ಬರದ ಜಿಲ್ಲೆಯಾದರೂ ಪ್ರತಿಭೆಗಳಿಗೆ ಬರವಿಲ್ಲ ಎಂಬುದನ್ನು ಇಂಡಿಗೋ ಏರ್ಲೆನ್ಸ್ನಲ್ಲಿ ಸೇವೆಗೆ ಸೇರುವ ಮೂಲಕ ಸಾಬೀತು ಪಡಿಸಿರುವ ಪೈಲಟ್ ಪ್ರೀತಿ ಸುಧೀರ ಬಿರಾದಾರ, ತಮ್ಮ ಮೊದಲ ಸಂಬಳವನ್ನು ಗೋಶಾಲೆಗೆ ಮೀಸಲಿಡುವ ಮೂಲಕ ಮಾದರಿಯಾಗಿದ್ದಾರೆ.
ಹೌದು, ಇಲ್ಲಿನ ಔಷಧ ವ್ಯಾಪಾರಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಸುಧೀರ ಬಿರಾದಾರ ಅವರ ಪುತ್ರಿ ಪ್ರೀತಿ ಬಿರಾದಾರ ವಿಮಾನ ಚಾಲಕಿಯಾಗಿ ಆಯ್ಕೆಯಾಗಿದ್ದಾರೆ. ಉತ್ತರ ಕರ್ನಾಟಕದಲ್ಲೇ ಮೊದಲ ಪೈಲಟ್ ಎಂಬ ಹೆಗ್ಗಳಿಕೆ ಹೊತ್ತಿರುವ ಪ್ರೀತಿ ಎರಡು ತಿಂಗಳ ಹಿಂದೆಯೇ ಸೇವೆಗೆ ಹಾಜರಾಗಿದ್ದಾರೆ. ಯಾವಾಗ ಮೊದಲ ಸಂಬಳ ಕೈಸೇರಿತೋ ಜಿಲ್ಲೆಗೆ ಆಗಮಿಸಿ ಅಂದುಕೊಂಡಂತೆ 1 ಲಕ್ಷ ರೂ.ಗೋಶಾಲೆಗೆ ನೀಡಿದ್ದಾರೆ. ಆ ಮೂಲಕ ಗೋಪ್ರೇಮಿಗಳ ಮನಗೆದ್ದಿರುವ ಪ್ರೀತಿ ಗಡಿಭಾಗದಲ್ಲಿ ಮಹಿಳಾ ಸಬಲತೆ ಸಂದೇಶ ಸಾರಿದ್ದಾರೆ. ತಂದೆಯೊಡಗೂಡಿ ಸಿದ್ಧೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ತಾಲೂಕಿನ ಕಗ್ಗೋಡ ಗೋಶಾಲೆ ಅಭಿವೃದ್ಧಿಗೆ 1 ಲಕ್ಷ ರೂ. ಚೆಕ್ ವಿತರಣೆ ಮಾಡಿದರು.
