ಅಹ್ಮದಾಬಾದ್: ಗುಜರಾತಿನ ಕೆವಾಡಿಯಾ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತೀದೊಡ್ಡ ‘ಏಕತಾ ಪ್ರತಿಮೆ’ಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಅರ್ಪಣೆ ಮಾಡಿದ್ದಾರೆ.
ದೇಶದ ಏಕೀಕರಣದ ರುವಾರಿ, ಲೋಹ ಪುರುಷ ಸರ್ದಾರ್ ವಲ್ಲಭಾಭಾಯ್ ಪಟೇಲರ ಗೌರವಾರ್ಥ, ಅವರ 182 ಅಡಿಗಳ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ.
ಬೃಹತ್ ಉದ್ಘಾಟನಾ ಸಮಾರಂಭದ ವೇಳೆ, ವಾಯುಸೇನಾ ಹೆಲಿಕಾಫ್ಟರ್ಗಳು ಮೇಲಿನಿಂದ ಪಟೇಲರ ಮೂರ್ತಿಗೆ ಪುಷ್ಪಾರ್ಚನೆ ಮಾಡಿದವು.
ನರ್ಮದಾ ನದಿ ತೀರದಲ್ಲಿ ರೂ.2,900 ಕೋಟಿ ವೆಚ್ಚದಲ್ಲಿ 182 ಅಡಿ ಎತ್ತರದ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದ್ದು, ವಿಶ್ವದ ಅತೀದೊಡ್ಡ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸರ್ದಾರ್ ಅವರ 143ನೇ ಜನ್ಮದಿನವಾದ ಇಂದೇ ಅದನ್ನು ಮೋದಿ ಲೋಕಾರ್ಪಣೆಗೊಳಿಸಿದ್ದು, ಲೋಹ ಪುರುಷನಿಗೆ ಸಂದ ಅತಿ ಶ್ರೇಷ್ಠ ಗೌರವ ಇದಾಗಿದೆ.
ಇದು ಪಟೇಲರಿಗೆ ಸಂದ ಅತಿ ಶ್ರೇಷ್ಠ ಗೌರವ: ಮೋದಿ
ಪ್ರತಿಮೆ ಅನಾವರಣದ ಬಳಿಕ ಮಾತನಾಡಿದ ಮೋದಿ, ’ದೇಶ್ ಕೀ ಏಕತಾ ಜಿಂದಾಬಾದ್’ ಎಂಬ ಉದ್ಘೋಷವನ್ನು ಮೊಳಗಿಸಿದರು.
‘ಸರ್ದಾರ್ ಪಟೇಲರ ಜನ್ಮದಿನವಾದ ಇಂದು ದೇಶದಲ್ಲಿ ’ಏಕತಾ’ ಘೋಷಣೆ ಮೊಳಗುತ್ತಿದೆ. ಬಾನೆತ್ತರದವರೆಗೆ ವ್ಯಾಪಿಸಿರುವ ಸರ್ದಾರ್ಗೆ ಹೂವಿನ ಅಬಿಷೇಕ ನಡೆಯುತ್ತಿದೆ. ದೇಶದ ಭವಿಷ್ಯಕ್ಕೆ ಆಗಸದೆತ್ತರದ ಆಧಾರ ಸಿಕ್ಕಿದೆ. ಇದನ್ನು ಲೋಕಾರ್ಪಣೆಗೊಳಿಸುವ ಸೌಭಾಗ್ಯ ಸಿಕ್ಕಿದ್ದು, ನನ್ನ ಅದೃಷ್ಟ’ ಎಂದರು.
‘ಸರ್ದಾರ್ ಪಟೇಲರ ಪ್ರತಿಮೆ ನಿರ್ಮಾಣಕ್ಕೆ ಆರಂಭಿಸಿದ ಅಭಿಯಾನದ ದಿನಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ದೇಶದ ಮೂಲೆ ಮೂಲೆಯ ರೈತರು ಇದಕ್ಕಾಗಿ ಕಬ್ಬಿಣವನ್ನು ನೀಡಿದ್ದಾರೆ. ಇದು ನಿಜವಾಗಿಯೂ ದೇಶವನ್ನು ಬೆಸೆಯುವ ಪ್ರತಿಮೆಯಾಗಿದೆ’ ಎಂದರು.
‘ಇದು ಜಗತ್ತಿನ ಅತೀದೊಡ್ಡ ಪ್ರತಿಮೆಯಾಗಿದ್ದು, ದೇಶಕ್ಕೆ, ಮುಂದಿನ ಪೀಳಿಗೆಗೆ, ಇಡೀ ವಿಶ್ವಕ್ಕೆ ಸರ್ದಾರ್ ಪಟೇಲರ ಸಾಧನೆಯನ್ನು ಸಾರಿ ಸಾರಿ ಸಾರಿ ಹೇಳುತ್ತದೆ. ದೇಶದ ಏಕತೆಯನ್ನು ಶಂಕಿಸುವವರಿಗೆ ಇದು ತಕ್ಕ ಉತ್ತರ ನೀಡಿದೆ’ ಎಂದರು.
‘ಸರ್ದಾರ್ ಆಡಳಿತ ನಡೆಸುವ ವಿಧಾನವನ್ನು ನಮಗೆ ತಿಳಿಸಿಕೊಟ್ಟಿದ್ದಾರೆ. ಅವರು ಇಲ್ಲದೇ ಇರುತ್ತಿದ್ದರೆ, ಕಾಶ್ಮೀರ-ಕನ್ಯಾಕುಮಾರಿ ರೈಲಿನ ಬಗ್ಗೆಯಾಗಲಿ, ನಾಗರಿಕ ಸೇವಾ ಪರೀಕ್ಷೆಗಳ ಬಗ್ಗೆಯಾಗಲಿ ನಮಗೆ ಚಿಂತನೆ ನಡೆಸಲು ಸಾಧ್ಯವೇ ಆಗುತ್ತಿರಲಿಲ್ಲ’ ಎಂದರು.
source: ZEENEWS
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.