ಒಂದು ಕಾಲದಲ್ಲಿ ವ್ಯಾಪಾರ, ಫಲವತ್ತಾದ ಭೂಮಿ ಮತ್ತು ಕೌಶಲ್ಯಪೂರ್ಣ ಕುಶಲಕರ್ಮಿಗಳಿಂದ ಸಮೃದ್ಧವಾಗಿದ್ದ ಗುಜರಾತ್, ಸಮೃದ್ಧಿ ಮತ್ತು ಸಂಘರ್ಷ ಎರಡನ್ನೂ ಕಂಡಿತು. ಈ ಹಿನ್ನೆಲೆಯಲ್ಲೇ ದೆಹಲಿಯ ಗಣ್ಯರೊಂದಿಗೆ ಸಂಬಂಧ ಹೊಂದಿದ್ದ ಮತಾಂತರಗೊಂಡ ರಜಪೂತನ ಮಗ ಜಾಫರ್ ಖಾನ್ ಮುಜಫರ್ ಷಾ I ಮುನ್ನಲೆಗೆ ಬಂದ. 1391 ರಲ್ಲಿ ಗವರ್ನರ್ ಆಗಿ ನೇಮಕಗೊಂಡ ಅವನು ದೆಹಲಿಯ ಅವನತಿಯ ಲಾಭವನ್ನು ಪಡೆಯಲಾರಂಭಿಸಿದ. 1407 ರಲ್ಲಿ, ಅವನು ಸ್ವಾತಂತ್ರ್ಯ ಘೋಷಿಸಿ, ಹಿಂಸಾತ್ಮಕ ಅಭಿಯಾನಗಳ ಮೂಲಕ ಗುಜರಾತಿನಲ್ಲಿ ಸುಲ್ತಾನರ ಆಡಳಿತವನ್ನು ಸ್ಥಾಪಿಸಿದ. ಎಲ್ಲರೂ ಆತನನ್ನು ಸಹಿಸಿಕೊಂಡರು, ಆದರೆ ಸೋಮನಾಥದ ಬಳಿಯ ಸೌರಾಷ್ಟ್ರದಲ್ಲಿ, 16 ವರ್ಷದ ವೀರ್ ಹಮೀರ್ಜಿ ಗೋಹಿಲ್ ಅವನ ವಿರುದ್ಧ ನಿಲ್ಲಲು ನಿರ್ಧರಿಸಿದ.
ಕ್ರಿ.ಶ. 1398 ರಲ್ಲಿ, ಅರ್ಥಿಲಾದ ರಾಜ ಭೀಮಜಿ ಗೋಹಿಲ್ ಅವರ ಕಿರಿಯ ಮಗ ಹಮೀರ್ಜಿ ಮನೆಗೆ ಮರಳಿದ್ದರು. ಅವರು ಚಿಕ್ಕವರಾಗಿದ್ದರು, ಕುಟುಂಬ ಮತ್ತು ಸೌಕರ್ಯ ಎಲ್ಲವೂ ಅವರಲ್ಲಿತ್ತು, ಆದರೆ ಇತಿಹಾಸವು ತನ್ನ ಹೆಸರನ್ನು ದಾಖಲಿಸಿಕೊಳ್ಳಲಿದೆ ಎಂಬುದು ಮಾತ್ರ ಅವರಿಗೆ ತಿಳಿದಿರಲಿಲ್ಲ.
ಒಂದು ಸಾಮಾನ್ಯ ದಿನ ಅವರ ಬದಕುನ್ನೇ ಬದಲಾಯಿಸಿತು. ಆ ದಿನ ಹಸಿವಿನಿಂದ ಅಡುಗೆಮನೆಗೆ ಧಾವಿಸಿದ್ದ ಹಮಿರ್ಜಿಗೆ ಅವರ ಅತ್ತಿಗೆ, “ನೀನು ಯಾಕೆ ಇಷ್ಟು ಆತುರದಲ್ಲಿದ್ದೀ? ಸೋಮನಾಥನನ್ನು ರಕ್ಷಿಸಲು ಹೋಗಬೇಕಿದೆಯೇ?” ಎಂದು ಪ್ರಶ್ನಿಸಿದರು. ಆ ಮಾತುಗಳು ಅವನಿಗೆ ಗೊಂದಲ ಮೂಡಿಸಿದವು. ಅವನು, “ನೀವು ಯಾಕೆ ಹಾಗೆ ಹೇಳುತ್ತಿದ್ದೀರಿ? ಸೋಮನಾಥ ಅಪಾಯದಲ್ಲಿದೆಯೇ?” ಎಂದು ಕೇಳಿದ. ನಂತರ ಅವನಿಗೆ ಸತ್ಯದ ಅರಿವಾಯಿತು.
