
ಬೆಂಗಳೂರು: ಕಾಂಗ್ರೆಸ್ ಸರಕಾರವು ಬಡವರಿಗೆ ಮನೆ ಕೊಡಬೇಕು, ಭೂರಹಿತರಿಗೆ ಭೂಮಿ ಕೊಡಬೇಕಿತ್ತು. ಆದರೆ ಈ ಕೆಲಸವನ್ನು ಮಾಡುತ್ತಿಲ್ಲ. ತಾನೇ ಭೂಮಿ ಕಬಳಿಸುವ ಕೆಲಸ ಮಾಡುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಭೂಕಬಳಿಕೆಯಲ್ಲಿ ಸರಕಾರವೇ ನಿರತವಾಗಿದೆ. ಸರಕಾರವು ತಾಲ್ಲೂಕು, ಜಿಲ್ಲೆ, ಮಂಡಲ, ಪಂಚಾಯಿತಿ- ಹೀಗೆ ಎಲ್ಲ ಕಡೆ ನಿವೇಶನ ಪಡೆಯಲು ಅದಕ್ಕೆ ಅಧಿಕಾರ ಇಲ್ಲ. ಕಾನೂನು ಉಲ್ಲಂಘಿಸಿ ಅದು ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ ಲೀಸ್ಗೆ ಮುಧೋಳದಲ್ಲಿ ನಿವೇಶನ ಪಡೆಯಲು ಮುಂದಾಗಿತ್ತು. ಆದರೆ, ಇಲಾಖೆಯು ಅದನ್ನು ತಿರಸ್ಕರಿಸಿತ್ತು ಎಂದು ಗಮನ ಸೆಳೆದರು.
ಚಿಕ್ಕಬಳ್ಳಾಪುರದಲ್ಲಿ ಒಂದು ಸಿಎ ನಿವೇಶನವನ್ನು ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ ಪಡೆಯಲು ಮುಂದಾಗಿತ್ತು. 3,404 ಚದರ ಮೀಟರ್ನ 4 ಕೋಟಿ 8 ಲಕ್ಷ 51,120 ರೂ. ಬೆಲೆಯ ನಿವೇಶನ ಇದಾಗಿದೆ. ಇದನ್ನು ಅವರು ತಮಗೆ ಪಡೆದುಕೊಂಡಿದ್ದಾರೆ. ಅವರದೇ ಪೆನ್, ಅವರದೇ ಪುಸ್ತಕ, ಅವರದೇ ಅಧಿಕಾರ, ಅವರೇ ಬರಕೊಳ್ಳುವುದು, 20 ಲಕ್ಷ 42,556 ರೂ.ಗೆ ಇದನ್ನು ಪಡೆದಿದ್ದಾರೆ. ಕೇವಲ ಶೇ 5 ಮೌಲ್ಯಕ್ಕೆ ಇದನ್ನು ತೆಗೆದುಕೊಂಡಿದ್ದಾಗಿ ಟೀಕಿಸಿದರು. ತುಮಕೂರು, ಗ್ರಾಮಾಂತರ ಜಿಲ್ಲೆ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ- ಹೀಗೆ ಎಲ್ಲ ಜಿಲ್ಲೆಗಳಲ್ಲಿ ನಿವೇಶನವನ್ನು ತೆಗೆದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.
ಬಾದಾಮಿಯಲ್ಲಿ 613 ಚದರ ಮೀಟರ್ನ ನಿವೇಶನಕ್ಕೆ 24 ಲಕ್ಷದ 52 ಸಾವಿರ ಮೌಲ್ಯದ ಬದಲಾಗಿ 1 ಲಕ್ಷ 22 ಸಾವಿರಕ್ಕೆ ಪಡೆದಿದ್ದಾರೆ. ಇದು ಕೂಡ ಶೇ 5ರಷ್ಟಿದೆ. ಕೊಪ್ಪಳದಲ್ಲಿ 1 ಕೋಟಿ 31 ಲಕ್ಷದ 31,975 ರೂ. ಬದಲು 6,56,598 ರೂ.ಗೆ ಅಂದರೆ ಶೇ 5 ದರಕ್ಕೆ ಪಡೆದಿದ್ದಾರೆ. ಚನ್ನರಾಯಪಟ್ಟಣದಲ್ಲಿ 1.36 ಲಕ್ಷಕ್ಕೆ ತೆಗೆದುಕೊಂಡಿದ್ದಾರೆ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 1 ಕೋಟಿ 45 ಲಕ್ಷ 78 ಸಾವಿರದ ನಿವೇಶನವನ್ನು 7 ಲಕ್ಷ 28 ಸಾವಿರಕ್ಕೆ ಬರೆದುಕೊಂಡಿದ್ದಾರೆ. ಗೌರಬಿದನೂರಿನಲ್ಲಿ 90 ಲಕ್ಷ 80,900 ರೂ ಬೆಲೆಯ ನಿವೇಶನವನ್ನು 4 ಲಕ್ಷ 54 ಸಾವಿರಕ್ಕೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕ ಸೌಕರ್ಯಕ್ಕಾಗಿ ಇರುವ ನಿವೇಶನಗಳಿವು ಎಂದು ಗಮನಕ್ಕೆ ತಂದರು.
