ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ವಿಶ್ವದ ಅತೀದೊಡ್ಡ ‘ಏಕತಾ ಪ್ರತಿಮೆ’ಯನ್ನು ಗುಜರಾತ್ನಲ್ಲಿ ಲೋಕಾರ್ಪಣೆಗೊಳಿಸಿದರು. ದೇಶದ ಮೊತ್ತ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಾಭಾಯ್ ಪಟೇಲ್ ಅವರ ಗೌರವಾರ್ಥ ನಿರ್ಮಾಣಗೊಂಡಿರುವ ಈ ಪ್ರತಿಮೆಯ ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.
ಬೃಹತ್ ‘ಏಕತಾ ಪ್ರತಿಮೆ’ಯ ಬಗ್ಗೆ ನಾವು ತಿಳಿದುಕೊಳ್ಳಲೇ ಬೇಕಾದ 10 ಅಂಶಗಳು ಇಲ್ಲಿವೆ
1. ಪ್ರತಿಮೆಯ ಉದ್ಘಾಟನೆಯ ವೇಳೆ ಮೋದಿ, ಕಳಶದೊಳಗಿದ್ದ ನರ್ಮದಾ ನದಿಯ ನೀರು ಮತ್ತು ಹರಿವಾಣದಲ್ಲಿದ್ದ ಮಣ್ಣನ್ನು ಪಟೇಲರ ಪಾದಗಳಿಗೆ ಚಿಮುಕಿಸಿದ್ದಾರೆ. 2013ರ ಅಕ್ಟೋಬರ್ 31ರಂದು ಗುಜರಾತ್ ಸಿಎಂ ಆಗಿದ್ದ ವೇಳೆ ಮೋದಿ ಈ ಯೋಜನೆಗೆ ಚಾಲನೆಯನ್ನು ನೀಡಿದ್ದರು.
2. ಸಾಂಪ್ರದಾಯಿಕ ಧೋತಿ ಮತ್ತು ಶಾಲನ್ನು ಹೊದ್ದು, ನರ್ಮದಾ ನದಿಗೆ ಮುಖ ಮಾಡಿದ ಮಾದರಿಯಲ್ಲಿ ಪ್ರತಿಮೆ ನಿರ್ಮಾಣಗೊಂಡಿದೆ. ಲೋಹಪುರುಷ ಎಂದೇ ಕರೆಯಲ್ಪಡುವ ಪಟೇಲರ ಈ ಪ್ರತಿಮೆಗಾಗಿ ದೇಶದಾದ್ಯಂತದ ರೈತರಿಂದ ಉಕ್ಕನ್ನು ಸಂಗ್ರಹ ಮಾಡಲಾಗಿದೆ.
3. ಈ ಪ್ರತಿಮೆಗೆ ತೀವ್ರವಾದ ಬಿರುಗಾಳಿ ಮತ್ತು ಭೂಕಂಪವನ್ನು ಸಹಿಸಿಕೊಳ್ಳುವ ಸಾಮರ್ಥ್ಯವಿದೆ.
4. ಪದ್ಮಭೂಷಣ ಪುರಸ್ಕೃತ ಶಿಲ್ಪಿ ರಾಮ್ ವಿ ಸುತಾರ್ ಅವರು, ಲರ್ಸೆನ್ ಆಂಡ್ ಟುಬ್ರೋ, ಸರ್ಕಾರಿ ಸ್ವಾಮ್ಯದ ಸರ್ದಾರ್ ಸರೋವರ ನರ್ಮದಾ ನಿಗಮ್ ಲಿಮಿಟೆಡ್ ನೇತೃತ್ವದಲ್ಲಿ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ. 250 ಎಂಜಿನಿಯರ್ಗಳು, 3,400 ಕಾರ್ಮಿಕರು ಸೇರಿ 33 ತಿಂಗಳಲ್ಲಿ ಪ್ರತಿಮೆ ನಿರ್ಮಾಣ ಮಾಡಿದ್ದಾರೆ.
5. ಇದುವರೆಗೆ ವಿಶ್ವದ ಅತೀದೊಡ್ಡ ಪ್ರತಿಮೆ ಎಂದು ಕರೆಯಲ್ಪಡುತ್ತಿದ್ದ ಚೀನಾದ ಸ್ಪ್ರಿಂಗ್ ಟೆಂಪಲ್ ಬುದ್ಧಗಿಂದ ಈ ಏಕತಾ ಪ್ರತಿಮೆ 177 ಅಡಿ ಎತ್ತರವಿದೆ.
