ಕನಕಪುರ : ಕನಕಪುರದ ಕೋಡಿಹಳ್ಳಿ ಹೋಬಳಿಯ ಅರಕೆರೆ ಗ್ರಾಮ ಪಂಚಾಯಿತಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ನರೇಗಾ)ಯಡಿಯಲ್ಲಿ ಕೆಲಸ ಮಾಡಿದ ಕಾರ್ಮಿಕರೊಬ್ಬರಿಗೆ ನೀಡಬೇಕಾಗಿದ್ದ ಕೂಲಿಯನ್ನು ಚೀನಾದ ಇಂಜಿನಿಯರ್ ಒಬ್ಬರ ಖಾತೆಗೆ ಜಮಾ ಮಾಡಲಾಗಿದೆ!
ಅಂದ ಹಾಗೇ ಇದು ಕೇವಲ ಆರೋಪವಲ್ಲ. ಈ ವಿಷಯ ನಿಜವೆನ್ನುವುದು ಸಾಮಾಜಿಕ ಲೆಕ್ಕ ಪರಿಶೋಧನೆಯಿಂದಲೇ ಬೆಳಕಿಗೆ ಬಂದಿದೆ. ಲೆಕ್ಕ ಪರಿಶೋಧಕರೇ ಈ ವಿಚಾರವನ್ನು ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.
2017–18ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿಯ ಮೂಲಕ ನಡೆದ ನರೇಗಾ ಕಾಮಗಾರಿ ಯಡಿಯಲ್ಲಿ ಮಾದೇಗೌಡ ಎನ್ನುವವರ ಕೃಷಿ ಹೊಂಡದಲ್ಲಿ ರಾಜಿ ಎನ್ನುವ ಕೂಲಿ ಕಾರ್ಮಿಕರೊಬ್ಬರು ಕೆಲಸ ಮಾಡಿದ್ದರು. ಆದರೆ ಅವರಿಗೆ ಸೇರಬೇಕಾಗಿದ್ದ ಕೂಲಿ 7080 ರೂಪಾಯಿಗಳನ್ನು ಚೀನಾದಲ್ಲಿರುವ ಇಂಜಿನಿಯರ್ ಒಬ್ಬರ ಖಾತೆಗೆ ಜಮಾ ಮಾಡಲಾಗಿದೆ.
ಎಲ್ಲಿಯ ಕೋಡಿಹಳ್ಳಿ, ಎಲ್ಲಿಯ ಚೀನಾ?
ಒಟ್ಟಿನಲ್ಲಿ ನಮ್ಮ ಮಾದೇಗೌಡರ ಪುಟ್ಟ ಕೃಷಿ ಹೊಂಡ ಇಂಟರ್ ನ್ಯಾಷನಲ್ ಲೆವೆಲ್ಗೆ ಏರಿದ್ದಂತೂ ಗ್ರಾಮದ ಜನರಿಗೆ ಖುಷಿ ಕೊಟ್ಟಿರಬಹುದು.
ಆದರೆ ಇದಿಷ್ಟೇ ಅಲ್ಲ, ಅದೇ ಗ್ರಾಮದ ನರೇಗಾ ಕೂಲಿ ಆ ಗ್ರಾಮದಲ್ಲೇ ಇಲ್ಲದವರ ಹೆಸರಿಗೆ, ಈಗಾಗಲೇ ಸತ್ತು ಹೋಗಿರುವವರ ಹೆಸರಿಗೆ, ಯಾವುದೋ ಶಾಲೆಯ ವಿದ್ಯಾರ್ಥಿಗಳ ಹೆಸರಿಗೆ, ನಡೆಯದೇ ಇರುವ ಕಾಮಗಾರಿಗಳ ಹೆಸರಿಗೆ ಕೂಡಾ ಬಿಲ್ ಮಾಡಲಾಗಿದೆ ಎನ್ನುವುದನ್ನು ಸಾಮಾಜಿಕ ಲೆಕ್ಕ ಪರಿಶೋಧಕ ಅದೇ ಸಭೆಯಲ್ಲಿ ದಾಖಲೆ ಸಮೇತ ಬಹಿರಂಗಪಡಿಸಿದ್ದಾರೆ.
ಏನೇ ಆಗಲಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವ ಸಣ್ಣ ಸಣ್ಣ ಭ್ರಷ್ಟಾಚಾರಗಳೂ ರಾಜ್ಯ/ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತವೆ ಎಂದ ಮೇಲೆ ಜನ ಭ್ರಷ್ಟಾಚಾರದ ವಿರುದ್ಧ ಇದೀಗ ಒಂದು ಗಟ್ಟಿ ನಿರ್ಧಾರ ತಳೆದಿದ್ದಾರೆ ಎಂದೇ ಅರ್ಥ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.