ಮಾನ್ವಿಯಲ್ಲಿ 37 ಲಕ್ಷ 87,500 ರೂ. ನಿವೇಶನವನ್ನು 1 ಲಕ್ಷ 89 ಸಾವಿರ, ಶಹಾಪುರದಲ್ಲಿ 95 ಲಕ್ಷ 71,144 ರೂ. ಸೈಟನ್ನು 4 ಲಕ್ಷ 78 ಸಾವಿರ ಅಂದರೆ ಕೇವಲ ಶೇ 5 ಮೌಲ್ಯಕ್ಕೆ ಪಡೆದಿದ್ದು, ಬಸವಕಲ್ಯಾಣದಲ್ಲಿ ಹಾಗೇ ಮಾಡಿದ್ದಾರೆ. ಅಲ್ಲಿ ದರ ವಿಧಿಸಿಲ್ಲ. ಲಿಂಗಸುಗೂರಿನಲ್ಲಿ 46 ಲಕ್ಷ 99,200 ರೂ. ದನ್ನು 2 ಲಕ್ಷ 34ಕ್ಕೆ ಬರೆದುಕೊಂಡಿದ್ದಾರೆ. ತುಮಕೂರು ಪಾಲಿಕೆ ವ್ಯಾಪ್ತಿಯಲ್ಲಿ 1 ಕೋಟಿ 70 ಸಾವಿರದ ನಿವೇಶನವನ್ನು 8 ಲಕ್ಷ 50 ಸಾವಿರಕ್ಕೆ ಬರೆದುಕೊಂಡಿದ್ದಾರೆ ಎಂದು ದೂರಿದರು.
ಹುಬ್ಬಳ್ಳಿ- ಧಾರವಾಡದಲ್ಲಿ ನಿವೇಶನಕ್ಕೆ ದರ ಹಾಕಿಲ್ಲ ಎಂದು ಆಕ್ಷೇಪಿಸಿದರು. ನಾಗರಿಕ ಸೌಲಭ್ಯ ನಿವೇಶನಗಳನ್ನು ಕಾಂಗ್ರೆಸ್ ಭವನ ಟ್ರಸ್ಟಿಗೆ ಮಂಜೂರು ಮಾಡಲು ಅವಕಾಶ ಇಲ್ಲ ಎಂದು ಅಧಿಕಾರಿÀಗಳು ತಿಳಿಸಿದ್ದಾರೆ. ಆದರೆ, ಇದನ್ನು ಸಚಿವ ಸಂಪುಟದ ಮುಂದೆ ಮಂಡಿಸಿ, ಅಲ್ಲಿ ಅನುಮೋದನೆ ಕೊಟ್ಟು ಸದ್ರಿ ನಾಗರಿಕ ಸೌಲಭ್ಯ ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂದು ದಾಖಲೆಗಳನ್ನು ಓದಿ ಹೇಳಿದರು. ಇದು ಬೈರತಿ ಸುರೇಶ್ ಅವರು ಕೊಟ್ಟ ವರದಿ ಎಂದು ವಿವರಿಸಿದರು.
ಅಧಿಕಾರಿಗಳು ಇದರ ಮಂಜೂರಾತಿ ಕಾನೂನುಬಾಹಿರ ಎಂದು ತಿಳಿಸಿದ್ದರು. ಆದರೂ, ಸರಕಾರದ ಸಚಿವ ಸಂಪುಟದ ಸಭೆಯಲ್ಲಿ ಮಂಡಿಸಿ ವಿಶೇಷವಾದ ಅನುಮೋದನೆ ಕೊಟ್ಟಿದ್ದಾರೆ ಎಂದು ಟೀಕಿಸಿದರು. ಬೆಂಗಳೂರು ಗ್ರಾಮಾಂತರ, ತುಮಕೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಕಂದಾಯ ಇಲಾಖೆಯಲ್ಲೂ ಇದೇರೀತಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಕಂದಾಯ ಇಲಾಖೆಯಿಂದ 5 ನಿವೇಶನಗಳು, ಪುರಸಭೆ- ಸ್ಥಳೀಯ ಸಂಸ್ಥೆಗಳಿಂದ 26 ನಿವೇಶನಗಳನ್ನು ಭೂಕಬಳಿಕೆ ಮಾಡಿದೆ ಎಂದು ದೂರಿದರು.