ಸುಲ್ತಾನರ ಪಡೆಗಳು ಸೋಮನಾಥದ ಕಡೆಗೆ ಸಾಗುತ್ತಿದ್ದವು. ಆ ಕ್ಷಣದಲ್ಲಿ, ಒಬ್ಬ ಹುಡುಗ ಯೋಧನಾದ, ಹಮೀರ್ಜಿ ಹಿಂಜರಿಕೆಯಿಲ್ಲದೆ “ಯಾರು ಬಂದರೂ ಬರದಿದ್ದರೂ, ನಾನು ಸೋಮನಾಥವನ್ನು ರಕ್ಷಿಸಲು ಹೋಗುತ್ತೇನೆ” ಎಂದು ಘೋಷಿಸಿಬಿಟ್ಟ.
ಹಮೀರ್ಜಿ ರಜಪೂತ ಯೋಧರ ಒಂದು ಸಣ್ಣ ಗುಂಪನ್ನು ಒಟ್ಟುಗೂಡಿಸಿ ಸೋಮನಾಥದ ಕಡೆಗೆ ಮೆರವಣಿಗೆ ನಡೆಸಿದ. ದಾರಿಯುದ್ದಕ್ಕೂ, ಪವಿತ್ರ ದೇವಾಲಯದ ಹೊರಗೆ ಬೀಡುಬಿಟ್ಟಿದ್ದ ಭಿಲ್ನ ರಾಜ ವೇಗಡ್ಜಿ ಅವನೊಂದಿಗೆ ಸೇರಿಕೊಂಡ. ಒಟ್ಟಾಗಿ, ಅವರು ಕೇವಲ ದೇವಾಲಯವನ್ನು ಮಾತ್ರವಲ್ಲದೆ ಊರನ್ನು ರಕ್ಷಿಸಲು ಸಿದ್ಧರಾದರು.
ಅವರು ಎಷ್ಟು ದೊಡ್ಡ ದೈತ್ಯನನ್ನು ಎದುರಿಸುತ್ತಿದ್ದಾರೆಂಬುದು ಅವರಿಗೆ ತಿಳಿದಿತ್ತು. ಜಾಫರ್ ಖಾನ್ನ ಪಡೆಗಳು ವಿಶಾಲವಾಗಿದ್ದವು, ಸಂಘಟಿತವಾಗಿದ್ದವು ಮತ್ತು ಪಟ್ಟುಬಿಡದೆ ಇದ್ದವು, ಆದರೆ ಧೈರ್ಯವು ಸಂಖ್ಯೆಯ ಶಕ್ತಿಯನ್ನು ಅಳೆಯುವುದಿಲ್ಲ. ಸಂಜೆಯ ಪ್ರಾರ್ಥನೆಗಳು ಸೋಮನಾಥದ ಮೂಲಕ ಪ್ರತಿಧ್ವನಿಸುತ್ತಿದ್ದಂತೆ, ಹಮೀರ್ಜಿ ತನ್ನ ರಕ್ಷಣೆಯನ್ನು ಸಿದ್ಧಪಡಿಸಿದ. ಸೀಮಿತ ಸಂಪನ್ಮೂಲಗಳೊಂದಿಗೆ, ಅವನು ಬಾಣಗಳು, ಕಲ್ಲಿನ ಚೆಂಡುಗಳು, ಕುದಿಯುವ ಎಣ್ಣೆ ಮತ್ತು ಸಂಪೂರ್ಣ ದೃಢನಿಶ್ಚಯದೊಂದಿಗೆ ದೃಢಹೆಜ್ಜೆ ಇಟ್ಟ. ಏತನ್ಮಧ್ಯೆ, ಜಾಫರ್ ಖಾನ್ನ ಸೈನ್ಯವು ಸೋಮನಾಥವನ್ನು ಸಂಪೂರ್ಣವಾಗಿ ಸುತ್ತುವರೆದಿತು.
