ಅಂಕಾರಾ : ಟರ್ಕಿಯಲ್ಲಿ ಶುಕ್ರವಾರ ರಾತ್ರಿ ಸೇನಾ ಪಡೆಗಳು ಕ್ಷಿಪ್ರ ಕ್ರಾಂತಿಯನ್ನು ನಡೆಸಿದ್ದು, ಇದರಲ್ಲಿ ನಾಗರಿಕರು ಮತ್ತು ಪೊಲೀಸರು ಸೇರಿದಂತೆ ಸುಮಾರು 60 ಜನರು ಸಾವನ್ನಪ್ಪಿದ್ದಾರೆ.
ಟರ್ಕಿಯ ಸಂಸತ್ನಲ್ಲಿ ಮೇಲೆ ಅಲ್ಲಿಯ ಮಿಲಿಟರಿ ಪಡೆ ದಾಳಿ ಮಾಡಿದ್ದು, ಎರ್ಡೋಗನ್ ಸರ್ಕಾರವನ್ನು ಕಿತ್ತೊಗೆದಿರುವುದಾಗಿ ಮಿಲಿಟರಿ ಹೇಳಿದೆ. ಟರ್ಕಿಯ ಸಂಸತ್ ಮೇಲೆ ದಾಳಿ ಮಾಡಿದ್ದರ ಪರಿಣಾಮ ಹಲವಾರು ಅಧಿಕಾರಿಗಳು ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಮಿಲಿಟರಿ ಟ್ಯಾಂಕರ್ಗಳು ಸಂಚರಿಸುತ್ತಿವೆ.
ಸೇನೆಯ ಕ್ಷಿಪ್ರ ಕ್ರಾಂತಿಯನ್ನು ಅಲ್ಲಿನ ಜನರು ವಿರೋಧಿಸಿ, ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು ಸ್ಥಗಿತಗೊಂಡಿವೆ.
ಇಸ್ತಾಂಬುಲ್ನ ಬಾಸ್ಪೋರಸ್ ಸೇತುವೆಯನ್ನು ಸೇನೆ ವಶಕ್ಕೆ ಪಡೆದಿದ್ದು, ಇಸ್ತಾಂಬುಲ್ನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಹೆದ್ದಾರಿಗಳಲ್ಲಿ ರಸ್ತೆ ಸಂಚಾರಕ್ಕೆ ಅಡೆಚಣೆಯುಂಟಾಗಿದೆ. ಟರ್ಕಿ ಅಧ್ಯಕ್ಷರ ಅರಮನೆಯ ಬಳಿ ಸಹ ಸೇನಾ ಪಡೆಯ ಯುದ್ಧ ವಿಮಾನಗಳು ಬಾಂಬ್ ದಾಳಿ ನಡೆಸಿವೆ. ಸಂಸತ್ ಭವನದ ಮೇಲೆ ಸೇನಾ ಹೆಲಿಕಾಪ್ಟರ್ಗಳು ಹಾರಾಟ ನಡೆಸುತ್ತಿವೆ.
ಟರ್ಕಿ ಅಧ್ಯಕ್ಷ ರಿಸೆಪ್ ಟಯ್ಯಿಪ್ ಎರ್ಡೋಗನ್ ಈ ಕುರಿತು ಹೇಳಿಕೆ ನೀಡಿದ್ದು, ಸೇನೆಯ ಸಣ್ಣ ತುಕಡಿಯೊಂದು ದಂಗೆ ಎದ್ದಿತ್ತು. ದೇಶದಲ್ಲಿ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಟರ್ಕಿಯ ಜನರು ಸರ್ಕಾರಕ್ಕೆ ಬೆಂಬಲ ಸೂಚಿಸಿ, ಪ್ರಜಾಪ್ರಭುತ್ವದ ಉಳಿವಿಗಾಗಿ ರಸ್ತೆಗಿಳಿದು ಪ್ರತಿಭಟನೆ ನಡೆಸಬೇಕು. ಸೈನಿಕರನ್ನು ಹಿಮ್ಮೆಟ್ಟಿಸಬೇಕು ಎಂದು ಜನತೆಗೆ ಕರೆ ಕೊಟ್ಟಿದ್ದಾರೆ.
ತುರ್ತು ಶಾಸಕಾಂಗ ಪಕ್ಷದ ಸಭೆ ಕರೆದ ಪ್ರಧಾನಿ ಬಿನಾಲಿ ಯಿಲ್ದಿಮೀರ್ ಸಂಸದರ ಜೊತೆ ಚರ್ಚಿಸಿದ್ದಾರೆ.
ಸರ್ಕಾರ ಸೇನಾ ಪಡೆಗಳನ್ನು ನಿಯಂತ್ರಿಸಲು ಕಾರ್ಯಾರಂಭಿಸಿದ್ದು ಸುಮಾರು 130ಕ್ಕೂ ಹೆಚ್ಚು ಯೋಧರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಸ್ತಾಂಬುಲ್ ವಿಮಾನ ನಿಲ್ದಾಣವನ್ನು ಮರುವಶಕ್ಕೆ ಪಡೆದುಕೊಂಡಿದ್ದು, ವಿಮಾನ ಹಾರಾಟ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.