ನವದೆಹಲಿ: ಪುಲ್ವಾಮದಲ್ಲಿ ನಡೆದ ಸಿಆರ್ಪಿಎಫ್ ಯೋಧರ ಮೇಲಿನ ಭಯೋತ್ಪಾದನಾ ದಾಳಿಯ ವಿಷಯದಲ್ಲಿ ಎಲ್ಲಾ ಪಕ್ಷಗಳು ಒಗ್ಗಟ್ಟನ್ನು ಪ್ರದರ್ಶಿಸಿದ್ದು, ದೇಶದ ಏಕತೆ ಮತ್ತು ಸಾರ್ವಭೌಮತೆಯನ್ನು ರಕ್ಷಿಸುತ್ತಿರುವ ಭದ್ರತಾ ಪಡೆಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿವೆ.
ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳನ್ನು ಒಳಗೊಂಡ ಸರ್ವ ಪಕ್ಷ ಸಭೆ ಇಂದು ನಡೆದಿದ್ದು, ಭಯೋತ್ಪಾದನಾ ದಾಳಿ ಮತ್ತು ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವುದನ್ನು ಖಂಡಿಸಿ ನಿರ್ಣಯವನ್ನು ಅಂಗೀಕರಿಸಿವೆ.
ನಿರ್ಣಯದಲ್ಲಿ ಪಾಕಿಸ್ಥಾನವನ್ನು ಹೆಸರಿಸಲಾಗಿಲ್ಲ ಆದರೆ ಭಾರತದ ಗಡಿಯಾಚೆಗಿನ ಭಯೋತ್ಪಾದನೆಯನ್ನು ತೀವ್ರ ಸ್ವರೂಪದಲ್ಲಿ ಎದುರಿಸುತ್ತಿದೆ, ಈ ಭಯೋತ್ಪಾದನೆಗೆ ಗಡಿಯಾಚೆಗಿನ ಬೆಂಬಲ ಸಿಗುತ್ತಿದೆ ಎಂಬುದಾಗಿ ಉಲ್ಲೇಖಿಸಿದೆ.
ಸಭೆಯನ್ನು ಕೇಂದ್ರ ಗೃಸಚಿವ ರಾಜನಾಥ್ ಸಿಂಗ್ ಅವರು ನಡೆಸಿಕೊಟ್ಟಿದ್ದು. ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಭಾರತ ಒಗ್ಗಟ್ಟು ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳಲಿದೆ ಎಂಬುದನ್ನು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
‘ಭಾರತ ಕಳೆದ ಮೂರು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಎಲ್ಲಾ ಮಾದರಿಯ ಭಯೋತ್ಪಾದನೆಯನ್ನು ಮತ್ತು ಇದಕ್ಕೆ ಗಡಿಯಾಚೆ ಸಿಗುತ್ತಿರುವ ಬೆಂಬಲವನ್ನು ನಾವು ಖಂಡಿಸುತ್ತೇವೆ. ಭಾರತದ ಭಯೋತ್ಪಾದನೆಗೆ ಗಡಿಯಾಚೆಯಿಂದ ಸಾಕಷ್ಟು ಉತ್ತೇಜನಗಳು ದೊರೆಯುತ್ತಿವೆ. ಭಾರತ ಈ ಸಮಸ್ಯೆ ಎದುರಿಸುವಲ್ಲಿ ಬಲಿಷ್ಠತೆ ಮತ್ತು ಸ್ಥಿರತೆಯನ್ನು ಪ್ರದರ್ಶಿಸಿದೆ. ಈ ಸವಾಲನ್ನು ಎದುರಿಸಲು ಇಡೀ ದೇಶವೇ ಒಗ್ಗಟ್ಟಿನ ಧ್ವನಿ ಎತ್ತಿದೆ. ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಾ, ಭಾರತದ ಸಾರ್ವಭೌಮತೆ ಮತ್ತು ಏಕತೆಯನ್ನು ರಕ್ಷಣೆ ಮಾಡುತ್ತಿರುವ ಸೇನೆಯೊಂದಿಗೆ ನಾವು ನಿಲ್ಲುತ್ತೇವೆ’ ಎಂಬುದಾಗಿ ಸರ್ವಪಕ್ಷ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯದಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.