ಮಂಗಳೂರು: ಸಾಂಸ್ಕೃತಿಕ ಪರಂಪರೆ ಆಳವಾಗಿ ಬೇರೂರಿರುವ ಕಡಲ ನಗರಿ ಮಂಗಳೂರಿನಲ್ಲಿ ‘ಮಂಗಳೂರು ಲಿಟರರಿ ಫೌಂಡೇಶನ್’ ನವೆಂಬರ್ 3 ಮತ್ತು 4ರಂದು ಡಾ| ಟಿಎಂಎ ಪೈ ಇಂಟರ್ನ್ಯಾಶನಲ್ ಕನ್ವೆನ್ಶನ್ ಸೆಂಟ್ನಲ್ಲಿ ‘ಮಂಗಳೂರು ಲಿಟ್ ಫೆಸ್ಟ್ 2018’ನ್ನು ಆಯೋಜನೆಗೊಳಿಸುತ್ತಿದೆ. ನಿಟ್ಟೆ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ಡಾ.ಎನ್ ವಿನಯ್ ಹೆಗ್ಡೆ, ಸಂಸದ ರಾಜೀವ್ ಚಂದ್ರಶೇಖರ್, ತುಷಾರ-ತುಂತುರು-ತರಂಗ ಸಂಪಾದಕಿ ಸಂಧ್ಯಾ ಪೈ ಫೆಸ್ಟ್ನ ಪೋಷಕರಾಗಿದ್ದಾರೆ.
ಮಂಗಳವಾರ ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೋಹಿಣಾಕ್ಷ ಶಿರ್ಲಾಲು, ವಸಂತ್ ಕುಮಾರ್ ಪೆರ್ಲ ಮತ್ತು ಶ್ರೀರಾಜ್ ಗುಡಿ ಅವರು ‘ಮಂಗಳೂರು ಲಿಟ್ ಫೆಸ್ಟ್’ ಬಗೆಗಿನ ಮಾಹಿತಿಯನ್ನು ನೀಡಿದರು.
‘ರಾಜಧಾನಿಯಿಂದ ಹೊರಕ್ಕೆ, ಎರಡನೇ ಹಂತದ ನಗರಿಯೊಂದರಲ್ಲಿ ನಡೆಯುತ್ತಿರುವ ಮೊತ್ತ ಮೊದಲ ‘ಲಿಟ್ ಫೆಸ್ಟ್’ ಇದಾಗಿದ್ದು, ‘ಐಡಿಯಾ ಆಫ್ ಭಾರತ್’ ಥೀಮ್’ನೊಂದಿಗೆ ಜರುಗುತ್ತಿದೆ. ಕರಾವಳಿಯಿಂದ ಹಿಡಿದು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ, ಸಾಹಿತ್ಯ, ವೈಚಾರಿಕ ವಲಯದ ವಿದ್ವಾಂಸರು, ಸಾಹಿತಿಗಳು ಸೇರಿದಂತೆ 50ಕ್ಕೂ ಅಧಿಕ ಮಂದಿ ಗಣ್ಯರು ಇದರಲ್ಲಿ ಭಾಗಿಯಾಗುತ್ತಿದ್ದು, ಇದರಲ್ಲಿ 10 ಮಹಿಳೆಯರಿದ್ದಾರೆ. ಇಂಗ್ಲೀಷ್, ಕನ್ನಡ, ತುಳು, ಹಿಂದಿ, ಕೊಂಕಣಿಯ ಪಂಚ ಭಾಷೆಗಳಲ್ಲಿ ನಡೆಯುತ್ತಿರುವ ಮೊದಲ ಫೆಸ್ಟ್ ಇದಾಗಿದೆ. ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಪರಿಚಯಿಸುವ ಯಕ್ಷಗಾನ, ಜನಪದ ಸಾಹಿತ್ಯಗಳು ಇಲ್ಲಿ ಜರುಗಲಿವೆ’ ಎಂದು ರೋಹಿಣಾಕ್ಷ ತಿಳಿಸಿದರು.
ಈಗಾಗಲೇ ಫೆಸ್ಟ್ಗೆ ಬೇಕಾದ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದು, 750 ಮಂದಿ ಆನ್ಲೈನ್ ರಿಜಿಸ್ಟ್ರೇಶನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನಷ್ಟು ಜನರು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಇದೆ. ಅಷ್ಟೇ ಅಲ್ಲದೇ, ಕರಾವಳಿ ಭಾಗದ ಕಾಲೇಜುಗಳ ಮಾಧ್ಯಮ, ಕಲೆ, ಮಾನವೀಯ ವಿಭಾಗದ ಸಾಕಷ್ಟು ವಿದ್ಯಾರ್ಥಿಗಳು ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಗಳಲ್ಲಿ ವಿಮರ್ಶೆ, ಕವಿಗೋಷ್ಠಿ, ಪುಸ್ತಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರವಲ್ಲದೇ, ಫೋಟೋಗ್ರಫಿ, ಮಣ್ಣಿನ ಕಲಾಕೃತಿ ತಯಾರಿಕೆ ವರ್ಕ್ಶಾಪ್ಗಳೂ ಜರುಗಲಿದೆ. ಈ ಸಂದರ್ಭದಲ್ಲಿ ನಾಲ್ಕು ಪುಸ್ತಕಗಳೂ ಬಿಡುಗಡೆಯಾಗಲಿದೆ ಎಂದು ಶ್ರೀರಾಜ್ ಗುಡಿ ಮಾಹಿತಿ ನೀಡಿದರು.
ಯಾವುದೇ ಕಟ್ಟುಪಾಡುಗಳಿಲ್ಲದೆ ಎಲ್ಲರಿಗೂ ಮುಕ್ತ ಪ್ರವೇಶವಿದ್ದು, ಆಗಮಿಸಿದ ಗಣ್ಯರೊಂದಿಗೆ ಅನೌಪಚಾರಿಕವಾಗಿ ಭೇಟಿಯಾಗಲಿಚ್ಛಿಸುವವರಿಗೂ ಅವಕಾಶ ಮಾಡಿಕೊಡಲಾಗುವುದು ಎಂದರು.
ಖ್ಯಾತ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ|ಎಸ್ಎಲ್ ಭೈರಪ್ಪನವರಿಗೆ ‘ಜೀವಮಾನದ ಸಾಧನೆ’ ಪ್ರಶಸ್ತಿಯನ್ನು ಇಲ್ಲಿ ನೀಡಲಾಗುತ್ತಿದೆ.
ಯಾವುದೇ ಪಂಥೀಯವಾದ ಇಲ್ಲದೇ, ಭಾರತದ ಸಾಧನೆಯನ್ನು ಸಕಾರಾತ್ಮಕವಾಗಿ ಬಿಂಬಿಸುವ ಸಾಹಿತ್ಯಗಳನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಈ ಲಿಟರೇಚರ್ ಫೆಸ್ಟ್ನ್ನು ಆಯೋಜನೆಗೊಳಿಸಲಾಗುತ್ತಿದೆ ಎಂದು ವಸಂತ್ ಕುಮಾರ್ ಪೆರ್ಲ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.