ಮರುದಿನ ಬೆಳಿಗ್ಗೆ, ಒಂಬತ್ತು ದಿನಗಳ ಯುದ್ಧ ಪ್ರಾರಂಭವಾಯಿತು. ಹಮೀರ್ಜಿ ಮತ್ತು ಅವನ ಯೋಧರು ಕುದುರೆಯ ಮೇಲೆ ಮುನ್ನುಗ್ಗಿ, ಈಟಿಗಳಿಂದ ಹೊಡೆದು, ಪಡೆಗಳನ್ನು ಅಡ್ಡಿಪಡಿಸಿದರು. ಹಠಾತ್ ಪ್ರತಿರೋಧವು ಆಕ್ರಮಣಕಾರರನ್ನು ನಡುಗಿಸಿತು. ಒಂದು ಕ್ಷಣ, ಆಕ್ರಮಣವನ್ನು ನಿಲ್ಲಿಸಬೇಕಾಯಿತು. ಆದರೆ ಮುತ್ತಿಗೆ ಬಿಗಿಯಾಯಿತು. ಜಾಫರ್ ಖಾನ್ ಕಂದಕಗಳನ್ನು ಅಗೆಯುವ ಮೂಲಕ ರಕ್ಷಣೆಯನ್ನು ಭೇದಿಸಲು ಪ್ರಯತ್ನಿಸಿದ. ಹಮೀರ್ಜಿ ಜಾಣ್ಮೆಯಿಂದ ಅವನನ್ನು ಎದುರಿಸಿದ – ಕಂದಕಗಳನ್ನು ನೀರಿನಿಂದ ತುಂಬಿಸಿ ಶತ್ರುಗಳ ದಾಳಿಯನ್ನು ವಿಳಂಬಗೊಳಿಸಿದ.
ಯುದ್ಧವು ಒಂಬತ್ತು ದಿನಗಳವರೆಗೆ ನಿರಂತರವಾಗಿ ಮುಂದುವರೆಯಿತು. ಒಂಬತ್ತನೇ ದಿನದ ಹೊತ್ತಿಗೆ, ಆಯಾಸವು ಯೋಧರನ್ನು ಕಿತ್ತು ತಿಂದಿತು. ಹಮೀರ್ಜಿಯ ಬಳಿ ಕೆಲವೇ ಕೆಲವು ಯೋಧರು ಮಾತ್ರ ಉಳಿದಿದ್ದರು. ಯುದ್ಧಭೂಮಿ ತಂತ್ರದ ಸ್ಥಳವಾಗಿ ಉಳಿಯಲಿಲ್ಲ; ಅದು ತ್ಯಾಗದ ಸ್ಥಳವಾಗಿತ್ತು. ಗಾಯಗೊಂಡ ಸೈನಿಕರು ಅವನ ಸುತ್ತಲೂ ಮಲಗಿದ್ದರು, ಅನೇಕರು ಕೈಕಾಲುಗಳನ್ನು ಕಳೆದುಕೊಂಡಿದ್ದರು, ಊಹಿಸಲಾಗದ ನೋವಿನಿಂದ ಜೀವವನ್ನು ಕೈಯಲ್ಲಿ ಹಿಡಿದಿದ್ದರು. ಕೇವಲ 250 ಯೋಧರು ಮಾತ್ರ ಉಳಿದಿದ್ದರು. ಆದರೆ ಆಗಲೂ ಅವರು ಶರಣಾಗಲಿಲ್ಲ.
ಭಾರವಾದ ಹೃದಯಗಳು ಮತ್ತು ದೃಢ ಸಂಕಲ್ಪದೊಂದಿಗೆ ಹಮೀರ್ಜಿ ಮತ್ತು ಅವನ ಜನರು ತಮ್ಮ ಅಂತಿಮ ನಿಲುವಿಗೆ ಸಿದ್ಧರಾದರು. ದೇವಾಲಯದ ಒಳಗೆ, ಅವರು ತಮ್ಮ ಕೊನೆಯ ಪ್ರಾರ್ಥನೆಗಳನ್ನು ಮಾಡಿದರು, ಶಿವಲಿಂಗವನ್ನು ನೀರಿನಿಂದ ಶುದ್ಧೀಕರಿಸಿದರು, ಒಬ್ಬರನ್ನೊಬ್ಬರು ಅಪ್ಪಿಕೊಂಡರು ಮತ್ತು ಹೊರಬಂದು ವಿಜಯವನ್ನು ನಿರೀಕ್ಷಿಸುವ ಸೈನಿಕರಂತೆ ಅಲ್ಲ, ಆದರೆ ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧರಾಗಿರುವ ಯೋಧರಂತೆ ಮುನ್ನುಗ್ಗಿದರು. ಸೂರ್ಯ ಮುಳುಗಲು ಪ್ರಾರಂಭಿಸುತ್ತಿದ್ದಂತೆ, ಅಂತಿಮ ಯುದ್ಧವು ತೆರೆದುಕೊಂಡಿತು.
