ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಸತ್ತಿನಲ್ಲಿ ನಿರೀಕ್ಷೆಯಂತೆ ವಿರೋಧ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಕುರಿತು ಸಂಸತ್ತಿನಲ್ಲಿ ನಡೆದ ಚರ್ಚೆಗೆ ಅವರು ಪ್ರತಿಕ್ರಿಯಿಸಿದ ವೇಳೆ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡರು.
ನಾವು ಬಡವರಿಗೆ ಸುಳ್ಳು ಘೋಷಣೆಗಳನ್ನಲ್ಲ ನಿಜವಾದ ಅಭಿವೃದ್ಧಿಯನ್ನು ನೀಡಿದ್ದೇವೆ. ಬಡವರ ದುಃಖ, ಜನಸಾಮಾನ್ಯರ ಕಷ್ಟ, ಮಾಧ್ಯಮ ವರ್ಗದ ಕನಸುಗಳ ಬಗ್ಗೆ ಅರಿತುಕೊಳ್ಳಲು ನಿಜವಾದ ದೃಢ ನಿಶ್ಚಯವಿರಬೇಕು ಎಂದರು.
“ನಾವು 2025 ನೇ ವರ್ಷದಲ್ಲಿದ್ದೇವೆ. 21 ನೇ ಶತಮಾನದ 25% ಭಾಗ ಅಂತ್ಯವಾಗಿದೆ. ಸ್ವಾತಂತ್ರ್ಯದ ಬಳಿಕ ಏನು ಬದಲಾಗಿದೆ ಎಂಬುದನ್ನು ಸಮಯ ನಿರ್ಧರಿಸಲಿದೆ. ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಭವಿಷ್ಯದ 25 ವರ್ಷದ ವಿಕಸಿತ ಭಾರತದ ಕಲ್ಪನೆಯನ್ನು ತೆರೆದಿಟ್ಟಿದ್ದಾರೆ. ಅವರ ಭಾಷಣ ವಿಕಸಿತ ಭಾರತದ ಸಂಕಲ್ಪವನ್ನು ಗಟ್ಟಿಗೊಳಿಸಿದೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ 14 ನೇ ಬಾರಿಗೆ ಭಾಗವಹಿಸಿರುವುದು ನಮ್ಮ ಅದೃಷ್ಟ. ನಮ್ಮ ದೇಶದ ಜನರು ಸೇವೆ ಮಾಡಲು ನನಗೆ ಅವಕಾಶ ನೀಡಿದ್ದಾರೆ. ಅವರಿಗೆ ಧನ್ಯವಾದಗಳು” ಎಂದರು.
ಬಡವರ ದುಃಖ, ಜನಸಾಮಾನ್ಯರ ಕಷ್ಟ, ಮಧ್ಯಮ ವರ್ಗದ ಕನಸುಗಳ ಬಗ್ಗೆ ಅರಿತುಕೊಳ್ಳಲು ದೃಢ ನಿಶ್ಚಯವಿರಬೇಕು. ನಾವು ಸಂವಿಧಾನದ ಆಶಯದೊಂದಿಗೆ ಮುನ್ನಡೆಯುತ್ತೇವೆ, ನಾವು ವಿಷಮಯ ರಾಜಕೀಯವನ್ನು ಎಂದಿಗೂ ಮಾಡುವುದಿಲ್ಲ. ನಾವು ದೇಶದ ಏಕತೆಯನ್ನು ಸರ್ವೋಚ್ಛ ಸ್ಥಾನದಲ್ಲಿರಿಸುತ್ತೇವೆ. ಅಧಿಕಾರ ಯಾವಾಗ ಸೇವೆಯಾಗುತ್ತದೆಯೋ ಆಗ ರಾಷ್ಟ್ರದ ನಿರ್ಮಾಣವಾಗುತ್ತದೆ. ಅಧಿಕಾರವನ್ನು ಕುಟುಂಬದ ಪರಂಪರೆಯಾಗಿಸಿಕೊಂಡಾಗ, ಪ್ರಜಾಪ್ರಭುತ್ವ ಅಂತ್ಯವಾಗುತ್ತದೆ. ನಮಗೆ ಸಂವಿಧಾನದ ಮಹತ್ವದ ಬಗ್ಗೆ ಅರಿವಿದೆ, ಹೀಗಾಗಿ ಸಂವಿಧಾನದ ಬಗ್ಗೆ ಸಮರ್ಪಿತಗೊಂಡಿದ್ದೇವೆ. ಹೀಗಾಗಿ ಬಲಿಷ್ಠ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದರು.
ದೇಶದ ಅಭಿವೃದ್ಧಿಯ ನಾಗಾಲೋಟಕ್ಕೆ ವಿಪಕ್ಷಗಳ ಕೀಳು ರಾಜಕಾರಣ ಅಡ್ಡಿಯಾಗಬಾರದು. ತಮ್ಮ ರಾಜಕೀಯ ಲಾಭಕ್ಕಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನೂ ಬಲಿ ಕೊಡಲು ಸಿದ್ಧವಿರುವ ವಿಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಡವರ ಮನೆ ಮುಂದೆ ಫೋಟೋ ಸೆಷನ್ ಮಾಡುವ ನಾಯಕರಿಗೆ, ಸದನದಲ್ಲಿ ನಡೆಯುವ ಬಡವರ ಬಗೆಗಿನ ಚರ್ಚೆ ಬೇಸರ ತರಿಸುತ್ತದೆ. ನಾವು ಸಮಸ್ಯೆಯನ್ನು ಬಗೆಹರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಆದರೆ ಕೆಲವರು ಇದನ್ನು ಅಪಹಾಸ್ಯ ಮಾಡುತ್ತಾ ದೇಶದ ಜನರ ಭಾವನೆಗಳಿಗೆ ಧಕ್ಕೆ ತರುತ್ತಾರೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.