ಇವೆಲ್ಲವೂ ಸರಕಾರಿ ದಾಖಲೆಗಳು, ನಾವ್ಯಾರೂ ಸೃಷ್ಟಿಸಿದ್ದಲ್ಲ. ಅವರಿಂದ ಪಡೆದ ದಾಖಲೆಗಳಿವು ಎಂದು ಪ್ರದರ್ಶಿಸಿದರು. ಕಾನೂನು ಇಲಾಖೆ ಇದನ್ನು ಪರಿಶೀಲಿಸಲಿ. ಈ ಎಲ್ಲ ನಿವೇಶನಗಳನ್ನು ಸರಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿಗಳು ಭೂಕಬಳಿಕೆ ಮಾಡಿ ಮುಡಾದಲ್ಲಿ ಸಿಕ್ಕಿ ಬಿದ್ದಿದ್ದರು. ಅವರು ಜೈಲಿಗೆ ಹೋಗುವುದು ಗ್ಯಾರಂಟಿ ಆದಾಗ ನಿವೇಶನಗಳನ್ನು ವಾಪಸ್ ಕೊಟ್ಟಿದ್ದರು. ಈ ಭೂಕಬಳಿಕೆಯಿಂದ ನೀವು ಜೈಲಿಗೆ ಹೋಗುವ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು. ಅದರಿಂದ ತಪ್ಪಿಸಿಕೊಳ್ಳಲು ಕೂಡಲೇ ನಿವೇಶನಗಳನ್ನು ವಾಪಸ್ ಕೊಡಿ ಎಂದು ಒತ್ತಾಯಿಸಿದರು. ವಾಪಸ್ ಕೊಡದೇ ಇದ್ದರೆ ಕೋರ್ಟ್ ಮೊರೆ ಹೋಗಲೂ ಸಿದ್ಧ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
ಬಿಜೆಪಿ, ಅನೇಕ ಕಡೆಗಳಲ್ಲಿ ಖಾಸಗಿಯಾಗಿ ಜಾಗ ಖರೀದಿಸಿ ಕಚೇರಿ ನಿರ್ಮಿಸಿದೆ. ಅದು ಸರಕಾರಿ ಭೂಮಿಯನ್ನು ತೆಗೆದುಕೊಂಡಿಲ್ಲ. ರಾಜಕೀಯ ಪಕ್ಷಗಳು ಒಂದು ನಿವೇಶನ ಪಡೆಯಲು ಅವಕಾಶ ಇದೆ. ಇವರು ಅಧಿಕಾರ ದುರುಪಯೋಗ ಪಡಿಸಿಕೊಂಡು ತಾಲ್ಲೂಕು, ಮಂಡಲಗಳಲ್ಲಿ, ಜಿಲ್ಲೆಗಳಲ್ಲಿ ಈ ರೀತಿ ಲೂಟಿ ಹೊಡೆದು ಸರಕಾರಿ ಜಮೀನುಗಳನ್ನು ಪಡೆದುದು ಸರಿಯಲ್ಲ. ಇದು ಕಾನೂನಿನ ದೊಡ್ಡ ಲೋಪ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದರ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಎಂದು ಪ್ರಕಟಿಸಿದರು.
