ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತವು ಪೂರ್ವದ ಮೂರು ನದಿಗಳ ನೀರು ಪಾಕಿಸ್ಥಾನಕ್ಕೆ ಹರಿದು ಹೋಗುವುದನ್ನು ತಡೆಹಿಡಿದಿದೆ. ಈ ಮಾಹಿತಿಯನ್ನು ಕೇಂದ್ರ ಸಚಿವ ಅರ್ಜುನ್ ಮೇಘಾವಾಲ್ ಅವರು ರಾಜಸ್ಥಾನದ ಬಿಕನೇರ್ನಲ್ಲಿ ಖಚಿತಪಡಿಸಿದ್ದಾರೆ. ಫೆ.14ರಂದು ಪುಲ್ವಾಮ ದಾಳಿ ನಡೆದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ತೀವ್ರವಾಗಿ ಹದಗೆಟ್ಟ ಪರಿಣಾಮ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ದಾಳಿಗೆ ಪಾಕ್ ಮೂಲದ ಉಗ್ರ ಸಂಘಟನೆ ಜೈಶೇ ಇ ಮೊಹಮ್ಮದ್ ಕಾರಣವಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಜಲಸಂಪನ್ಮೂಲ ಖಾತೆ ರಾಜ್ಯ ಸಚಿವ ಮೇಘಾವಾಲ್ ಅವರು, ’ಪೂರ್ವದ ನದಿಗಳಿಂದ ಪಾಕಿಸ್ಥಾನಕ್ಕೆ ಹರಿಯುತ್ತಿದ್ದ ೦.53 ಮಿಲಿಯನ್ ಎಕರೆ-ಅಡಿ ನೀರನ್ನು ತಡೆಹಿಡಿಯಲಾಗಿದ್ದು, ಅವುಗಳನ್ನು ಸಂಗ್ರಹ ಮಾಡಲಾಗುತ್ತಿದೆ. ಪಂಜಾಬ್ ಮತ್ತು ರಾಜಸ್ಥಾನಕ್ಕೆ ಅಗತ್ಯಬಿದ್ದಾಗ ಈ ಸಂಗ್ರಹಿಸಿದ ನೀರನ್ನು ಕುಡಿಯಲು ಮತ್ತು ನೀರಾವರಿಗೆ ಬಿಡುಗಡೆ ಮಾಡಲಾಗುತ್ತದೆ’ ಎಂದಿದ್ದಾರೆ.
ಭಾರತ ಸರ್ಕಾರದ ಈ ಕ್ರಮ 1960ರ ಅಂತಾರಾಷ್ಟ್ರೀಯ ಸಿಂಧು ನದಿ ನೀರು ಒಪ್ಪಂದವನ್ನು ಯಾವುದೇ ರೀತಿಯಲ್ಲೂ ಉಲ್ಲಂಘನೆ ಮಾಡಿಲ್ಲ. ಸಟ್ಲೇಜ್, ರವಿ ಮತ್ತು ಬೀಯಸ್ ನದಿಯ ಭಾರತದ ಪಾಲಿನ ನೀರನ್ನೇ ಪಾಕಿಸ್ಥಾನಕ್ಕೆ ಹೋಗುವುದನ್ನು ಭಾರತ ತಡೆದಿದೆ.
ಸಿಂಧು ನದಿ ಒಪ್ಪಂದದ ಅನ್ವಯ ಭಾರತದ ಪಾಲಿನ ನೀರು ಪಾಕಿಸ್ಥಾನಕ್ಕೆ ಹರಿದು ಹೋಗುವುದನ್ನು ನಾವು ನಿಲ್ಲಿಸುತ್ತೇವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಪುಲ್ವಾಮ ದಾಳಿಯ ಬಳಿಕ ಹೇಳಿದ್ದರು. ಇದೀಗ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಒಪ್ಪಂದದ ಪ್ರಕಾರ, ಸಿಂಧು, ಜೆಲಂ ಮತ್ತು ಚೆನಾನ್ ನದಿಯ ನೀರನ್ನು ಪಾಕಿಸ್ಥಾನ ಬಳಸುತ್ತದೆ. ಸಟ್ಲೇಜ್, ರವಿ ಮತ್ತು ಬೀಯಸ್ ನದಿಯ ನೀರನ್ನು ಭಾರತ ಬಳಸುತ್ತಿದೆ.
ಪೂರ್ವದ ನದಿಗಳ ನೀರಿನಲ್ಲಿ 33 ಮಿಲಿಯನ್ ಎಕರೆ ಅಡಿ ತಾಂತ್ರಿಕವಾಗಿ ಭಾರತಕ್ಕೆ ಸೇರಿದ್ದು. ದೇಶದಲ್ಲಿ ಬಳಕೆಯಾಗುವ ಸುಮಾರು ಶೇ.95ರಷ್ಟು ನೀರು ನದಿಯ ಪ್ರಮುಖ ಅಣೆಕಟ್ಟುಗಳಿಂದ ಹರಿಯುತ್ತವೆ, ಸುಮಾರು ಶೇ.5ರಷ್ಟು ಕಳೆದ 60 ವರ್ಷಗಳಿಂದ ಪಾಕಿಸ್ಥಾನಕ್ಕೆ ಹರಿದು ಹೋಗುತ್ತಿದೆ. ಇದನ್ನು ಪ್ರಸ್ತುತ ನಿಲ್ಲಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.