ವಾಷಿಂಗ್ಟನ್: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ನಡೆದ ದಾಳಿಯನ್ನು ವಿಶ್ವ ನಾಯಕರು ಖಂಡಿಸಿದ್ದು, ಈ ಕಠಿಣ ಪರಿಸ್ಥಿತಿಯಲ್ಲಿ ಭಾರತದ ಜೊತೆ ನಿಲ್ಲುತ್ತೇವೆ ಎಂದಿದ್ದಾರೆ.
ಜಮ್ಮುವಿನಿಂದ ಶ್ರೀನಗರಕ್ಕೆ 78 ಬಸ್ಗಳಲ್ಲಿ 2,500 ಯೋಧರು ತೆರಳುತ್ತಿದ್ದ ಸಂದರ್ಭದಲ್ಲಿ, ಸ್ಫೋಟಕಗಳನ್ನು ತುಂಬಿದ ವಾಹನದ ಮೂಲಕ ಸ್ಪೋಟ ನಡೆಸಿ 44 ಯೋಧರನ್ನು ಹೇಡಿ ಉಗ್ರರು ಹತ್ಯೆ ಮಾಡಿದ್ದಾರೆ. ಈ ಘಟನೆ ವಿಶ್ವವನ್ನೇ ದಿಗ್ಬ್ರಾಂತಗೊಳಿಸಿದ್ದು, ಪಾಪಿಗಳ ಕೃತ್ಯಕ್ಕೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ.
ಬಾಂಗ್ಲಾದೇಶ, ಇಸ್ರೇಲ್ನಿಂದ ಹಿಡಿದು ಯುಎಸ್ವರೆಗೆ ಎಲ್ಲಾ ರಾಷ್ಟ್ರಗಳು ಘಟನೆಯನ್ನು ಖಂಡಿಸಿ, ಹುತಾತ್ಮರಿಗೆ ಸಂತಾಪ ಸೂಚಿಸಿದೆ. ಈ ಪರಿಸ್ಥಿತಿಯಲ್ಲಿ ಭಾರತದ ಜೊತೆ ನಿಲ್ಲುತ್ತೇವೆ ಎಂಬ ಭರವಸೆಯನ್ನು ನೀಡಿದೆ.
ಘಟನೆಯನ್ನು ಖಂಡಿಸಿರುವ ಅಮೆರಿಕಾ, ಎಲ್ಲಾ ದೇಶಗಳು ಉಗ್ರರಿಗೆ ಸುರಕ್ಷಿತ ನೆಲೆ ಕಲ್ಪಿಸುವುದನ್ನು ನಿಲ್ಲಿಸಬೇಕು. ಭಯೋತ್ಪಾದನೆಯನ್ನು ಎಲ್ಲಾ ವಿಧಾನದಲ್ಲೂ ಮಟ್ಟ ಹಾಕಲು ಭಾರತ ಸರ್ಕಾರದೊಂದಿಗೆ ಕೈಜೋಡಿಸುತ್ತೇವೆ ಎಂದಿದೆ.
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು ಘಟನೆಯನ್ನು ಖಂಡಿಸಿದ್ದು, ಭಯೋತ್ಪಾದನೆಯನ್ನು ಹತ್ತಿಕ್ಕಲು ಕಟಿಬದ್ಧರಾಗಿದ್ದೇವೆ. ಭಾರತಕ್ಕೆ ಬೆಂಬಲ ನೀಡುತ್ತೇವೆ ಎಂದಿದ್ದಾರೆ.
ಅಫ್ಘಾನಿಸ್ಥಾನ ಘಟನೆಯನ್ನು ಕಟುವಾಗಿ ಖಂಡಿಸಿದ್ದು, ಒಂದು ರಾಷ್ಟ್ರವಾಗಿ ಕಳೆದ 18 ವರ್ಷಗಳಿಂದ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದ್ದೇವೆ. ಮುಂದೆಯೂ ಹೋರಾಡುತ್ತೇವೆ. ಈ ಕಾರ್ಯದಲ್ಲಿ ಭಾರತದ ಜೊತೆ ಜೊತೆಗೆ ಸಾಗುತ್ತೇವೆ ಎಂದು ಅಫ್ಘಾನ್ ಸಚಿವ ಸಿದ್ದೀಕ್ ಸದ್ದೀಕಿ ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಈ ಹೀನ ಕೃತ್ಯವನ್ನು ಬಲವಾಗಿ ಖಂಡಿಸುತ್ತೇವೆ. ತಪ್ಪಿತಸ್ಥರಿಗೆ ಶೀಘ್ರದಲ್ಲೇ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ.
ಫ್ರಾನ್ಸ್, ಮಾಲ್ಡೀವ್ಸ್, ಇಸ್ರೇಲ್, ಶ್ರೀಲಂಕಾ ನಾಯಕರುಗಳೂ ಘಟನೆಯನ್ನು ತೀವ್ರವಾಗಿ ಖಂಡಿಸಿ, ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.