ನವದೆಹಲಿ: ಭಾರತ 800 ವರ್ಷಗಳ ಬಳಿಕ ಹಿಂದೂ ಆಡಳಿತಗಾರನನ್ನು ಪಡೆದುಕೊಂಡಿದೆ ಎಂಬುದಾಗಿ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ ಎಂದು ತಪ್ಪಾಗಿ ಪ್ರಕಟಿಸಿರುವ ಔಟ್ಲುಕ್ ಮ್ಯಾಗಜೀನ್ ಕೊನೆಗೂ ವಿಷಾದ ವ್ಯಕ್ತಪಡಿಸಿದೆ.
ವಿಎಚ್ಪಿ ಮುಖಂಡ ದಿವಂಗತ ಅಶೋಕ್ ಸಿಂಘಾಲ್ ನೀಡಿದ್ದ ಹೇಳಿಕೆಯನ್ನು ರಾಜನಾಥ್ ಸಿಂಗ್ ಹೇಳಿದ್ದು ಎನ್ನುವ ರೀತಿ ನವೆಂಬರ್ 16ರಂದು ಔಟ್ಲುಕ್ ಲೇಖನ ಪ್ರಕಟ ಮಾಡಿತ್ತು. ಈ ವರದಿಯನ್ನು ಆಧರಿಸಿ ಸಿಪಿಐ-ಎಂ ಸಂಸದ ಮೊಹಮ್ಮದ್ ಸಲೀಮ್ ಸಂಸತ್ತಿನಲ್ಲಿ ತೀವ್ರ ಗದ್ದಲವನ್ನೇ ಎಬ್ಬಿಸಿದ್ದರು.
ಇದೀಗ ಎಚ್ಚೆತ್ತಿರುವ ಔಟ್ಲುಕ್, ಸಂಸತ್ತು ಮತ್ತು ಗೃಹಸಚಿವರಿಗೆ ಕೆಟ್ಟ ಹೆಸರು ತರುವ ಉದ್ದೇಶ ನಮ್ಮದಲ್ಲ. ಹೇಳಿಕೆಯ ಮೂಲವನ್ನು ಸರಿಯಾಗಿ ಪರಿಶೀಲಿಸದೆ ಸುದ್ದಿ ಪ್ರಕಟಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಆನ್ಲೈನ್ನಲ್ಲಿ ಪ್ರಕಟಿಸಿರುವ ಈ ಸುದ್ದಿಯನ್ನು ಸರಿಪಡಿಸಿದ್ದೇವೆ ಎಂದು ಹೇಳಿದೆ.
ಔಟ್ಲುಕ್ ವರದಿಯನ್ನು ಆಧರಿಸಿ ಸಲೀಮ್ ಅವರು ರಾಜನಾಥ್ ಸಿಂಗ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ತಾನು ಈ ರೀತಿ ಹೇಳಿಕೆ ನೀಡಿಲ್ಲ ಎಂದು ಸಿಂಗ್ ಸ್ಪಷ್ಟೀಕರಣ ನೀಡಿದ್ದರು.
ಗೃಹ ಸಚಿವರ ವಿರುದ್ಧ ಆರೋಪ ಮಾಡಿದ ಸಲೀಂ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಸದಸ್ಯರು ಒತ್ತಾಯಿಸಿದ್ದರು. ಸಿಪಿಎಂ ಸದಸ್ಯರು ಬೇಡಿಕೆಗೆ ಕಿವಿಗೊಡಲಿಲ್ಲ. ಅಂತಿಮವಾಗಿ ಸ್ಪೀಕರ್ ಸುಮಿತ್ರಾ ಮಹಾಜನ್, ಸಲೀಂ ಆರೋಪವನ್ನು ದಾಖಲೆಯಿಂದ ತೆಗೆದು ಹಾಕಿ ರೂಲಿಂಗ್ ನೀಡಿದ್ದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.