಮ್ಮ ಸುಳ್ಳಿನ ಕಂತೆಯನ್ನು ಸಮರ್ಥಿಸಿಕೊಳ್ಳಲು ಅವರು ಈ ನಾಯಕರ ಹೇಳಿಕೆಗಳನ್ನು ಬಳಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
’10 ವರ್ಷಗಳ ಆಡಳಿತದ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ನಿಭಾಯಿಸುವ ಬಗ್ಗೆ ಯುಪಿಎಗೆ ಯಾವುದೇ ರಚನಾತ್ಮಕ ಯೋಜನೆಗಳಿರಲಿಲ್ಲ. ಆದರೆ ಮೋದಿಯವರು ಉತ್ತಮ ಉದ್ದೇಶದೊಂದಿಗೆ ಪಾಕಿಸ್ಥಾನದೊಂದಿಗೆ ಸಂಬಂಧವನ್ನು ಮೃದುಗೊಳಿಸುವ ಪ್ರಯತ್ನಗಳನ್ನು ಮಾಡಿದರು, ಆದರೆ ಪಾಕಿಸ್ಥಾನ ಪಠಾನ್ಕೋಟ್, ಉರಿ, ಪುಲ್ವಾಮಗಳ ಮೂಲಕ ಸ್ಪಂದನೆ ನೀಡಿತು’ ಎಂದಿದ್ದಾರೆ.
‘ಜೆಎನ್ಯುನಿಂದ ಹಿಡಿದು ಛತ್ತೀಸ್ಗಢದವರೆಗೆ ಎಡಪಂಥೀಯ ತೀವ್ರಗಾಮಿಗಳೊಂದಿಗೆ ಕಾಂಗ್ರೆಸ್ ಕೈಜೋಡಿಸುವ ಪ್ರಯತ್ನ ಮಾಡಿತು. ಈ ಎಡಪಂಥೀಯ ತೀವ್ರಗಾಮಿಗಳು ಕಾಶ್ಮೀರದಲ್ಲಿನ ಜಿಹಾದ್ನ್ನು ಉತ್ತೇಜಿಸುತ್ತಲೇ ಬಂದಿದ್ದಾರೆ’ ಎಂದಿದ್ದಾರೆ.
‘ಎಡಪಂಥೀಯ ತೀವ್ರಗಾಮಿತನ, ಜಿಹಾದಿ ಉಗ್ರರ ಗಂಭೀರ ಬೆದರಿಕೆಗಳನ್ನು ಎದುರಿಸುತ್ತಿರುವ ದೇಶದ ಜನರು, ಉಗ್ರ ವಿರೋಧಿ ಹೋರಾಟವನ್ನು ದುರ್ಬಲಗೊಳಿಸುತ್ತಿರುವವರನ್ನು ಬೆಂಬಲಿಸಲು ಸಾಧ್ಯವೇ ಇಲ್ಲ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.