ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ಅವರ ಬಿಡುಗಡೆಯನ್ನು ಪಾಕಿಸ್ಥಾನ ಘೋಷಿಸಿದ ತರುವಾಯ, ಗುರುವಾರ ತಡರಾತ್ರಿ ಅಭಿನಂದನ್ ಅವರ ತಂದೆ ಮಾಜಿ ಏರ್ಮಾರ್ಷಲ್ ವರ್ತಮಾನ್ ಹಾಗೂ ತಾಯಿ ಶೋಭಾ ಅವರು ಚೆನ್ನೈನಿಂದ ವಿಮಾನದ ಮೂಲಕ ದೆಹಲಿಗೆ ಆಗಮಿಸಿದ್ದಾರೆ. ಈ ವೇಳೆ ವಿಮಾನದ ಸಹಪ್ರಯಾಣಿಕರು ಎದ್ದು ನಿಂತು, ಚಪ್ಪಾಳೆಯ ಮೂಲಕ ಅವರಿಗೆ ಗೌರವವನ್ನು ಸೂಚಿಸಿದ್ದಾರೆ.
ಅಭಿನಂದನ್ ತಂದೆ ಮತ್ತು ತಾಯಿಯನ್ನು ಕಂಡು ವಿಮಾನದ ಸಹಪ್ರಯಾಣಿಕರು ಘೋಷಣೆಗಳನ್ನು ಹಾಕಿದ್ದಾರೆ, ಎದ್ದು ನಿಂತು ಅವರಿಗೆ ಗೌರವ ಅರ್ಪಿಸಿದ್ದಾರೆ, ಚಪ್ಪಾಳೆಯನ್ನು ತಟ್ಟಿದ್ದಾರೆ. ಅವರ ಮಗ ದೇಶದ ಹೆಮ್ಮೆಯ ಪ್ರತೀಕವಾಗಿದ್ದು, ಸಾಹಸ ಮತ್ತು ಅಪ್ರತಿಮ ಧೈರ್ಯದ ಮೂಲಕ ದೇಶದ ಮನಸ್ಸನ್ನು ಗೆದ್ದಿದ್ದಾರೆ.
ಇವರ ವಿಮಾನ ಮಧ್ಯ ರಾತ್ರಿ ದೆಹಲಿ ಏರ್ಪೋರ್ಟ್ಗೆ ಬಂದಿಳಿದಿದೆ. ಅಭಿನಂದನ್ ಅವರನ್ನು ಪಾಕಿಸ್ಥಾನ ಇಂದು ಮಧ್ಯಾಹ್ನ ವಾಘಾ ಗಡಿಯ ಮೂಲಕ ಭಾರತಕ್ಕೆ ಹಸ್ತಾಂತರ ಮಾಡಲಿದೆ.
ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಚೇಸ್ ಮಾಡಿ ಹೊಡೆದುರುಳಿಸುವ ಸಂದರ್ಭ ಅಭಿನಂದನ್ ಅವರಿದ್ದ ಮಿಗ್-21 ವಿಮಾನ ಪತನಗೊಂಡಿತ್ತು. ಈ ವೇಳೆ ಪ್ಯಾರಾಚೂಟ್ ಹಿಡಿದು ಕೆಳಕ್ಕೆ ಹಾರಿದ್ದ ಅವರು ಪಾಕಿಸ್ಥಾನ ನೆಲದಲ್ಲಿ ಬಿದ್ದಿದ್ದರು. ಅಲ್ಲಿ ಅವರನ್ನು ಪಾಕ್ ಸೈನಿಕರು ವಶಕ್ಕೆ ಪಡೆದುಕೊಂಡಿದ್ದಾರೆ.
ಭಾರತದ ತೀವ್ರ ಒತ್ತಡಕ್ಕೆ ಮಣಿದು ಅಭಿನಂದನ್ ಅವರನ್ನು ಪಾಕಿಸ್ಥಾನ ಇಂದು ಬಿಡುಗಡೆಗೊಳಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.