ಮೂಲತಃ ವಿಜಯಪುರದವರೇ ಆದ ಪ್ರೀತಿ ಬಿರಾದಾರ ಸೈನಿಕ ಶಾಲೆ ಶಿಶುನಿಕೇತನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಿಕ್ಷಣವನ್ನು ಕೇಂದ್ರೀಯ ವಿದ್ಯಾಲಯದಿಂದ ಪಡೆದಿದ್ದಾರೆ. ಬಳಿಕ ಪಿಡಿಜೆ ಮತ್ತು ಸಿಕ್ಯಾಬ್ ಕಾಲೇಜಿನಿಂದ ಪಿಯು ಶಿಕ್ಷಣ ಪಡೆದಿದ್ದಾರೆ. ನಂತರ ಹುಬ್ಬಳ್ಳಿಯ ಬಿ.ವಿ. ಭೂಮರಡ್ಡಿ ಕಾಲೇಜಿನಿಂದ ಇಂಜಿನಿಯರಿಂಗ್(ಇಸಿ) ಪದವಿ ಪಡೆದು ಎನ್ಎಫ್ಟಿಎ (ನ್ಯಾಶನಲ್ ಫ್ಲಾಯಿಂಗ್ ಟ್ರೇನಿಂಗ್ ಅಕ್ಯಾಡೆಮಿ)ಗೆ ಆಯ್ಕೆಯಾದರು. ಮಹಾರಾಷ್ಟ್ರ ನಾಗಪೂರ ಬಳಿಯ ಗೊಂಡಿಯೋದಲ್ಲಿರುವ ಈ ಅಕ್ಯಾಡೆಮಿಯಲ್ಲಿ ತರಬೇತಿ ಪಡೆದ ಪ್ರೀತಿ ಎರಡು ತಿಂಗಳ ಮಟ್ಟಿಗೆ ದುಬೈನಲ್ಲಿ ಹೆಚ್ಚುವರಿ ತರಬೇತಿ ಪಡೆದಿದ್ದಾರೆ. ಸದ್ಯ ಒಪ್ಪಂದದ ಮೇರೆಗೆ ಇಂಡಿಗೋ ಏರ್ಲೆನ್ಸ್ನಲ್ಲಿ ಸೇವೆಗೆ ಹಾಜರಾಗಿದ್ದಾರೆ.
ವಿಮಾನ ಚಾಲಕಿ ಆಗುವ ಕನಸು ನೆರವೇರಿದರೆ ಮೊದಲ ತಿಂಗಳ ಸಂಬಳ ಗೋಶಾಲೆಗೆ ಮೀಸಲಿಡುವುದಾಗಿ ಪ್ರೀತಿ ಹಾಗೂ ತಂದೆ ಸುಧೀರ ಮುಂಚಿತವಾಗಿಯೇ ತೀರ್ಮಾನ ಮಾಡಿದ್ದರು. ತನ್ನಿಮಿತ್ತ ಮೊದಲ ಸಂಬಳ ಬರುತ್ತಿದ್ದಂತೆ ಜಿಲ್ಲೆಗಾಗಮಿಸಿದ ಪ್ರೀತಿ ತಂದೆಯೊಡಗೂಡಿ ಕಗ್ಗೋಡ ಗೋಶಾಲೆಗೆ ಚೆಕ್ ವಿತರಿಸಿದರು. ಪ್ರೀತಿ ವಿಮಾನ ಚಾಲಕಿ ಆಗಿರುವ ಹೆಮ್ಮೆ ಜಿಲ್ಲೆಯದಾದರೆ ಗೋವಿನ ಕುರಿತು ಕಳಕಳಿ ವ್ಯಕ್ತಪಡಿಸಿರುವುದು ದೇಶಕ್ಕೆ ಮಾದರಿಯಾಗಿದೆ. ಕಗ್ಗೋಡ ಗೋಶಾಲೆ ಹಾಗೂ ಸಿದ್ಧೇಶ್ವರ ಸಂಸ್ಥೆಯಿಂದ ಪ್ರೀತಿ ಕುಟುಂಬಕ್ಕೆ ಜಿಲ್ಲೆ ಪರವಾಗಿ ಪುರಸ್ಕರಿಸಲಾಯಿತು.
