ಲಕ್ನೋ: ಜನರು ನೀಡಿದ ಭಿಕ್ಷೆಯನ್ನೇ ಮೃಷ್ಟಾನ್ನದಂತೆ ಉಣ್ಣುವ ಭಿಕ್ಷಕರು ಸಮಾಜದ ಮುಖ್ಯ ವಾಹಿನಿಯಿಂದ ಸದಾ ದೂರವೇ ಉಳಿದಿರುತ್ತಾರೆ. ಇತರರೊಂದಿಗೆ ಬೆರೆಯುವ ಮನಸ್ಥಿತಿ ಅವರಿಗೆ ಇರುವುದಿಲ್ಲ ಅನ್ನುವುದಕ್ಕಿಂತಲೂ, ಅವರನ್ನು ಸೇರಿಸಿಕೊಳ್ಳುವ ಮನಸ್ಥಿತಿ ನಮ್ಮ ಸಮಾಜಕ್ಕೆ ಇರುವುದಿಲ್ಲ ಎಂಬುದೇ ಸರಿ.
ಆದರೆ ಅತೀ ವಿಶೇಷ ಎಂಬಂತೆ, ಉತ್ತರಪ್ರದೇಶದ ಗೋಮತಿ ನದಿಯನ್ನು ಸ್ವಚ್ಛಗೊಳಿಸಲು 17 ಭಿಕ್ಷುಕರ ತಂಡ ಟೊಂಕಕಟ್ಟಿ ನಿಂತಿದೆ, ಇದುವರೆಗೆ ಅವರು ಬರೋಬ್ಬರಿ 10 ಕ್ವಿಂಟಾಲ್ ಪ್ಲಾಸ್ಟಿಕ್ನ್ನು ನದಿಯಿಂದ ಹೊರತೆಗೆದಿದ್ದಾರೆ. ಮಾತ್ರವಲ್ಲ, ಪ್ರತಿ ಭಾನುವಾರ ನದಿಯ ಸ್ವಚ್ಛತೆಗಾಗಿ ದಿನವನ್ನು ಮೀಸಲಿಡಲು ಇವರು ನಿರ್ಧರಿಸಿದ್ದಾರೆ.
ಶರದ್ ಪಟೇಲ್ ಎಂಬುವವರು ನಡೆಸುತ್ತಿರುವ ಸಂಸ್ಥೆ ‘ಬದಲಾವ್’ ಎಂಬ ಕಾರ್ಯಕ್ರಮದಡಿ ಈ ಭಿಕ್ಷುಕರಿಗೆ ಪುನರ್ವಸತಿಯನ್ನು ಕಲ್ಪಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ.
ಮೊನ್ನೆ ಸೋಮವಾರ ಈ 17 ಮಂದಿಯ ತಂಡ ಬಲೆ, ಪೊರಕೆ, ಕಸದ ಬುಟ್ಟಿಗಳನ್ನು ಹಿಡಿದು ನದಿಯಿಂದ ಪ್ಲಾಸ್ಟಿಕ್ ತೆಗೆಯುವ ಕಾರ್ಯ ಮಾಡಿದೆ. ಬಳಿಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಲಕ್ನೋ ಮುನ್ಸಿಪಲ್ ಕಾರ್ಪೋರೇಶನ್ಗೆ ಮಾರಾಟ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪಟೇಲ್, ‘ನದಿಯನ್ನು ಸ್ವಚ್ಛ ಮಾಡುವುದು ನಮ್ಮ ಕರ್ತವ್ಯ ಮತ್ತು ಭಿಕ್ಷುಕರಿಗೆ ಪುನರ್ವಸತಿಯನ್ನು ನಾವು ಆರಂಭಿಸಿದ ಬಳಿಕ ನದಿ ಸ್ವಚ್ಛತೆಗೆ ಒಂದು ಪೂರಕ ವಾತಾವರಣ ನಿರ್ಮಾಣವಾಯಿತು. ಘಾಟ್ಗಳನ್ನು ನಾವು ಸಂಪೂರ್ಣ ಸ್ವಚ್ಛ ಮಾಡಿದ್ದೇವೆ. ಇತರ ಘಾಟ್ಗಳತ್ತವೂ ತೆರಳಿ ಸ್ವಚ್ಛತೆ ಮಾಡುತ್ತೇವೆ. ರಸ್ತೆಯಲ್ಲಿ ಕುಳಿತು ಭಿಕ್ಷಾಟನೆ ಮಾಡುತ್ತಿದ್ದವರೂ, ತಾವು ಸಮಾಜಕ್ಕೆ ಎಂತಹ ಕೊಡುಗೆಯನ್ನು ನೀಡಬಲ್ಲೆವು ಎಂಬುದನ್ನು ಇದರ ಮೂಲಕ ಅರ್ಥ ಮಾಡಿಕೊಳ್ಳಲಿ ಎಂಬ ಉದ್ದೇಶ ನಮ್ಮದಾಗಿದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.