ನವದೆಹಲಿ: ಪುಲ್ವಾಮ ದಾಳಿಯಲ್ಲಿ 40 ಯೋಧರನ್ನು ಕಳೆದುಕೊಂಡ ಭಾರತ ಶೋಕ ಸಾಗರದಲ್ಲಿ ಮುಳುಗಿದೆ. ದಾಳಿಯ ಹಿಂದಿನ ರುವಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂಬುದು ಸಮಸ್ತ ಭಾರತೀಯನ ಒಕ್ಕೊರಲ ಕೋರಿಕೆಯಾಗಿದೆ. ಹುತಾತ್ಮರ ಕುಟುಂಬಗಳಿಗೆ ಸಹಾಯ ಮಾಡುವ ವಿಷಯದಲ್ಲೂ ಭಾರತೀಯರು ಜೊತೆಗೂಡಿದ್ದಾರೆ. ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರೂ ಹುತಾತ್ಮರಾದ ಸಿಆರ್ಪಿಎಫ್ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ.
ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು, 40 ಸಿಆರ್ಪಿಎಫ್ ಯೋಧರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿಗಳನ್ನು ನೀಡಲು ಮುಂದಾಗಿದ್ದಾರೆ. ಯಾವ ರೀತಿಯಲ್ಲಿ ಹಣವನ್ನು ವರ್ಗಾಯಿಸಬಹುದು ಎಂಬ ಬಗ್ಗೆ ಅವರು ಪರಿಶೀಲನೆಗಳನ್ನು ನಡೆಸುತ್ತಿದ್ದಾರೆ ಎಂದು ಅವರ ವಕ್ತಾರರು ಹೇಳಿದ್ದಾರೆ.
ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರು, ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ವೆಚ್ಚಚನ್ನು ತಾನು ಭರಿಸುವುದಾಗಿ ಹೇಳಿದ್ದಾರೆ. ಸೆಹ್ವಾಗ್ ಇಂಟರ್ನ್ಯಾಷನಲ್ ಸ್ಕೂಲಿನಲ್ಲಿ ಈ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.
ಬಾಕ್ಸರ್ ವಿಜೇಂದರ್ ಸಿಂಗ್ ತಮ್ಮ ಒಂದು ತಿಂಗಳ ವೇತನವನ್ನು ಹುತಾತ್ಮರ ಕುಟುಂಬದವರಿಗಾಗಿ ನೀಡಿದ್ದಾರೆ.
ರಿಲಾಯನ್ಸ್ ಫೌಂಡೇಶನ್ ಎಲ್ಲಾ ಹುತಾತ್ಮ ಯೋಧರ ಮಕ್ಕಳ ಶಿಕ್ಷಣ ಮತ್ತು ಇತರ ವೆಚ್ಚವನ್ನು ಭರಿಸುತ್ತದೆ ಎಂಬುದಾಗಿ ಈಗಾಗಲೇ ಅದರ ಮುಖ್ಯಸ್ಥೆ ನೀತಾ ಅಂಬಾನಿ ಘೋಷಣೆ ಮಾಡಿದ್ದಾರೆ.
ಮಹಾರಾಷ್ಟ್ರದ ಖ್ಯಾತ ಸಿದ್ಧಿ ವಿನಾಯಕ ದೇಗುಲವು, ಹುತಾತ್ಮ ಯೋಧರಿಗಾಗಿ ರೂ. 51 ಲಕ್ಷವನ್ನು ಕೊಡುಗೆ ನೀಡಿದೆ. ಈ ಮೂಲಕ ಯೋಧರ ಕಷ್ಟಕ್ಕೆ ನೆರವಾಗಿದೆ.
ಗುಜರಾತ್ನ ಉದ್ಯಮಿಯೊಬ್ಬರು ಮಗಳ ಔತಣಕೂಟವನ್ನು ರದ್ದುಪಡಿಸಿ ಅದರ ಹಣ ರೂ. 11 ಲಕ್ಷವನ್ನು ಹುತಾತ್ಮ ಯೋಧರ ಕುಟುಂಬದವರಿಗೆ ನೀಡಿದ್ದಾರೆ.
ಬಿಹಾರ ಮೂಲಕ ಇಬ್ಬರು ಹುತಾತ್ಮ ಯೋಧರ ಪುತ್ರಿಯರನ್ನು ದತ್ತು ಸ್ವೀಕರಿಸಿ ಅವರ ಶಿಕ್ಷಣದ ವೆಚ್ಚ ಭರಿಸುವುದಾಗಿ ಬಿಹಾರದ ಶೇಖ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಇನಾಯತ್ ಖಾನ್ ಘೋಷಿಸಿದ್ದಾರೆ.
ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಡಾ. ಸುಧಾಮೂರ್ತಿ ಎಲ್ಲಾ ಹುತಾತ್ಮ ಯೋಧರ ಕುಟುಂಬದವರಿಗೆ ತಲಾ 10 ಲಕ್ಷ ರೂ. ನೀಡುವುದಾಗಿ ಹೇಳಿದ್ದಾರೆ.
ಇವರಷ್ಟೇ ಅಲ್ಲದೇ, ನಟ ವಿಜಯ ದೇವರಕೊಂಡ, ಸಲ್ಮಾನ್ ಖಾನ್ ಕೂಡ ದೇಣಿಗೆಯನ್ನು ನೀಡಿದ್ದಾರೆ. ಹುತಾತ್ಮ ಯೋಧರಿಗೆ ಭಾರತೀಯರು ನೆರವಿನ ಹಸ್ತ ಚಾಚುತ್ತಿರುವ ಹಿನ್ನಲೆಯಲ್ಲಿ, ಪೆಟಿಎಂ ಡೊನೇಶನ್ ರೂ.10 ಕೋಟಿಗಳಿಗೆ ಏರಿಕೆಯಾಗಿದೆ.
ಹಣದಿಂದ ಹುತಾತ್ಮ ಯೋಧರ ಕುಟುಂಬದ ನೋವು ಮಾಸಲು ಸಾಧ್ಯವಿಲ್ಲ, ಆದರೆ ಕನಿಷ್ಠ ಪಕ್ಷ ಅವರ ಆರ್ಥಿಕ ಹೊರೆಯಾದರೂ ಕಡಿಮೆಯಾಗಬಹುದು ಎಂಬ ಆಶಯದಿಂದ ಭಾರತೀಯರು ಹಣವನ್ನು ನೀಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.