ಅನುಭವ ಹಂಚಿಕೊಂಡ ಪ್ರೀತಿ
ಪೈಲಟ್ ಕನಸು ನನಸು ಮಾಡಿಕೊಂಡ ಅನುಭವ ‘ವಿಜಯವಾಣಿ’ಯೊಂದಿಗೆ ಹಂಚಿಕೊಂಡಿರುವ ಪ್ರೀತಿ, ಹಿಂದುಳಿದ ಜಿಲ್ಲೆಯಿಂದ ಹೋಗಿ ಪೈಲೆಟ್ ಆಗುವ ಕನಸು ನಸಾಗಿದ್ದು ತೀವ್ರ ಸಂತಸ ತಂದಿದೆ. ಇಂಜಿನಿಯರಿಂಗ್ ಮುಗಿದ ನಂತರ ಎಂಎಸ್ ಮಾಡುವ ಯೋಚನೆ ಇತ್ತು. ಆದರೆ, ತಂದೆ ದೇಶ ಬಿಟ್ಟು ಹೋಗದಂತೆ ತಿಳಿಸಿದ್ದರಿಂದ ಪೈಲಟ್ ಆಗುವ ಆಯ್ಕೆ ಎದುರಾಯಿತು. ಅದಕ್ಕಾಗಿ ಎರಡು ತಿಂಗಳು ಮಾಹಿತಿ ಕಲೆ ಹಾಕಿದೆ. ಸಹಪಾಠಿಗಳೆಲ್ಲಾ ಮುಂಬೈ, ಚೆನ್ನೈ ಸೇರಿದಂತೆ ಮುಂತಾದ ಭಾಗದವರಾಗಿದ್ದು, ಅವರ ಕುಟುಂಬ ಸದಸ್ಯರು ಅದೇ ಸೇವೆಯಲ್ಲಿದ್ದವರು. ಹೀಗಾಗಿ ಅವರಿಗೆ ಬೇಕಾದ ಮಾಹಿತಿ ಸಿಗುತ್ತಿತ್ತು. ಆದರೆ, ನಾನು ಆ ಕ್ಷೇತ್ರಕ್ಕೆ ಹೊಸಬಳಾದ್ದರಿಂದ ಆರಂಭದಲ್ಲಿ ತೊಂದರೆ ಅನುಭವಿಸಬೇಕಾಯಿತು.
ಸ್ಕೈಡೈವಿಂಗ್, ಪ್ಯಾರಾಸಿಲಿಂಗ್ ಸೇರಿದಂತೆ ಮುಂತಾದ ಸಾಹಸ ಕ್ರೀಡೆಗಳೆಂದರೆ ಅಚ್ಚುಮೆಚ್ಚು. ಹೀಗಾಗಿ ಇದೇ ಕ್ಷೇತ್ರ ಆಯ್ಕೆ ಮಾಡಿಕೊಂಡೆ. ಮಹಿಳೆಯರು ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಅಪಾಘಾತವಾದರೆ ಹೇಗೆ? ಎಂಬ ಭಯ. ಅಪಘಾತ ಆಗುವುದಾದರೆ ಯಾವ ಕ್ಷೇತ್ರದಲ್ಲಾದರೂ ಆಗಬಹುದು. ಹಾಗಂತ ಸಾಧನೆಯಿಂದ ಹಿಂಜರಿಯಬಾರದು. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಮಹಿಳೆಯರಿಗೆ ಕಾಲೇಜು ವರೆಗೂ ಕಲಿಸೋದೆ ಹೆಚ್ಚು. ಅಂಥದರಲ್ಲಿ ನಮ್ಮ ತಂದೆ 80 ಲಕ್ಷ ರೂ.ಖರ್ಚು ಮಾಡಿ ತರಬೇತಿ ಕೊಡಿಸಿದರು. ಅವರಿಗೆ ಚಿರ ಋಣಿ.
ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ವಿಜಯಪುರದಂಥ ಹಿಂದುಳಿದ ಜಿಲ್ಲೆಗಳಲ್ಲೂ ವಿಮಾನ ಚಾಲನೆ ತರಬೇತಿ ಕೇಂದ್ರಗಳಾಗಬೇಕು. ಕನಿಷ್ಠ ಅಂಥ ತರಬೇತಿಗೆ ಬೇಕಾದ ಪೂರ್ವ ತಯಾರಿ ಕುರಿತು ಮಾಹಿತಿ ನೀಡುವ ಕಾರ್ಯವಾಗಬೇಕು. ಈ ಭಾಗದಲ್ಲಿ ರಾಜ್ಯ ಮಹಿಳಾ ವಿವಿ ಇದೆ. ಅಲ್ಲಿ ಕರಿಯರ್ ಕೌನ್ಸಿಲ್ನಂತ ಚಟುವಟಿಕೆ ಹಮ್ಮಿಕೊಳ್ಳಬೇಕು.
– ಪ್ರೀತಿ ಬಿರಾದಾರ, ವಿಮಾನ ಚಾಲಕಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.