6. ಪ್ರತಿಮೆ ನಿರ್ಮಾಣದ ವೇಳೆ 185 ಕುಟುಂಬಗಳನ್ನು ಈ ಪ್ರದೇಶದಿಂದ ಸ್ಥಳಾಂತರ ಮಾಡಲಾಗಿದ್ದು, ಅವರಿಗೆ ಪರಿಹಾರ ಮೊತ್ತ ಮತ್ತು ಪುನರ್ವಸತಿಗಾಗಿ 1,200 ಎಕರೆ ಭೂಮಿಯನ್ನು ಒದಗಿಸಲಾಗಿದೆ.
7. ಪ್ರತಿಮೆಯ ಮುಖ್ಯ ಭಾಗವು ಬಲವರ್ಧಿತ ಕಾಂಕ್ರೀಟ್ನಿಂದ ಮಾಡಲ್ಪಟ್ಟಿದೆ ಮತ್ತು ಅದರ ವಿಶಿಷ್ಟ ವಿನ್ಯಾಸವನ್ನು ನೀಡುವ ಮೇಲ್ಮೈಯನ್ನು 553 ಕಂಚಿನ ಪ್ಯಾನಲ್ಗಳನ್ನು ಬಳಸಿ ರಚಿಸಲಾಗಿದೆ. ಪ್ರತಿ ಪ್ಯಾನಲ್ 10 ರಿಂದ 15 ಮೈಕ್ರೊ ಪ್ಯಾನಲ್ಗಳನ್ನು ಹೊಂದಿದೆ. ಚೀನಾದ ಫೌಂಡ್ರಿಯಿಂದ ಪ್ಯಾನಲ್ಗಳನ್ನು ತರಿಸಲಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಪದೇ ಪದೇ ಇದು ‘ಮೇಡ್ ಇನ್ ಚೈನಾ’ ಟ್ಯಾಗ್ನ್ನು ಹೊಂದಿರುವ ಪ್ರತಿಮೆ ಎಂದು ಜರೆಯುತ್ತಾರೆ.
8. ಈ ಪ್ರತಿಮೆಗೆ ಬಳಸಲಾದ ಗಾತ್ರದ ಪ್ಯಾನಲ್ಗಳನ್ನು ತಯಾರಿಸುವ ಸೌಲಭ್ಯ ಆ ಸಂದರ್ಭದಲ್ಲಿ ಭಾರತದಲ್ಲಿ ಇಲ್ಲದ ಕಾರಣ, ಅಂತಾರಾಷ್ಟ್ರೀಯ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಚೀನಾದ ಫೌಂಡ್ರಿಗೆ ಪ್ಯಾನೆಲ್ ತಯಾರಿಸುವ ಅವಕಾಶ ನೀಡಲಾಯಿತು.
9. ಪ್ರತಿಮೆಯು ವೀಕ್ಷಣಾ ಗ್ಯಾಲರಿಯನ್ನು ಹೊಂದಿದ್ದು, ಏಕಕಾಲದಲ್ಲಿ 200 ಪ್ರವಾಸಿಗರಿಗೆ ಇಲ್ಲಿ ನಿಂತು ವೀಕ್ಷಿಸುವ ಅವಕಾಶ ಇದೆ. ಈ ಗ್ಯಾಲರಿಯಲ್ಲಿ ನಿಂತು ಸರ್ದಾರ್ ಸರೋವರ ಅಣೆಕಟ್ಟು, ಅದರ ಜಲಾಶಯ, ಸತ್ಪುರಾ ಮತ್ತು ವಿಂಧ್ಯಾ ಪರ್ವತ ಶ್ರೇಣಿಯನ್ನು ಕಣ್ತುಂಬಿಕೊಳ್ಳಬಹುದು.
10. ಪ್ರತಿಮೆಯು ಸಾರ್ವಜನಿಕರಿಗೆ ಮುಕ್ತವಾದ ಬಳಿಕ ಪ್ರತಿ ನಿತ್ಯ ಸುಮಾರು 15,000 ಜನರು ಇಲ್ಲಿಗೆ ಆಗಮಿಸುವ ನಿರೀಕ್ಷಿಯನ್ನು ಹೊಂದಲಾಗಿದೆ. ಇಲ್ಲಿನ ಮ್ಯೂಸಿಯಂನಲ್ಲಿ 40,000 ದಾಖಲೆಗಳು, 2,000 ಛಾಯಾಚಿತ್ರಗಳು ಮತ್ತು ಸರ್ದಾರ್ ಪಟೇಲ್ ಅವರ ಜೀವನಕ್ಕೆ ಅರ್ಪಿತವಾದ ಸಂಶೋಧನಾ ಕೇಂದ್ರವನ್ನು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.