ಬಿಎಸ್ಎಫ್ ಯೋಧರ ಮಾನವೀಯ ಕಾರ್ಯದ ಫಲವಾಗಿ 70 ವರ್ಷದ ವೃದ್ಧೆಯೊಬ್ಬರು ಒಂದೂವರೆ ವರ್ಷಗಳ ಬಳಿಕ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ.
ಹಾಸನದವರಾದ ಜಯಮ್ಮ ಒಂದೂವರೆ ವರ್ಷಗಳ ಹಿಂದೆ ನಾಪತ್ತೆಯಾಗಿದ್ದರು. ಅಚಾತುರ್ಯದಿಂದ ಅಸ್ಸಾಂ ರೈಲನ್ನು ಹತ್ತಿದ ಅವರು ನೇರವಾಗಿ ಅಸ್ಸಾಂನಲ್ಲೇ ಇಳಿದಿದ್ದರು. ಬಳಿಕ ಅಲ್ಲೇ ಒಂದೂವರೆ ವರ್ಷ ಹೇಗೋ ಕಾಲ ಕಳೆದಿದ್ದಾರೆ.
ಇತ್ತೀಚಿಗಷ್ಟೇ ಬಿಎಸ್ಎಫ್ನ ಕರೀಂಗಂಜ್ ಔಟ್ಪೋಸ್ಟ್ ಸಮೀಪ ಇವರನ್ನು ಕಂಡ ಯೋಧರು ಇವರ ಬಗ್ಗೆ ವಿಚಾರಿಸಿದ್ದಾರೆ, ಆದರೆ ಜಯಮ್ಮ ಕೇವಲ ಕನ್ನಡದಲ್ಲಿ ಮಾತ್ರ ಮಾತನಾಡುತ್ತಿದ್ದರಿಂದ ಅವರಿಗೆ ಭಾಷೆ ಅರ್ಥವಾಗಲಿಲ್ಲ. ಆದರೆ ಯಾವುದೋ ದಕ್ಷಿಣ ಭಾರತದ ಭಾಷೆ ಎಂಬುದು ಮಾತ್ರ ತಿಳಿಯಿತು. ತಕ್ಷಣ ಅವರನ್ನು ತಮ್ಮ ಕ್ಯಾಂಪ್ಗೆ ಕರೆದುಕೊಂಡು ಬಂದಿದ್ದಾರೆ. ಕ್ಯಾಂಪ್ನಲ್ಲಿದ್ದ ಕನ್ನಡಿಗ ಯೋಧ ಸಾಹಿಲ್ ಝೈಬುಲ್ಲಾ ಇವರೊಂದಿಗೆ ಮಾತನಾಡಿ ಇವರ ಸಂಷಕ್ಟವನ್ನು ಅರಿತುಕೊಂಡರು.
ತಾನು ಹಾಸನದವಳು, ದಾರಿ ತಪ್ಪಿ ಇಲ್ಲಿಗೆ ಬಂದಿದ್ದೇನೆ ಎಂದು ಜಯಮ್ಮ ಯೋಧರ ಬಳಿ ಹೇಳಿಕೊಂಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಯೋಧರು ಅವರೊಂದಿಗಿನ ಸಂಭಾಷಣೆಯ ತುಣುಕನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದೇ ವೇಳೆ ಪೊಲೀಸರೂ ಹಾಸನದ ಆಡಳಿತದೊಂದಿಗೆ ಸಂಪರ್ಕ ಸಾಧಿಸಿದ್ದಾರೆ.
ಅ.20ರಂದು ಜಯಮ್ಮನ ಊರಿನ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋ ಬಗ್ಗೆ, ಅದರಲ್ಲಿ ಜಯಮ್ಮನ ರೀತಿ ಮಹಿಳೆ ಇರುವ ಬಗ್ಗೆ ಆಕೆಯ ಮಗಳು ಸುನಂದಾರಿಗೆ ತಿಳಿಸಿದರು. ತಕ್ಷಣ ವೀಡಿಯೋ ನೋಡಿದ ಸುನಂದಾ ತಮ್ಮ ತಾಯಿಯ ಗುರುತು ಹಿಡಿದಿದ್ದಾರೆ ಮತ್ತು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಯೋಧರನ್ನು ಸಂಪರ್ಕಿಸಿದ್ದಾರೆ. ಬಳಿಕ ತಾಯಿ ಮತ್ತು ಮಗಳ ನಡುವೆ ಅದೇ ದಿನ ವೀಡಿಯೋ ಸಂಭಾಷಣೆಯನ್ನು ಏರ್ಪಡಿಸಿದ್ದಾರೆ.
ಅ.21ರಂದು ಗುವಾಹಟಿಗೆ ತೆರಳಿದ ಸುನಂದಾ ತಮ್ಮ ತಾಯಿಯನ್ನು ಕರೆದುಕೊಂಡು ಬಂದಿದ್ದಾರೆ. ಅಲ್ಲದೇ ತಮ್ಮ ತಾಯಿಯನ್ನು ಮರಳಿ ನೀಡಿದ ಬಿಎಸ್ಎಫ್ ಯೋಧರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಣೆ ಮಾಡಿದ್ದಾರೆ
SOURCE: the quint
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.