ಬೆಂಗಳೂರು: ಕೇಂದ್ರ ಮತ್ತು ಕರ್ನಾಟಕದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರಕಾರ ಬೇಕು. ಅಭಿವೃದ್ಧಿಗೆ ಅದು ಪೂರಕ ಎಂಬ ಚಿಂತನೆ ಜನರಲ್ಲಿದೆ. ಅದೇ ಉತ್ಸಾಹವೂ ಕಾರ್ಯಕರ್ತರದು. ಮಾಧ್ಯಮ ವಿಶ್ಲೇಷಕರೂ ಇದನ್ನೇ ತಿಳಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾವು ಗೋವಾ, ಮಣಿಪುರ, ಉತ್ತರಾಖಂಡ, ಉತ್ತರ ಪ್ರದೇಶಗಳಲ್ಲಿ ಗೆಲುವು ಸಾಧಿಸಿದ ಮಾದರಿಯಲ್ಲಿ ಇಲ್ಲಿಯೂ ಬಿಜೆಪಿ ಗೆಲ್ಲಲಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳಲ್ಲೂ ಬಿಜೆಪಿ ಮತ್ತೆ ಅಧಿಕಾರ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಡವರು, ರೈತರು, ಮಹಿಳೆಯರು, ಎಸ್ಸಿ, ಎಸ್ಟಿ ಸೇರಿ ಸರ್ವರೂ ನರೇಂದ್ರ ಮೋದಿಜಿ ಅವರ ಅಭಿವೃದ್ಧಿ ಕಾರ್ಯಗಳಿಂದ ಸಂತುಷ್ಟರಾಗಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 1.28 ಲಕ್ಷಕ್ಕೂ ಹೆಚ್ಚು ಜನರು ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರಯೋಜನ ಪಡೆಯುತ್ತಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನರು ಸಾಯಿಲ್ ಕಾರ್ಡ್ ಪಡೆದಿದ್ದಾರೆ. ನಳ್ಳಿ ನೀರು, ಆಯುಷ್ಮಾನ್ ಯೋಜನೆ ಸೇರಿ ಅನೇಕ ಯೋಜನೆಗಳ ಪ್ರಯೋಜನವನ್ನು ಜನತೆ ಪಡೆಯುತ್ತಿದ್ದಾರೆ. ಇದು ಬಿಜೆಪಿ ಗೆಲುವಿಗೆ ಪೂರಕ ಎಂದು ವಿವರಿಸಿದರು.
ಎಸ್ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಶೇಷ ಯೋಜನೆಗಳನ್ನು ಜಾರಿಗೊಳಿಸಿವೆ. ರಾಷ್ಟ್ರಪತಿ ಸ್ಥಾನಕ್ಕೆ ಗೌರವಾನ್ವಿತ ರಾಮನಾಥ ಕೋವಿಂದ್, ದ್ರೌಪದಿ ಮುರ್ಮು ಅವರ ಆಯ್ಕೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಂಚ ಕ್ಷೇತ್ರಗಳ ಅಭಿವೃದ್ಧಿ, ಆದಿವಾಸಿ ಗೌರವ ದಿವಸ ಘೋಷಣೆ ಸೇರಿ ಅನೇಕ ಕಲ್ಯಾಣ ಯೋಜನೆಗಳನ್ನು ಬಿಜೆಪಿಯು ಮೋದಿಜಿ ಅವರ ನೇತೃತ್ವದಲ್ಲಿ ಜಾರಿಗೊಳಿಸಿದೆ ಎಂದು ತಿಳಿಸಿದರು.
ಆದಿವಾಸಿಗಳಿಗೆ ಗೌರವ ಕೊಡಲು ನೀವೇನು ಮಾಡಿದ್ದೀರಿ? ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗಾಗಿ ನೀವೇನು ಮಾಡಿದಿರಿ ಎಂಬ ಪ್ರಶ್ನೆಗಳಿಗೆ ಡಿ.ಕೆ.ಶಿವಕುಮಾರ್ ಅವರು ಉತ್ತರ ನೀಡಲಿ ಎಂದು ಆಗ್ರಹಿಸಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಆದಿವಾಸಿಗಳಿಗಾಗಿ ಸಚಿವಾಲಯ ರಚಿಸಿದ್ದರು. ನೀವು ಅದನ್ನೂ ಮಾಡಿಲ್ಲ ಎಂದು ಟೀಕಿಸಿದರು. ನೀವು ಪಂಚತೀರ್ಥಗಳನ್ನು ಯಾಕೆ ಅಭಿವೃದ್ಧಿ ಪಡಿಸಿಲ್ಲ ಎಂದು ಸವಾಲೆಸೆದರು. ಆದಿವಾಸಿಗಳು ಮತ್ತು ಎಸ್ಸಿ ಸಮಾಜವನ್ನು ಕಾಂಗ್ರೆಸ್ ಪಕ್ಷವು ಮತಬ್ಯಾಂಕ್ ಆಗಿ ಬಳಸಿಕೊಂಡಿತ್ತು ಎಂದು ತಿಳಿಸಿದರು.
ಮೀಸಲಾತಿ ಪ್ರಮಾಣ ಹೆಚ್ಚಿಸಿದ ಕರ್ನಾಟಕದ ಬಿಜೆಪಿ ಸರಕಾರವನ್ನು ಅವರು ಅಭಿನಂದಿಸಿದರು. ನಾವು ಹೇಳಿದ್ದನ್ನು ಮಾಡುತ್ತಿರುವುದಕ್ಕೆ ಇದು ಸಾಕ್ಷಿ ಎಂದು ಮೆಚ್ಚುಗೆ ಸೂಚಿಸಿದರು.
