ಬೆಂಗಳೂರು: ಬಿಜೆಪಿ- ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸುವುದು ಮತ್ತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೊಸ ದಾಖಲೆ ಎಂದರೆ 28ಕ್ಕೆ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿಜೀ ಅವರ ಕೈಯನ್ನು ಬಲಪಡಿಸುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗುರಿಗೆ ಅನುಗುಣವಾಗಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅಭ್ಯರ್ಥಿಗಳ ಆಯ್ಕೆ ಯಾರೋ ಒಬ್ಬರ ತೀರ್ಮಾನ ಅಲ್ಲ. ಕೇಂದ್ರದ ವರಿಷ್ಠರೆಲ್ಲರೂ ಚರ್ಚೆ ಮಾಡಿ, ಚಿಂತನೆ ಮಾಡಿ ರಾಜ್ಯದ ಅಭಿವೃದ್ಧಿ, ರಾಜ್ಯದಲ್ಲಿ ಪಕ್ಷಕ್ಕೆ ಹೆಚ್ಚು ಶಕ್ತಿ ತುಂಬುವ ನಿಟ್ಟಿನಲ್ಲಿ ಮತ್ತು ನಮ್ಮ ಗುರಿ ಮುಟ್ಟುವ ಸಲುವಾಗಿ ಒಳ್ಳೆಯ ನಿರ್ಧಾರವನ್ನು ಘೋಷಿಸಿದ್ದಾರೆ ಎಂದು ಹೇಳಿದರು.
ಈ ಚುನಾವಣೆಯು ಕಾರ್ಯಕರ್ತರಿಗೆ ಹೆಚ್ಚು ಉತ್ಸಾಹ ತುಂಬಬೇಕಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ಪಡೆಯಬೇಕು ಎಂಬ ಆಶಯದೊಂದಿಗೆ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಎಲ್ಲ ನಾಯಕರು ಒಗ್ಗಟ್ಟಾಗಿ, ಒಂದಾಗಿ ಶ್ರಮಿಸಲಿದ್ದಾರೆ. ಕಾರ್ಯಕರ್ತರ ಶ್ರಮ, ಮೋದಿಜೀ ಪರ ವಾತಾವರಣ, ಮೋದಿಜೀ ಜನಪ್ರಿಯತೆಯನ್ನು ಮತವಾಗಿ ಪರಿವರ್ತಿಸುವ ಕಾರ್ಯಕರ್ತರ ಶಕ್ತಿಯ ಮೇಲೆ ವಿಶ್ವಾಸವಿದೆ ಎಂದರು.
ವೀಕ್ಷಕರು ಜಿಲ್ಲೆಯ ಪ್ರಮುಖರು ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆದು ನಂತರ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿ ಪ್ರತಿಯೊಂದು ಕ್ಷೇತ್ರಕ್ಕೆ 2-3 ಹೆಸರನ್ನು ದೆಹಲಿಗೆ ಕಳಿಸಲಾಗಿತ್ತು. ದೆಹಲಿಯಲ್ಲಿ ವರಿಷ್ಠರ ಸಮಕ್ಷಮ ಚರ್ಚಿಸಿ ಅಂತಿಮವಾಗಿ 20 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ವಿವರ ನೀಡಿದರು.
ಹೊಸ ಮುಖಗಳಿಗೆ ಅವಕಾಶ ಲಭಿಸಿದೆ. ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡುವ ಕೆಲಸವೂ ಆಗಿದೆ. ಮೈಸೂರಿನ ರಾಜಮನೆತನದ ಬಗ್ಗೆ ವಿಶೇಷವಾಗಿ ಮೈಸೂರು ಭಾಗದ ಜನತೆಗೆ ವಿಶೇಷ ಗೌರವ, ಪ್ರೀತಿ ಇದೆ. ಮೈಸೂರು ಯದುವಂಶ, ಪ್ರಜಾಸೇವೆಯಲ್ಲಿ ವಿಶ್ವಾದ್ಯಂತ ಹೆಸರುವಾಸಿ. ಮೈಸೂರು- ಮಡಿಕೇರಿ ಲೋಕಸಭಾ ಕ್ಷೇತ್ರಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬಿಜೆಪಿ ಟಿಕೆಟ್ ನೀಡಲು ನಮ್ಮ ವರಿಷ್ಠರು ತೀರ್ಮಾನ ಮಾಡಿದ್ದು, ರಾಜ್ಯದ ವತಿಯಿಂದ ಅಭಿನಂದನೆಗಳು ಎಂದರು.
ಬಿಜೆಪಿ- ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದು, ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಚ್ಚರಿಯ ಆಯ್ಕೆ ಮಾಡಿದೆ. ಖ್ಯಾತ ಹೃದಯರೋಗ ತಜ್ಞರಾದ ಡಾ. ಮಂಜುನಾಥ್ ಅವರನ್ನು ಬಿಜೆಪಿ ಹುರಿಯಾಳಾಗಿ ಆಯ್ಕೆ ಮಾಡಿದೆ. ಇದು ನಮ್ಮೆಲ್ಲರಿಗೆ ಸಂತೋಷ ತಂದು ಕೊಟ್ಟಿದೆ ಎಂದು ವಿವರಿಸಿದರು.
2024ರ ಲೋಕಸಭಾ ಚುನಾವಣೆಯ ಕ್ಷಣಗಣನೆ ಆರಂಭಗೊಂಡಿದೆ. ಕೇಂದ್ರದ ವರಿಷ್ಠರು 20 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಕೆಲವು ಲೋಕಸಭಾ ಸದಸ್ಯರಿಗೆ ಟಿಕೆಟ್ ನಿರಾಕರಿಸಿದ್ದು, ಹೊಸ ಮುಖಗಳಿಗೆ ಅವಕಾಶ ಕೊಟ್ಟಿದ್ದಾರೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.