ಒಬ್ಬೊಬ್ಬರಾಗಿ, ಅವರು ಕುಸಿದರು. ಆದರೂ ಹೋರಾಡಿದರು, ಮತ್ತು ಅವರು ಹೋರಾಡುತ್ತಲೇ ಇದ್ದರು. ಹಮೀರ್ಜಿ ಮತ್ತು ಕೆಲವರು ಮಾತ್ರ ತಡೆಯಲಾಗದ ಶಕ್ತಿಯ ವಿರುದ್ಧ ನಿಂತು, ತಲೆಬಾಗಲು ನಿರಾಕರಿಸಿ, ಕೊನೆಯ ಉಸಿರಿನವರೆಗೂ ಹೋರಾಡಿದರು.
ಕೊನೆಯಲ್ಲಿ, ಅವರು ಕುಸಿದರು. ಜಾಫರ್ ಖಾನ್ ಪಡೆಗಳು ಭೂಮಿಯನ್ನು ವಶಪಡಿಸಿಕೊಂಡವು ಮತ್ತು ದೇವಾಲಯವನ್ನು ಅಪವಿತ್ರಗೊಳಿಸಿದವು. ದರ್ಪ ಗೆದ್ದಿತ್ತು, ಆದರೆ ಅದು ಧೈರ್ಯವನ್ನು ಜಯಿಸಿರಲಿಲ್ಲ.
ಗುಜರಾತ್ ಸುಲ್ತಾನರ ಉದಯವು ದೌರ್ಬಲ್ಯದ ಕ್ಷಣದಲ್ಲಿ ವಶಪಡಿಸಿಕೊಂಡ ಶಕ್ತಿಯ ಮೇಲೆ ನಿರ್ಮಿಸಲ್ಪಟ್ಟಿತು ಮತ್ತು ಬಲದ ಮೂಲಕ ವಿಸ್ತರಿಸಲ್ಪಟ್ಟಿತು. ಆದರೆ ಹರ್ಜೀತ್ ಕಥೆ ವಿಜಯದ ಕಥೆಯಲ್ಲ, ಆದರೆ ಅದು ಧೈರ್ಯದ ಕಥೆ.
ಸಿಂಹಾಸನ ಮತ್ತು ವಿಶಾಲ ಸೈನ್ಯವಿಲ್ಲದ ವೀರ್ ಹಮೀರ್ಜಿ ಗೋಹಿಲ್ ಧೈರ್ಯವನ್ನೇ ತನ್ನ ಶಕ್ತಿಯನ್ನಾಗಿಸಿಕೊಂಡು ಹೋರಾಡಿದ. ಅಗಾಧವಾದ ಪ್ರತಿಕೂಲಗಳ ಪರಿಸ್ಥಿತಿಗಳ ನಡುವೆಯೂ ಪೂಜ್ಯ ಸೋಮನಾಥ ದೇವಾಲಯವನ್ನು ರಕ್ಷಿಸುತ್ತಾ ಚಿಕ್ಕ ವಯಸ್ಸಿನಲ್ಲಿಯೇ ಸರ್ವಸ್ವವನ್ನೂ ತ್ಯಾಗ ಮಾಡಿದ.
ಇಂದಿಗೂ, ಅವನ ಪರಂಪರೆ ಜೀವಂತವಾಗಿದೆ. ಅವನ ವಂಶಸ್ಥರು ಅವರನ್ನು ತಮ್ಮ ನಾಯಕ ಎಂದು ಗೌರವಿಸುತ್ತಾರೆ, ದೇವಾಲಯದ ಮೇಲೆ ಸೋಮನಾಥನ ಧ್ವಜವನ್ನು ಸ್ಥಾಪಿಸುವ ಮೊದಲು ಅವನ ಸ್ಮಾರಕದಲ್ಲಿ ಅದನ್ನು ಇಡುತ್ತಾರೆ – ಇದು ಜೀವನದ ಬದಲು ಧೈರ್ಯವನ್ನು ಆರಿಸಿಕೊಂಡ ಯೋಧನಿಗೆ ಗೌರವದ ಶಾಶ್ವತ ಸಂಕೇತವಾಗಿದೆ.
ಏಕೆಂದರೆ ಅಧಿಕಾರವು ಏರಬಹುದು ಮತ್ತು ಬೀಳಬಹುದು, ಆದರೆ ಧೈರ್ಯವು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



