ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯ ಜನಸ್ಪಂದನಾ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸಂಪುಟ ಸಚಿವರು ಸೇರಿದಂತೆ ಹಲವು ಗಣ್ಯರು ಇದರಲ್ಲಿ ಭಾಗಿಯಾಗಿದ್ದಾರೆ.
ಬಿಜೆಪಿ ಸರ್ಕಾರದ 3 ವರ್ಷದ ಸಾಧನೆ ಹಾಗೂ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಒಂದು ವರ್ಷ ನಡೆಸಿದ ಆಡಳಿತ ಬಗ್ಗೆ ರಾಜ್ಯದ ಜನತೆಯ ಗಮನ ಸೆಳೆಯುವ ಕಾರ್ಯಕ್ರಮ ಇದಾಗಿದೆ.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ನೇರಾನೇರವಾಗಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ವಿರುದ್ಧ ಹರಿದಾಯ್ದರು.
“ಜನಸ್ಪಂದನೆಯನ್ನು ಇಡೀ ಕರ್ನಾಟಕ ತುಂಬ ತೆಗೆದುಕೊಂಡು ಹೋಗಿ ಮತ್ತೊಮ್ಮೆ ಕಮಲವನ್ನು ಅರಳಿಸುವ ಪ್ರಯತ್ನ ಮಾಡುತ್ತೇವೆ. ತಾಕತ್ತಿದ್ದರೆ, ನಿಲ್ಲಿಸುವ, ತಡೆಯುವ ಪ್ರಯತ್ನ ಮಾಡಿ” ಎಂದು ಕಾಂಗ್ರೆಸ್ ನಾಯಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.
“ಸಿದ್ದರಾಮಯ್ಯ ಆಡಳಿತದಲ್ಲಿ ಎಷ್ಟು ಹಗರಣಗಳು ಕೇಳಿಬಂದಿದ್ದವು, ಎಷ್ಟು ಅಧಿಕಾರಿಗಳು ಜೀವ ಕಳೆದುಕೊಂಡಿದ್ದರು, ಸಿದ್ದರಾಮಯ್ಯ ಅವಧಿಯಲ್ಲಿಯೇ ಹೆಚ್ಚು ಕೊಲೆಗಳು ಆಗಿವೆ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತೀರಿ ಎಂದು ಸಾಬೀತಾಗಿದೆ. ಮರಳು ಮಾಫಿಯಾ, ಕೊಳವೆ ಬಾವಿ ಹಗರಣ, ಅರ್ಕಾವತಿ ರೀಡೂ ಹಗರಣ, ಎಸ್ಸಿ-ಎಸ್ಟಿ ಹಾಸ್ಟೆಲ್ ಬೆಡ್ ಹಗರಣ, ಲ್ಯಾಪ್ಟಾಪ್ ಹಗರಣ, ಹೀಗೆ ನಂತಹ ಸಾಲು ಸಾಲು ಹಗರಣಗಳು ಕಾಂಗ್ರೆಸ್ ಅವಧಿಯಲ್ಲಿ ಆಗಿವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 100% ಭ್ರಷ್ಟಾಚಾರ ನಡೆದಿದೆ” ಎಂದರು.
“2019ರಲ್ಲೇ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಬೇಕಿತ್ತು. ಆದರೆ ಕಾಂಗ್ರೆಸ್ನ ಹುನ್ನಾರದಿಂದ ಅದು ಕೈತಪ್ಪಿತ್ತು. . ನಾವು ಸಮರ್ಥವಾಗಿ ಕೊವಿಡ್ ಎದುರಿಸಿದ್ದೇವೆ. ಜನರಿಗೆ ಉಚಿತವಾಗಿ ಕೊವಿಡ್ ಲಸಿಕೆ ನೀಡಿದ್ದೇವೆ. ಕಾಂಗ್ರೆಸ್ನವರು ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಾರೆ. ಅನ್ನಭಾಗ್ಯ ಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳ್ತಾರೆ. ಚೀಲದಲ್ಲಿದ್ದ ಅಕ್ಕಿ ಮೋದಿದು, ಚೀಲ ಮಾತ್ರ ನಿಮ್ಮದು” ಎಂದಿದ್ದಾರೆ.
