ನವದೆಹಲಿ: ದೇಶದಲ್ಲಿ ಸಾರ್ವತ್ರಿಕ ಚುನಾವಣೆ ದಿನಾಂಕ ನಿಗದಿಯಾಗಿದೆ. ಚುನಾವಣಾ ನೀತಿ ಸಂಹಿತೆ ನಿನ್ನೆಯಿಂದಲೇ ಜಾರಿಗೆ ಬಂದಿದೆ. ಈ ಹಿನ್ನಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಶೇಷ ವಿಮಾನಕ್ಕೆ ಗುಡ್ಬೈ ಹೇಳಿ, ಚೆನ್ನೈನಿಂದ ದೆಹಲಿಗೆ ವಾಣಿಜ್ಯ ವಿಮಾನದಲ್ಲೇ ಪ್ರಯಾಣ ಬೆಳೆಸಿದ್ದಾರೆ.
ಚೆನ್ನೈನಲ್ಲಿ ಸಚಿವೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು, ಚುನಾವಣೆ ಘೋಷಣೆಯಾದ ಬಳಿಕ ಅವರು ಸರ್ಕಾರಿ ಕಾರು ಮತ್ತು ಬೆಂಗಾವಲು ವಾಹನಗಳನ್ನೂ ಬಳಸಿಕೊಂಡಿಲ್ಲ, ಬಿಜೆಪಿ ನಾಯಕರ ಕಾರಿನಲ್ಲಿ ವಿಮಾನನಿಲ್ದಾಣಕ್ಕೆ ಆಗಮಿಸಿದರು. ಅಲ್ಲಿ ಅವರು ವಿಶೇಷ ವಿಮಾನ ಬಳಸುವುದು ನಿಗದಿಯಾಗಿತ್ತು, ಆದರೆ ಚುನಾವಣಾ ದಿನಾಂಕ ಘೋಷಣೆಯಾದ ಹಿನ್ನಲೆಯಲ್ಲಿ ಅವರು ವಾಣಿಜ್ಯ ವಿಮಾನದಲ್ಲೇ ಪ್ರಯಾಣಿಸಿದರು.
ರಾತ್ರಿ 8.40ರ ವಿಮಾನದಲ್ಲಿ ಅವರು ಚೆನ್ನೈನಿಂದ ದೆಹಲಿಗೆ ಪ್ರಯಾಣಿಸಿದ್ದಾರೆ. ತನ್ನನ್ನು ಭೇಟಿಯಾಗಲು ಟರ್ಮಿನಲ್ಸ್ಗೂ ಬರದಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಚುನಾವಣಾ ನೀತಿ ಸಂಹಿತೆ ಅನುಷ್ಠಾನಕ್ಕೆ ಬಂದ ಬಳಿಕ ಸರ್ಕಾರ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಬಾರದು, ಜನಪ್ರತಿನಿಧಿಗಳು ಸರ್ಕಾರದ ವಾಹನಗಳು ಸೇರಿದಂತೆ ಇತರ ಸೌಲಭ್ಯಗಳನ್ನು ಬಳಸಬಾರದು ಎಂಬ ನಿಯಮಗಳಿವೆ.
ಆದರೆ ಚುನಾವಣಾ ನೀತಿ ಸಂಹಿತೆಗಳನ್ನು ಗಾಳಿಗೆ ತೂರುವ ರಾಜಕಾರಣಿಗಳು ಹೆಚ್ಚಾಗಿರುವ ಈ ಸಂದರ್ಭದಲ್ಲಿ ನಿಯಮವನ್ನು ತ್ವರಿತವಾಗಿ ಅನುಸರಿಸುವ ಮೂಲಕ ನಿರ್ಮಲಾ ಸೀತಾರಾಮನ್ ಎಲ್ಲರಿಗೂ ಮಾದರಿ ಎನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.