ಮೈಸೂರು : ಜಗದ್ವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಅಲ್ಲಿ ನಡೆಯುವ ಆಹಾರ ಮೇಳ ಕೂಡಾ ತುಂಬಾ ಜನಪ್ರಿಯ. ಅಲ್ಲಿ ದೊರೆಯುವ ರಾಜ್ಯ, ದೇಶ ಹಾಗೂ ವಿದೇಶಗಳ ನೂರಾರು ಬಗೆಯ ಜನಪ್ರಿಯ ಖಾದ್ಯಗಳು ಅಲ್ಲಿಗೆ ಬರುವ ಆಹಾರಪ್ರಿಯರ ನಾಲಿಗೆ ಚಪಲವನ್ನು ತೀರಿಸುತ್ತಾ ಬಂದಿವೆಯಷ್ಟೇ ಅಲ್ಲದೆ ಜನರಿಗೆ ಬೇರೆ ಬೇರೆ ಭಾಗಗಳ ಆಹಾರಗಳ ಪರಿಚಯವನ್ನೂ ಮಾಡಿಕೊಡುತ್ತಾ ಬಂದಿದೆ.
ಹೇಳಿ ಕೇಳಿ ಲಕ್ಷಾಂತರ ಜನರು ಬರುವ ಕಾರ್ಯಕ್ರಮವಾಗಿರುವುದರಿಂದ ಅದೊಂದು ರಾಜಕಾರಣಿಗಳು ತಮ್ಮ ಪ್ರಚಾರ ಮಾಡಿಕೊಳ್ಳಲು ಪ್ರಶಸ್ತ ಸ್ಥಳವಾಗಿ ಕೂಡಾ ಗುರುತಿಸಿಕೊಂಡಿದೆ. ಆದ್ದರಿಂದಲೇ ಸ್ವತಃ ಆಹಾರ ಸಚಿವರೇ ಆಹಾರ ಮೇಳವನ್ನು ಉದ್ಘಾಟಿಸುವುದು ವಾಡಿಕೆ.
ಅದೇ ರೀತಿ ಈ ಬಾರಿಯ ದಸರಾ ಆಹಾರ ಮೇಳವನ್ನು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಜಮೀರ್ ಅಹಮ್ಮದ್ ಖಾನ್ ಉದ್ಘಾಟನೆ ಮಾಡಿದರು. ನಂತರ ತಮ್ಮವರೊಂದಿಗೆ ಊಟಕ್ಕೆ ಕುಳಿತ ಸಚಿವರು ವಿಧವಿಧವಾದ ಭಕ್ಷ್ಯ ಭೋಜನಗಳನ್ನು ಸವಿದರು. ಬಾಳೆ ಎಲೆಯ ಮೇಲಿನ ಭಕ್ಷ್ಯ ಭೋಜನಗಳನ್ನು ಗಡದ್ದಾಗಿ ತಿಂದು ತೇಗಿ, ಬಾಯಿ ಚಪ್ಪರಿಸಿ, ಕೈ ನೆಕ್ಕಿ ಮುಗಿದ ನಂತರ ಅವರಿಗೆ ಅದು ಏಕೋ ಅದೇ ರುಚಿಯಾದ ತಿನಿಸುಗಳನ್ನು ಇತರರಿಗೂ ತಿನ್ನಿಸಬೇಕೆನ್ನಿಸಿತು. ಕೂಡಲೇ ತಮ್ಮ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವ ಅಲ್ಲೇ ಇದ್ದ ಪೊಲೀಸ್ ಪೇದೆಗಳನ್ನು ಒಬ್ಬೊಬ್ಬರನ್ನಾಗಿ ಕರೆದು ತಾವು ತಿಂದು ಬಿಟ್ಟ ಬಾಳೆ ಎಲೆಯ ಬಳಿ ಬಂದು ಬಗ್ಗಿ ನಿಂತ ನಂತರ ಆ ಪೇದೆಗಳ ಬಾಯಿಗೆ ತಮ್ಮ ಎಂಜಲೆಲೆಯಲ್ಲಿದ್ದ ಅಳಿದುಳಿದ ಖಾದ್ಯಗಳನ್ನು ತಮ್ಮ ಎಂಜಲು ಕೈಯ್ಯಲ್ಲೇ ತುರುಕತೊಡಗಿದರು.
ಸಚಿವರ ಕರೆಯನ್ನು ತಿರಸ್ಕರಿಸಲಾಗದೇ ವಿಧಿಯಿಲ್ಲದೇ ಪೊಲೀಸ್ ಪೇದೆಗಳು
ಒಬ್ಬೊಬ್ಬರಾಗಿ ಬಂದು ಬಗ್ಗಿ ನಿಂತು ಅವರು ಎಂಜಲೆಲೆಯಿಂದ ಎಂಜಲು ಕೈಯ್ಯಲ್ಲಿ ಎತ್ತಿ ತಿನ್ನಿಸಿದ ಎಂಜಲು ಆಹಾರವನ್ನು ಸಾರ್ವಜನಿಕರು ಹಾಗೂ ಮಾಧ್ಯಮಗಳೆದುರೇ ಸೇವಿಸಿದರು. ಹಾಗೆ ಸಚಿವರು ತಿನ್ನಿಸಿದ ಭೋಜನವನ್ನು ಕೊನೆಯಲ್ಲಿ ಸೇವಿಸಿದ ಪೇದೆಯಂತೂ ಅದೆಷ್ಟು ಜನರ ಎಂಜಲು ತಿನ್ನಬೇಕಾಯಿತು ಎನ್ನುವುದು ನೆನೆಸಿಕೊಳ್ಳಲೂ ಆಗದು.
ಪ್ರಜಾಪ್ರಭುತ್ವದಲ್ಲಿ ಮಂತ್ರಿಗಳೇ ರಾಜರು. ಹಾಗಾಗಿ ಅವರ ಮಾತನ್ನು ಮೀರುವುದಕ್ಕೆ ಯಾರಿಗೇ ಆದರೂ ಭಯ ಕಾಡುವುದು ಸಹಜ. ಆದರೂ ತಾನು ತಿಂದು ಬಿಟ್ಟ ಎಂಜಲನ್ನು ಅದೇ ಎಂಜಲು ಕೈಯ್ಯಲ್ಲಿ ಇನ್ನಷ್ಟು ಜನರ ಬಾಯಿಗಿಡುವ ಮೂಲಕ ಅನಾಗರಿಕ, ಅಸಹ್ಯಕರ ಹಾಗೂ ಅನಾರೋಗ್ಯಕರ ಸಂಪ್ರದಾಯವನ್ನು ಬಹಿರಂಗವಾಗಿ ಆಚರಿಸುವ ಮುನ್ನ ಅವರು ಸ್ವಲ್ಪವಾದರೂ ಯೋಚಿಸಬೇಕಾಗಿತ್ತು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.