ನವದೆಹಲಿ: ಭಾರತೀಯ ರೈಲ್ವೇ ನಿಲ್ದಾಣ ಅಭಿವೃದ್ಧಿ ಕಾರ್ಪೋರೇಶನ್(ಐಆರ್ಎಸ್ಡಿಸಿ)ಯು ಇದೇ ವರ್ಷ ದೇಶದ 50 ರೈಲು ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸಲು ಬರೋಬ್ಬರಿ ರೂ.7,500 ಕೋಟಿಗಳನ್ನು ಹೂಡಿಕೆ ಮಾಡಲಿದೆ.
ವಿಮಾನ ನಿಲ್ದಾಣದಂತೆ, ರೈಲ್ವೇ ನಿಲ್ದಾಣದಲ್ಲೂ ಪ್ರತ್ಯೇಕ ಆಗಮನ ಮತ್ತು ನಿರ್ಗಮನ ಪ್ರವೇಶಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಅಲ್ಲದೇ, ಭದ್ರತೆಯ ಸುಧಾರಣೆ ಮತ್ತು ಪ್ರಯಾಣಿಕರ ನಿರ್ವಹಣೆಯನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಐಆರ್ಎಸ್ಡಿಸಿ ನಿರ್ವಹಣಾ ನಿರ್ದೇಶಕ ಎಸ್.ಕೆ. ಲೋಹಿಯಾ ಅವರು, ’ಬಹುತೇಕ ರೈಲ್ವೇ ನಿಲ್ದಾಣಗಳಲ್ಲಿ ಪ್ರತ್ಯೇಕ ಆಗಮನ ಮತ್ತು ನಿರ್ಗಮನ ಪ್ರವೇಶವನ್ನು ರಚನೆ ಮಾಡುತ್ತೇವೆ. ಕಮ್ಮಿ ಜನಜಂಗುಳಿ ಇರುವ ರೈಲು ನಿಲ್ದಾಣಗಳು ಪ್ರಸ್ತುತ ಇರುವ ಮಾದರಿಯಲ್ಲೇ ಇರಲಿವೆ’ ಎಂದಿದ್ದಾರೆ.
‘ಸ್ಥಳಾವಕಾಶಕ್ಕೆ ಅನುಗುಣವಾಗಿ, ನಿರ್ಗಮನ ಮತ್ತು ಆಗಮನದ ಪ್ರದೇಶಗಳನ್ನು ವಿವಿಧ ಮಟ್ಟಗಳಲ್ಲಿ ಪ್ರತ್ಯೇಕಿಸಬೇಕೇ ಅಥವಾ ಅದೇ ಮಟ್ಟದಲ್ಲಿ ಪ್ರತ್ಯೇಕಿಸಬೇಕೆ ಎಂಬ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ.
ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಮೊದಲ ಹಂತದಲ್ಲಿ 50 ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದಕ್ಕೆ ಸುಮಾರು 7500 ಕೋಟಿ ರೂಪಾಯಿಗಳ ಹೂಡಿಕೆಯ ಅಗತ್ಯವಿದೆ. ಇಂಡಿಯನ್ ರೈಲ್ವೇ ಫಿನಾನ್ಸ್ ಕಾರ್ಪೋರೇಶನ್ನಿಂದ ಇದಕ್ಕಾಗಿ ರೂ.600 ಕೋಟಿಗಳನ್ನು ಸಾಲ ಪಡೆದುಕೊಳ್ಳಲಾಗುತ್ತದೆ. ಈ ಮೊತ್ತದಲ್ಲಿ ಆನಂದ್ ವಿಹಾರ್, ಬಿಜ್ವಾಸನ್, ಚಂಡೀಗಢ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ಈಗಾಗಲೇ ಅಭಿವೃದ್ಧಿ ಕಾಮಗಾರಿಗಳನ್ನು ಕಾಣುತ್ತಿರುವ ಗಾಂಧಿನಗರ, ಹಬಿಬ್ಗಂಜ್, ಚಾರ್ಭಾಗ್, ಗೋಮತಿನಗರ ನಿಲ್ದಾಣಗಳ ಕಾರ್ಯ 2019ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ರೈಲ್ವೇಯ ಪ್ರದೇಶ ಮತ್ತು ಸ್ಟೇಶನ್ಗಳನ್ನು ವಾಣಿಜ್ಯ ಕಾರಣಗಳಿಗಾಗಿ ಬಳಸಿ ಅದರ ಮೂಲಕವೂ ಆದಾಯ ಗಳಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.