ಶ್ರೀಮಂತ ಬಡವ ಎನ್ನದೇ ಎಲ್ಲರನ್ನೂ ಒಂದಲ್ಲಾ ಒಂದು ದಿನ ಕಾಡಿ ಬದುಕನ್ನು ಹಿಂಡಿ ಹಿಪ್ಪೆ ಮಾಡುವ ಖಾಯಿಲೆಗಳು ಒಂದೆಡೆಯಾದರೆ ಆ ಖಾಯಿಲೆಗಳನ್ನು ಗುಣಪಡಿಸಲು ಲಭ್ಯವಿರುವ ಔಷಧಗಳು ಜನ ಸಾಮಾನ್ಯರ ಕೈಗೆಟುಕದಷ್ಟು ಏರಿ ನಿಂತಿರುವುದು ಮತ್ತೊಂದು ಕಡೆ. ಇಂತಹಾ ಪರಿಸ್ಥಿತಿಯಲ್ಲಿ ಶ್ರಮದ ದುಡಿಮೆಯನ್ನೇ ನಂಬಿಕೊಂಡಿರುವ ಬಡವರಿಗೆ,ಮಧ್ಯಮ ವರ್ಗದ ಜನರಿಗೆ ಖಾಯಿಲೆಯೊಂದು ಬಂದಿತೆಂದರೆ ಇಡೀ ಕುಟುಂಬದ ದುಡಿಮೆಯೆಲ್ಲವೂ ಅವರ ಔಷಧೋಪಚಾರಕ್ಕಾಗಿಯೇ ಖರ್ಚಾಗಿಬಿಡುತ್ತದೆ. ಆ ನಂತರದಲ್ಲಿ ಆ ಕುಟುಂಬ ಮತ್ತೆ ಸಾಮಾನ್ಯ ಸ್ಥಿತಿಗೆ ತಲುಪಲು ಅದೆಷ್ಟು ಕಷ್ಟಪಡಬೇಕೋ ಬಲ್ಲವರಾರು? ಹಾಗೆ ಕಷ್ಟದಲ್ಲಿರುವ ಸಾಮಾನ್ಯ ಭಾರತೀಯರಿಗೆ ಮಾರುಕಟ್ಟೆಯಲ್ಲಿ ದೊರೆಯುವ ಔಷಧಗಳ ಬೆಲೆಗಿಂತ ಅತ್ಯಂತ ಕಡಿಮೆ ಬೆಲೆಗೆ ಔಷಧಗಳು ಸುಲಭವಾಗಿ ದೊರೆಯುವಂತಾದರೆ ಎಷ್ಟೊಂದು ಜೀವಗಳಿಗೆ ನೆಮ್ಮದಿಯಲ್ಲವೇ?
ಅದೇ ಉದ್ದೇಶದಿಂದ ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದ ಸರ್ಕಾರ ಪ್ರಾರಂಭಿಸಿದ್ದೇ ಪ್ರಧಾನಮಂತ್ರಿ ಜನೌಷಧಿ ಯೋಜನೆ. ಅಂತಹಾ ಮಹತ್ವದ ಯೋಜನೆಯೊಂದನ್ನು ಇಷ್ಟೊಂದು ಶೀಘ್ರವಾಗಿ ದೇಶದಾದ್ಯಂತ ತಲುಪಿಸಿ ಯಶಸ್ವಿಗೊಳಿಸಬೇಕಾದ ಜವಾಬ್ಧಾರಿ ಹೊತ್ತಿದ್ದು ಮೋದಿ ಸಂಪುಟದ ಅತ್ಯಂತ ಕ್ರಿಯಾಶೀಲ ಸಚಿವರಾಗಿದ್ದ ಶ್ರೀ ಅನಂತ್ ಕುಮಾರ್ ಅವರು. ಪ್ರತಿಯೊಂದು ಅವಕಾಶವೂ ನಮಗೆ ಸಿಗುವುದೇ ನಾವದನ್ನು ಸಾಧಿಸಿ ತೋರಿಸಲು ಎನ್ನುತ್ತಿದ್ದ ಅನಂತ್ ಕುಮಾರ್ ಅವರು ಕೆಲವೇ ಸಮಯದಲ್ಲಿ 3600 ಕ್ಕೂ ಹೆಚ್ಚು ಜನೌಷಧ ಕೇಂದ್ರಗಳನ್ನು ಆರಂಭ ಮಾಡುವ ಮೂಲಕ ಕಡಿಮೆ ಬೆಲೆಗೆ ಎಲ್ಲ ವರ್ಗದವರಿಗೂ ಔಷಧ ಸಿಗುವಂತೆ ಮಾಡಿದರು. ಇಂದು ದೇಶದ ಬಹುತೇಕ ನಗರ-ಪಟ್ಟಣಗಳಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ತೆರೆದಿವೆಯೆಂದರೆ ಅದರ ಹಿಂದೆ ಶ್ರೀ ಅನಂತ್ ಕುಮಾರ್ ಅವರ ಶ್ರಮ, ಕರ್ತವ್ಯನಿಷ್ಠೆ ಹಾಗೂ ಸೇವಾ ಮನೋಭಾವಗಳು ಕೆಲಸ ಮಾಡಿವೆ. ಅದೇ ರೀತಿ ಔಷಧಿ ಕಂಪೆನಿಗಳ ಯಾವುದೇ ಪ್ರಭಾವಗಳಿಗೆ ಬಲಿಯಾಗದೆ ಹೃದಯದ ಸ್ಟಂಟ್ ಹಾಗೂ ಮೊಣಕಾಲು ಅಸ್ಥಿಮಜ್ಜೆ ಮರುಜೋಡಣೆ ವೆಚ್ಚವನ್ನು ಶೇ.85ರಷ್ಟು ಇಳಿಕೆ ಮಾಡಿದ್ದು ಇನ್ನೊಂದು ಸಾಧನೆ. ಬಡ ಹೃದ್ರೋಗಿಗಳಿಗೆ ವರದಾನವಾಗುವಂತೆ ಹೃದಯ ಸ್ಟೆಂಟ್ ಗಳ ಬೆಲೆಯನ್ನು ಶೇ.85ಕ್ಕೆ ಇಳಿಸಿದ್ದರ ಹಿಂದೆ ಕೂಡಾ ಅವರ ಸಂಪೂರ್ಣ ಶ್ರಮವಿದೆ.