ಭಾರತ್ ಜೋಡೋ ಯಾತ್ರೆ ಮಾಡಿದ ರಾಹುಲ್ ಗಾಂಧಿಯವರಿಗೆ ಕರ್ನಾಟಕದ ಬಗ್ಗೆ ಏನೂ ತಿಳಿದಿಲ್ಲ. ಅವರದು ಮಾರ್ನಿಂಗ್ ವಾಕ್ ಮತ್ತು ಇವಿನಿಂಗ್ ವಾಕ್ ಎಂದು ಟೀಕಿಸಿದರು. ಇದು ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ರನ್ನು ಜೋಡಿಸುವ ಯಾತ್ರೆಯಷ್ಟೇ ಎಂದು ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಿ ಭೂಹಗರಣ, ಪಿಎಸ್ಐ ನೇಮಕಾತಿ ಹಗರಣ, ಶಿಕ್ಷಕರ ನೇಮಕಾತಿ ಹಗರಣಗಳು ನಡೆದಿದ್ದವು ಎಂದು ತಿಳಿಸಿದರು. ಮುಖಂಡ ಶ್ರೀರಾಮುಲು ಅವರ ವಿರುದ್ಧ ಸಿದ್ದರಾಮಯ್ಯರ ಪದ ಬಳಕೆಯನ್ನು ಅವರು ಖಂಡಿಸಿದರು. ಇದು ಕಾಂಗ್ರೆಸ್ ಚರಿತ್ರೆ ಎಂದು ಆಕ್ಷೇಪಿಸಿದರು.
ಹುಬ್ಬಳ್ಳಿ – ಧಾರವಾಡ ಸೇರಿ ಸುತ್ತಲಿನ ಜಿಲ್ಲೆಗಳಲ್ಲಿ ಅತ್ಯುತ್ತಮ ಅಭಿವೃದ್ಧಿ ಕಾರ್ಯಗಳು ನಡೆದಿವೆ; ನಡೆಯಲಿವೆ ಎಂದು ಅವರು ತಿಳಿಸಿದರು. ಇದು ಡಬಲ್ ಎಂಜಿನ್ ಸರಕಾರದ ಕುರಿತ ಜನಮತÀಕ್ಕೆ ಪ್ರಮುಖ ಕಾರಣ ಆಗಲಿದೆ ಎಂದರು.
ಯತ್ನಾಳ್ ನಮ್ಮ ನೇತಾರರಲ್ಲ; ಅವರು ಕೋರ್ ಕಮಿಟಿಯಲ್ಲೂ ಇಲ್ಲ. ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಹೇಗೆ ಕಾಂಗ್ರೆಸ್ ಮುಖಂಡರಲ್ಲವೋ ಅದೇರೀತಿ ಇವರೂ ನಮ್ಮ ನಾಯಕರಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ರಾಹುಲ್ ರಾಜ್ ದೂರದೃಷ್ಟಿ ಇರುವ ನೇತಾರರೇ ಅಲ್ಲ. ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷ ಸಮಾಪ್ತಿಯತ್ತ ಮುನ್ನಡೆದಿದೆ. ಬಿಜೆಪಿ ಹಾಗಲ್ಲ ಎಂದು ತಿಳಿಸಿದರು. ನಮ್ಮಲ್ಲಿ ಸಾಮೂಹಿಕ ನಾಯಕತ್ವ ಇದೆ ಎಂದರು.
ಸಚಿವ ಸಂಪುಟ ವಿಸ್ತರಣೆಯು ರಾಜ್ಯದ ಮುಖ್ಯಮಂತ್ರಿಯವರ ಪರಮಾಧಿಕಾರಕ್ಕೆ ಒಳಪಟ್ಟಿದೆ. ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರವನ್ನು ಅವರು ತೆಗೆದುಕೊಳ್ಳಲಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ವಿರೋಧ ಪಕ್ಷದವರು ಬೊಮ್ಮಾಯಿಯವರ ವಿರುದ್ಧ ಆರೋಪ ಮಾಡುತ್ತಿರುವುದು ಕರ್ನಾಟಕದ ಜನತೆಗೆ ಅವಮಾನ ಮಾಡಿದಂತೆ ಎಂದರು.
ಕಾರ್ಯಕರ್ತರು ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ. ಈ ಸಂಕಲ್ಪವು ಜನಸಂಕಲ್ಪ ಸಭೆಗಳಲ್ಲಿ ವ್ಯಕ್ತವಾಗಿದೆ. ಜನಬೆಂಬಲವೂ ಕಾಣುತ್ತಿದೆ. ಮೂರು ತಂಡಗಳಾಗಿ ಜನಸಂಕಲ್ಪ ಯಾತ್ರೆ ನಡೆಯುತ್ತಿದೆ ಎಂದು ವಿವರಿಸಿದರು.
ಒಂದು ಯಾತ್ರೆ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಮತ್ತು ಇನ್ನೊಂದು ಯಾತ್ರೆಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ನಾಯಕ ಯಡಿಯೂರಪ್ಪ ಅವರ ಮುಖಂಡತ್ವದಲ್ಲಿ ನಡೆಯುತ್ತಿದೆ. ಪಕ್ಷದ ಎಲ್ಲ ಮುಖಂಡರು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.