ಜನರ ವಿಶ್ವಾಸ ಮತ್ತು ಬೆಂಬಲಕ್ಕೆ ಚಿರಋಣಿ ಎಂದರು. 2019ರಲ್ಲಿ ಕಾಂಗ್ರೆಸ್ನ ಕುತಂತ್ರ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿಯಿಂದ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲಾಯಿತು. ಜೆಡಿಎಸ್ ಜೊತೆ ಅನೈತಿಕವಾಗಿ ಕೈ ಜೋಡಿಸಿದರು. ಕೇವಲ ಅಧಿಕಾರಕ್ಕಾಗಿ ಏನೆಲ್ಲ ಮಾಡಲು ಸಿದ್ಧ ಎಂಬುದು ಆಗ ಗೊತ್ತಾಯಿತು. 17 ಜನ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆ ಎದುರಿಸಿದರು. ಅವರೆಲ್ಲರೂ ವೀರರು ಎಂದರು.
ಯಡಿಯೂರಪ್ಪ ಅವರ ನಾಯಕತ್ವವು ಸಮರ್ಥವಾಗಿ ಕೋವಿಡ್ ಎದುರಿಸಿದೆ. ಜನರ ಪ್ರಾಣ ಉಳಿಸುವ ಕೆಲಸ ಮಾಡಿದೆ. ನರೇಂದ್ರ ಮೋದಿಜಿ ಅವರು 1 ಲಕ್ಷ ಕೋಟಿಗಿಂತ ಹೆಚ್ಚು ಅನುದಾನ ನೀಡಿದ್ದಾರೆ. 130 ಕೋಟಿಗೂ ಹೆಚ್ಚು ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ಕೊಡಲಾಗಿದೆ. ಕಾಂಗ್ರೆಸ್ ಮಾತಿನಲ್ಲಿ ಮಾತ್ರ ಜನಸೇವೆ ಮಾಡುತ್ತದೆ. ಮೋದಿಯವರು ಕೊಟ್ಟ ಅಕ್ಕಿಯನ್ನು ತಮ್ಮ ಪಕ್ಷದ ಸರಕಾರದ ಹೆಸರಿನಲ್ಲಿ ಸಿದ್ದರಾಮಯ್ಯ ಕೊಟ್ಟಿದ್ದಾರೆ ಎಂದು ಟೀಕಿಸಿದರು.
ಅನ್ನಭಾಗ್ಯದ ಅವ್ಯವಹಾರ ತನಿಖೆ ಮಾಡುತ್ತಿದ್ದ ಅಧಿಕಾರಿಯ ಸಂಶಯಾಸ್ಪದ ಸಾವು ಆಗಿದೆ. ಮರಳಿನಲ್ಲೂ ಅವ್ಯವಹಾರ ನಡೆಯಿತು. 36 ಸಾವಿರ ಬೋರ್ವೆಲ್ ವಿಚಾರ, ಎಸ್ಸಿ ಎಸ್ಟಿ ತಲೆದಿಂಬು, ಹಾಸಿಗೆ, ಬಿಡಿಎ ನಿವೇಶನ, ಲ್ಯಾಪ್ಟಾಪ್ ನೀಡಿಕೆಯಲ್ಲೂ ಹಗರಣಗಳು ಆಗಿವೆ. ಕಾಂಗ್ರೆಸ್ನದು ನಿರಂತರ ಭ್ರಷ್ಟಾಚಾರದ ಸರಕಾರ ಎಂದು ಆರೋಪಿಸಿದರು.
ಪೊಲೀಸ್ ನೇಮಕಾತಿ ವಿಚಾರದಲ್ಲೂ ಹಗರಣ ನಡೆದಿದ್ದು ಕ್ರಮ ತೆಗೆದುಕೊಂಡಿಲ್ಲ. ಶಿಕ್ಷಕರ ನೇಮಕದಲ್ಲೂ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ದುಷ್ಟ ನಾಟಕ ಇನ್ನು ಮುಂದೆ ಕರ್ನಾಟಕದಲ್ಲಿ ನಡೆಯದು ಎಂಬ ಸಂಕಲ್ಪವನ್ನು ಜನರು ಮಾಡಿದ್ದಾರೆ ಎಂದು ನುಡಿದರು.
ರೈತರ ಮಕ್ಕಳಿಗೆ ವಿದ್ಯಾನಿಧಿ ಕೊಡಲಾಗುತ್ತಿದೆ. 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಗುತ್ತಿದೆ. 21ನೇ ಶತಮಾನ ಜ್ಞಾನದ ಶತಮಾನ ಆಗಿದೆ. ಕೃಷಿಗೆ ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದೇವೆ. ಹಾಲು ಉತ್ಪಾದಕರಿಗೆ ಬ್ಯಾಂಕ್ ತೆರೆಯುತ್ತಿದ್ದೇವೆ. ಸಮಾಜ ಕಲ್ಯಾಣದಲ್ಲಿ ಹಾಸ್ಟೆಲ್ಗಳನ್ನು ತೆರೆದಿದ್ದು, ಸ್ಕಾಲರ್ಶಿಪ್ ಕೊಡಲಾಗುತ್ತಿದೆ. ಎಸ್ಟಿ, ಎಸ್ಸಿಗಳಿಗೆ ಉಚಿತವಾಗಿ 75 ಯೂನಿಟ್ ವಿದ್ಯುತ್ ಕೊಡಲಾಗುತ್ತಿದೆ ಎಂದು ವಿವರ ನೀಡಿದರು.