ಅವರ ಅಂತಹಾ ಕ್ರಿಯಾಶೀಲ ಮನೋಭಾವವನ್ನು ಮನಗಂಡೇ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಅವರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ನೀಡಿದ್ದರು. ಪ್ರಾರಂಭದಲ್ಲಿ ನಾಗರಿಕ ವಿಮಾನಯಾನ ಹಾಗೂ ನಗರಾಭಿವೃದ್ಧಿಯಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದ ಅವರಿಗೆ ಅಷ್ಟೊಂದು ಮಹತ್ವದ್ದಲ್ಲದ ಖಾತೆಯನ್ನು ನೀಡಲಾಗಿದೆ ಎಂದೇ ಭಾವಿಸಲಾಗಿತ್ತಾದರೂ ನಂತರದಲ್ಲಿ ಆ ಖಾತೆಯನ್ನು ದೇಶದ ಬಹುಸಂಖ್ಯಾತ ರೈತರ, ಬಡವರ ಒಳಿತಿಗಾಗಿ ಅವರು ಬಳಸಿಕೊಂಡ ರೀತಿಯೇ ಅತ್ಯದ್ಭುತ. ರಸಗೊಬ್ಬರ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಿದ ಅವರು ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರರಾದರು. ಅವರ ಕಾರ್ಯಕ್ಷಮತೆಯಿಂದಾಗಿಯೇ ಸಂಸದೀಯ ವ್ಯವಹಾರದಂತಹ ಖಾತೆಯನ್ನೂ ಹೆಚ್ಚುವರಿಯಾಗಿ ಪಡೆದುಕೊಂಡರು. ಅವರಿಗೆ ದೊರೆತಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಅಡಿಯಲ್ಲೇ ಬರುವ ಫಾರ್ಮಾಸ್ಯುಟಿಕಲ್ಸ್ ಇಲಾಖೆಯಡಿಯಲ್ಲಿ ದೇಶದಲ್ಲೇ ಇದುವರೆಗಿನ ಕ್ರಾಂತಿಕಾರಿ ಯೋಜನೆಯೆಂದು ಗುರುತಿಸಬಹುದಾದ ಅತ್ಯಂತ ಮಹತ್ವದ ಪ್ರಧಾನ ಮಂತ್ರಿ ಜನೌಷಧಿ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಿದರು. ಆ ಯೋಜನೆಯು ಕೆಲವೇ ಸಮಯದಲ್ಲಿ ದೇಶದಾದ್ಯಂತ ಎಷ್ಟು ಜನೋಪಯೋಗಿಯಾಗಿ ಬೆಳೆದಿದೆ ಎನ್ನುವುದಕ್ಕೆ ಇದೀಗ ಹೋಬಳಿ ಹಾಗೂ ಗ್ರಾಮಮಟ್ಟದಲ್ಲೂ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಇಂದಿರಾ ಕ್ಯಾಂಟೀನ್ ಮುಂತಾದ ಕಡೆಗಳಲ್ಲೂ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುತ್ತಿರುವುದು ಮತ್ತು ಹಾಗೆ ಸ್ಥಾಪಿಸುವಂತೆ ಜನರಿಂದ ಆಗ್ರಹಗಳು ಬರುತ್ತಿರುವುದೇ ಸಾಕ್ಷಿ.
ವಿಷಾದದ ಸಂಗತಿಯೆಂದರೆ ಒಂದಿಡೀ ದೇಶದ ಜನರ ಆರೋಗ್ಯಕ್ಕಾಗಿ ಮರೆಯಲಾಗದ ಕೊಡುಗೆ ನೀಡಿದ ಶ್ರೀ ಅನಂತ್ ಕುಮಾರ್ ಅವರು ತಾವೇ 59ನೇ ವಯಸ್ಸಿನಲ್ಲಿ ಅಕಾಲಿಕವಾಗಿ ಕೊನೆಯುಸಿರೆಳೆದಿದ್ದಾರೆ. ರಾಜಕೀಯದಲ್ಲಿ ಖಂಡಿತವಾಗಿಯೂ ಇದೊಂದು ಅತ್ಯಂತ ಕಿರಿಯ ವಯಸ್ಸು ಎಂದೇ ಹೇಳಬಹುದು. ಅವರಿಂದ ದೇಶ ಇನ್ನಷ್ಟು ಸೇವೆಗಳನ್ನು ಬಯಸುತ್ತಿತ್ತು. ಆದರೂ ಕಾಲನ ಕರೆಯನ್ನು ಯಾರಿಂದಲೂ ತಿರಸ್ಕರಿಸಲಾಗದು. ಆದ್ದರಿಂದ ಅಗಲಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದೊಂದೇ ನಮ್ಮ ಮುಂದಿರುವ ದಾರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.