ಶಿರಸಿಯ ಮಧ್ಯ ಭಾಗದ ಹೊಸಪೇಟೆ ರಸ್ತೆಯಲ್ಲಿ ಪ್ರಯಾಣಿಸಿದರೆ ಚಿಕ್ಕದಾದ ’ರವಿ ಪಾನ್ ಅಂಗಡಿ’ಯೊಂದು ಕಾಣಸಿಗುತ್ತದೆ. ಆ ಅಂಗಡಿಯ ಮಾಲೀಕನೆ ರವಿ. ಈ ಸಣ್ಣ ವ್ಯಾಪಾರಿಯ ಸಮಾಜಸೇವೆ ಮಾತ್ರ ದೊಡ್ಡದಾಗಿದೆ. ಬೀದಿ ಪ್ರಾಣಿಗಳ ಆರೈಕೆ, ರಕ್ತ ದಾನವನ್ನು ಇವರು ತಮ್ಮ ಜೀವನದ ಅವಿಭಾಜ್ಯ ಭಾಗವನ್ನಾಗಿಸಿಕೊಂಡಿದ್ದಾರೆ.
ಇವರ ಪಾನ್ ಅಂಗಡಿಯ ಮೇಲೆ ಹಾಕಲಾಗಿರುವ 2019 ರ ಕ್ಯಾಲೆಂಡರ್ ನೋಡಲು ಎಲ್ಲಾ ಕ್ಯಾಲೆಂಡರ್ಗಳಂತೆ ಕಾಣುತ್ತದೆ, ಆದರೆ ಅದರ ಕೆಳಗಿರುವ ದೂರವಾಣಿ ಸಂಖ್ಯೆಗಳು ಮಾತ್ರ ಇದನ್ನು ಉಳಿದೆಲ್ಲಾ ಕ್ಯಾಲೆಂಡರ್ಗಳಿಗಿಂತ ಭಿನ್ನವಾಗಿಸಿದೆ. ಯಾಕೆಂದರೆ ಸರ್ಕಾರಿ ಆಸ್ಪತ್ರೆ, ಅಂಬ್ಯುಲೆನ್ಸ್, ಪೊಲೀಸ್ ಸ್ಟೇಶನ್, ರುದ್ರಭೂಮಿ, ಬ್ಲಡ್ ಬ್ಯಾಂಕ್, ಹಾವು ಹಿಡಿಯುವವರು, ಮುನ್ಸಿಪಲ್ ಹೆಲ್ಪ್ಲೈನ್, ಬಸ್ಸ್ಟ್ಯಾಂಡ್, ಕೆಇಬಿ, ಫೈರ್ ಸರ್ವಿಸ್ ಮುಂತಾದ ಅಗತ್ಯ ದೂರವಾಣಿ ಸಂಖ್ಯೆಗಳು ಇವರ ಕ್ಯಾಲೆಂಡರ್ನಲ್ಲಿದೆ.
ಅತ್ಯಂತ ಅವಶ್ಯಕ ದೂರವಾಣಿ ಸಂಖ್ಯೆಗಳನ್ನು ನಮೋದಿಸಿರುವ ಕ್ಯಾಲೆಂಡರ್ ಅನ್ನು ಹಲವು ವರ್ಷಗಳಿಂದ ರವಿ ಜನರಿಗೆ ತಲುಪಿಸುತ್ತಿದ್ದಾರೆ. ಜನರು ತುರ್ತು ಸಂದರ್ಭಗಳಲ್ಲಿ ಪರದಾಡುವಂತಾಗದಿರಲಿ ಎಂಬುದು ಇವರ ಈ ಕಾರ್ಯದ ಹಿಂದಿನ ಉದ್ದೇಶವಾಗಿದೆ.
ಇವರು ಮಾಡುವ ಸೇವೆಗಳು ಒಂದೆರಡಲ್ಲ, ಯಾವ ಫೋಟೊಗೂ ಸಿಗದೆ, ಯಾವ ಪ್ರಚಾರಕ್ಕೂ ಸಿಗದೆ ಇರುವಂತಹ ಸಮಾಜ ಸೇವಕ ಇವರು. ಪಶುಗಳಿಗೆ ಬಾಯಾರಿಕೆಯಾದಾಗ ಕುಡಿಯಲು ತಮ್ಮ ಅಂಗಡಿಯ ಸತ್ತ ನೀರಿನ ತೊಟ್ಟಿಗಳನ್ನು ಇಟ್ಟಿದ್ದಾರೆ. ಅನಾರೋಗ್ಯ ಪೀಡಿತ ದನಗಳನ್ನು ಹಿಡಿದು ಅವುಗಳಿಗೆ ಔಷಧೋಪಚಾರ ಮಾಡುತ್ತಾರೆ. ಬಿಡಾಡಿ ನಾಯಿಗಳ ಆರೈಕೆ ಮಾಡುತ್ತಾರೆ. ಪ್ರತಿದಿನವೂ ರವಿಯವರ ಅಂಗಡಿಗೆ ಪಶುಗಳು ಬಂದು ತಮ್ಮ ಪಾಲನ್ನು ಪಡೆದು ಹೋಗುತ್ತವೆ.
ರಕ್ತದ ಅವಶ್ಯಕತೆ ಇದ್ದಾಗ ಒಂದು ಕಾಲ್ ಮಾಡಿದರೆ ಸಾಕು ರಕ್ತದಾನಕ್ಕೆ ಇವರು ಸಜ್ಜಾಗಿ ಬಿಡುತ್ತಾರೆ. ತನ್ನ ಗುಂಪಿನ ರಕ್ತ ಅಲ್ಲದೆ ಇದ್ದಲ್ಲಿ, ಹಲವು ಸಮಾನ ಮನಸ್ಕ ರಕ್ತದಾನಿಗಳನ್ನು ಸಂಪರ್ಕಿಸಿ ಅವರ ಮೂಲಕ ರಕ್ತ ಒದಗಿಸುವ ಕಾರ್ಯಕ್ಕೆ ಪ್ರಯತ್ನಿಸುತ್ತಾರೆ.
ಇವರು ಮಾಡುತ್ತಿರುವ ಸೇವೆ ಸಣ್ಣದೆಂದು ಅನಿಸಬಹುದು, ಆದರೆ ದೈನಂದಿನ ಬದುಕಿನಲ್ಲಿ ಮನುಷ್ಯನ ತುರ್ತು ಪರಿಸ್ಥಿತಿಗಳಿಗೆ ಅತೀ ಅವಶ್ಯಕ ಎನಿಸುವ ಕಾರ್ಯಗಳನ್ನೇ ರವಿ ದೇವರ ಸೇವೆಯಂತೆ, ಯಾವುದೇ ಪ್ರಚಾರವನ್ನು ಬಯಸದೆ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.