ಎಸ್ಇಪಿ, ಟಿಎಸ್ಪಿ ವಿಚಾರದಲ್ಲಿ ಈ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ನಮ್ಮ ಹೋರಾಟ ನಡೆದಿದೆ. ಈ ಕಾಯ್ದೆಯನ್ನು ತಂದಿದ್ದು ಸಿದ್ದರಾಮಯ್ಯನವರೇ. ಇದೊಂದು ವಿಶೇಷ ಕಾರ್ಯಕ್ರಮ. ಹಣ ಪೋಲಾಗಬಾರದು. ಅನ್ಯ ಉದ್ದೇಶಕ್ಕೆ ಬಳಸಬಾರದೆಂದು ಕಾಯ್ದೆ ತಂದಿದ್ದರು. ನಮ್ಮ ಸರಕಾರ ಇದ್ದಾಗ 7 ಡಿ ತೆಗೆಯಲು ಮುಂದಾಗಿದ್ದೆವು. ಕಾಂಗ್ರೆಸ್ ಪಕ್ಷ 7 ಡಿ ತೆಗೆದು 7 ಸಿ ಕೆಳಗಡೆ ಹಣ ಅನ್ಯ ಉದ್ದೇಶ, ಅನ್ಯ ಇಲಾಖೆಗೆ ನೀಡುತ್ತಿದ್ದಾರೆ. 3 ವರ್ಷಗಳಲ್ಲಿ 39 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗಾಗಿ ಬಳಸಿದ್ದಾರೆ. ಪರಿಶಿಷ್ಟ ಜಾತಿ, ವರ್ಗಗಳಿಗೆ ಕಾಂಗ್ರೆಸ್ ಸರಕಾರ ದ್ರೋಹ, ಅನ್ಯಾಯ, ವಂಚನೆ ಮಾಡಿದೆ ಎಂದು ಟೀಕಿಸಿದರು.
ಈ ಕುರಿತು ಮೊನ್ನೆ ಕೂಡ ಪತ್ರ ಬರೆದಿದ್ದೇನೆ. ಈ ಬಾರಿಯಾದರೂ ಆ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದೆಂದು ಆಗ್ರಹ ಪಡಿಸಿದ್ದೇನೆ ಎಂದರು. ಬಜೆಟ್ ಸಭೆ ನಿನ್ನೆ ನಡೆದಿದ್ದು, ಪ್ರಿಯಾಂಕ್ ಖರ್ಗೆ ಸೇರಿ ಯಾರೂ ಇದರ ಕುರಿತು ಮಾತನಾಡಿಲ್ಲ. ಪ್ರಿಯಾಂಕ್ ಖರ್ಗೆ ಅವರಲ್ಲಿ ಡಾ. ಅಂಬೇಡ್ಕರರ ರಕ್ತ ಒಂದು ತೊಟ್ಟೂ ಇಲ್ಲ ಎಂದು ತಿಳಿಸಿದರು. ಅವರಿಗೆ ದಲಿತತ್ವವೇ ಗೊತ್ತಿಲ್ಲ. ದಲಿತರ ಹೆಸರಿನಲ್ಲಿ ಸಚಿವರಾಗಿದ್ದಾರೆ. ಅಪ್ಪನ ನೆರಳಿನಲ್ಲಿ ಮಂತ್ರಿಯಾಗಿದ್ದು, ಬೊಗಳೆ ಭಾಷಣ ಬಿಟ್ಟರೆ ಬೇರೇನೂ ಇಲ್ಲ ಎಂದರು.
ಕೆ.ಎಚ್.ಮುನಿಯಪ್ಪ, ತಿಮ್ಮಾಪುರ, ಡಾ.ಪರಮೇಶ್ವರ್, ಮಹದೇವಪ್ಪ- ಎಲ್ಲರೂ ಸೇರಿ ದಲಿತರಿಗೆ ವಂಚಿಸಿದ್ದಾರೆ. ದಲಿತರಿಗೆ ಅನ್ಯಾಯ ಆದರೂ ಮಾತನಾಡಲಾಗದ ಪರಿಸ್ಥಿತಿ ಸಚಿವರಿಗೆ ಇದೆ. ಇವರಿಗೆ ಅಧಿಕಾರ ಮುಖ್ಯವೇ ಹೊರತು ಸಮುದಾಯ ಮುಖ್ಯವಲ್ಲ ಎಂದು ದೂರಿದರು. ಸರಕಾರವು 2.84 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಯುವಜನರಿಗೆ ಅನ್ಯಾಯ ಆಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರವು ಅತಿ ಭ್ರಷ್ಟ ಸರಕಾರ ಎಂದು ನಾವು ಪದೇ ಪದೇ ಕೇಳಿದ್ದೇವೆ. ಅಭಿವೃದ್ಧಿ ಶೂನ್ಯ, ಜನರ ಸಮಸ್ಯೆಗಳಿಗೆ ಸ್ಪಂದಿಸದ, ಅಧಿಕಾರಕ್ಕಾಗಿ ಕಚ್ಚಾಟದ ವಿಷಯವನ್ನು ನಾವು ಜನರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