ಸಮಾಜದ ಎಲ್ಲ ವರ್ಗದ ಸಾಮಥ್ರ್ಯ ಹೆಚ್ಚಳ, ನೀರಾವರಿಗೆ ಆದ್ಯತೆ ಕೊಡಲಾಗಿದೆ. ಎತ್ತಿನಹೊಳೆ ಯೋಜನೆ ನಾವೇ ಆರಂಭಿಸಿದ್ದೇವೆ. 3 ಸಾವಿರ ಕೋಟಿಯನ್ನು ನೀಡಿ, ಇದೇ ವರ್ಷ ಇಲ್ಲಿಗೆ ಎತ್ತಿನಹೊಳೆ ನೀರನ್ನು ಹರಿಸಲಿದ್ದೇವೆ. ಕೋಲಾರ, ಚಿಕ್ಕಬಳ್ಳಾಪುರಕ್ಕೆ ಕೈಗಾರಿಕಾ ಟೌನ್ಶಿಪ್, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿಯನ್ನು ಸೆಟಲೈಟ್ ಟೌನ್ ಆಗಿ ಅಭಿವೃದ್ಧಿ ಮಾಡಲಿದ್ದೇವೆ ಎಂದು ತಿಳಿಸಿದರು.
ಹೊಸ ಶಿಕ್ಷಣ ನೀತಿ, ಕೈಗಾರಿಕಾ ನೀತಿ, ಉದ್ಯೋಗ ನೀಡಿಕೆ ನೀತಿ ನಮ್ಮದು. ಸರ್ವತೋಮುಖ ಅಭಿವೃದ್ಧಿಗೆ ಬದ್ಧತೆ ನಮ್ಮದು. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದ ಅವರು, ಅಧಿಕಾರ ಪಡೆಯುವ ಕಾಂಗ್ರೆಸ್ ಕನಸು ಕೇವಲ ಕನಸಾಗಿಯೇ ಉಳಿಯಲಿದೆ. ಭ್ರಷ್ಟ ಕಾಂಗ್ರೆಸ್ಗೆ ಮತ್ತೆ ಅವಕಾಶ ಇಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಜನಶಕ್ತಿ ಇದನ್ನು ತೀರ್ಮಾನ ಮಾಡಲಿದೆ. ಭ್ರಷ್ಟ ಹಣ ಪ್ರಯೋಜನಕ್ಕೆ ಬರುವುದಿಲ್ಲ. ನಿಮ್ಮ ಬಂಡವಾಳ ಪ್ರಯೋಜನ ಪಡೆಯದು. ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ಹಗರಣಗಳನ್ನು ಜನರ ಮುಂದಿಡುತ್ತೇವೆ ಎಂದು ಎಚ್ಚರಿಸಿದರು.
2023ರಲ್ಲಿ ಮತ್ತೆ ಕಮಲ ಅರಳಲಿದೆ. ಸಮೃದ್ಧ ನಾಡಿನ ಕನಸು ನನಸಾಗಲಿದೆ ಎಂದರು. ಡಬಲ್ ಎಂಜಿನ್ ಸರಕಾರದ ಲಾಭ ಜನರಿಗೆ ಸಿಗಲಿದೆ ಎಂದು ವಿಶ್ವಾಸದಿಂದ ನುಡಿದರು. ಜನಸ್ಪಂದನೆ ವಿಜಯೋತ್ಸವದ ಮೂಲಕ ಕೊನೆಯಾಗಲಿದೆ ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಧ್ವಜ ಅರಳುವ ಸಂದೇಶವನ್ನು ಈ ಸಮಾವೇಶ ನೀಡಿದೆ ಎಂದರು. ಈ ಸಮಾವೇಶ ಯಶಸ್ಸಿಗೆ ಶ್ರಮಿಸಿದ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಮತ್ತು ಕಾರ್ಯಕರ್ತರನ್ನು ಅವರು ಅಭಿನಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.