ಬೆಂಗಳೂರು: ಪಂಚಕ್ಷೇತ್ರಗಳ ಅಭಿವೃದ್ಧಿ ಮೂಲಕ ಪ್ರಧಾನಿಗಳಾದ ನರೇಂದ್ರ ಮೋದಿಯವರು ಡಾ. ಅಂಬೇಡ್ಕರ್ ಅವರಿಗೆ ನೈಜ ಗೌರವ ಸಲ್ಲಿಸಿದ್ದಾರೆ ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆ ಸಚಿವರಾದ ಗೋವಿಂದ ಕಾರಜೋಳ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಎಸ್.ಸಿ. (ಪರಿಶಿಷ್ಟ ಜಾತಿ) ಮೋರ್ಚಾ ವತಿಯಿಂದ ಇಂದು ಬೆಳಿಗ್ಗೆ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ನಡೆದ “ಸಂವಿಧಾನ ಗೌರವ ಅಭಿಯಾನ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇವತ್ತು ಇಡೀ ದೇಶದ ಉದ್ದಗಲಕ್ಕೆ ಡಾ. ಅಂಬೇಡ್ಕರ್ ಅವರ ಸಂವಿಧಾನ ಸಮರ್ಪಣೆ ದಿನಾಚರಣೆ ನಡೆಯುತ್ತಿದ್ದು, ಡಾ. ಅಂಬೇಡ್ಕರ್ ಅವರ ಅತ್ಯಮೂಲ್ಯ ಕಾರ್ಯವನ್ನು ನೆನಪಿಸಿಕೊಳ್ಳಲಾಗುತ್ತಿದೆ. ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಡಾ. ಅಂಬೇಡ್ಕರರ ಹುಟ್ಟಿ ಬೆಳೆದ ಮನೆ, ವಾಸಿಸಿದ್ದ ನಿವಾಸ, ಅವರ ಕಾರ್ಯಾಲಯ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೊರದೇಶದಲ್ಲಿ ವಾಸವಿದ್ದ ಮನೆಯನ್ನೂ ಖರೀದಿಸಿ ಅಭಿವೃದ್ಧಿ ಪಡಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಅವರ ಸಮಾಧಿ ಸ್ಥಳವನ್ನೂ ಅಭಿವೃದ್ಧಿ ಪಡಿಸಿದ್ದಾರೆ ಎಂದರು.
ದೇಶದ ಉದ್ದಗಲಕ್ಕೂ ದಲಿತರು ವಿದ್ಯಾವಂತರಾಗುತ್ತಿದ್ದಾರೆ. 10 ವರ್ಷಗಳಲ್ಲಿ ಅಸ್ಪøಶ್ಯತೆ ಆಚರಣೆ ದೂರವಾಗಬೇಕು. ದೀನದಲಿತರ ಕಲ್ಯಾಣ ಆಗಬೇಕೆಂಬ ಆಶಯ ಡಾ. ಅಂಬೇಡ್ಕರ್ ಅವರದಾಗಿತ್ತು. ದೀನದಲಿತರು ಸ್ವಾವಲಂಬಿ ಆಗಬೇಕೆಂಬ ಚಿಂತನೆ ಅವರಲ್ಲಿತ್ತು. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಕರೆ ನೀಡಿದ್ದರು. ದೀನದಲಿತರು ವಿದ್ಯಾವಂತರಾಗುತ್ತಿದ್ದಂತೆ ಕಾಂಗ್ರೆಸ್ನಿಂದ ದೂರವಾಗುತ್ತಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಇನ್ನು ಮೂರು ವರ್ಷ ಕೂಡ ಇರುವುದಿಲ್ಲ. ದೇಶದಲ್ಲಿ ಶೇ 90ರಷ್ಟು ಕಾಂಗ್ರೆಸ್ ಮುಕ್ತಾಯವಾಗಿದೆ. ಇನ್ನೊಂದು 10 ಶೇಕಡಾ ಮಾತ್ರ ಉಳಿದಿದೆ. ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ಪಕ್ಷದ ಅಗತ್ಯವಿಲ್ಲ ಎಂದು ಸ್ವತಃ ಮಹತ್ಮ ಗಾಂಧಿಯವರು ತಮ್ಮ ಪತ್ರಿಕೆಯಲ್ಲಿ ಅಭಿಪ್ರಾಯಪಟ್ಟಿದ್ದರು. ಆ ಪಕ್ಷ ವಿಸರ್ಜನೆಗೆ ಸಲಹೆ ನೀಡಿದ್ದರು. ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ರಚಿಸಿದ ಸಂಘಟನೆಯಲ್ಲಿ ಕಳ್ಳಕಾಕರು ಸೇರಿ ಸಂಘಟನೆ ಹೆಸರು ಕೆಡದಿರಲಿ ಎಂದು ಅವರು ತಿಳಿಸಿದ್ದರು ಎಂದರು.
ಇನ್ನು ಮುಂದೆ ಕಾಂಗ್ರೆಸ್ನ ಮೋಸದಾಟ ನಡೆಯದು. ದೀನದಲಿತರು, ಬಡವರು ವಿದ್ಯಾವಂತರಾಗಿದ್ದಾರೆ. ದೇಶದ ದೀನದಲಿತರು ಕಾಂಗ್ರೆಸ್ನ ಒತ್ತೆಯಾಳುಗಳೆಂದು ತಿಳಿದುಕೊಂಡಿದ್ದಾರೆ. ಅಲ್ಪಸಂಖ್ಯಾತರು ಕಾಂಗ್ರೆಸ್ನ ಗುಲಾಮರೆಂದು ಭಾವಿಸಿದ್ದಾರೆ. ಆ ಕಾಲ ಹೋಗಿದೆ ಎಂದು ತಿಳಿಸಿದರು.
ದೇಶವನ್ನು 60 ವರ್ಷ ಆಡಳಿತ ಮಾಡಿದವರಿಗೆ ಡಾ. ಅಂಬೇಡ್ಕರ್ ಅವರ ನೆನಪೂ ಇರಲಿಲ್ಲ. ದೇಶದ ದೀನದಲಿತರನ್ನು ಮತಬ್ಯಾಂಕ್ ಅಗಿ ಉಪಯೋಗ ಮಾಡಿಕೊಂಡರು. ಅಲ್ಪಸಂಖ್ಯಾತರನ್ನೂ ಮತ ಬ್ಯಾಂಕ್ ಆಗಿ ಬಳಸಿಕೊಂಡರು. ಜಾತಿ ಜಾತಿಯ ಮಧ್ಯೆ ಹಾಗೂ ಧರ್ಮಗಳ ನಡುವೆ ವೈಷಮ್ಯ ಹುಟ್ಟಿಸುವ ಕಾರ್ಯವನ್ನು ಕಾಂಗ್ರೆಸ್ನವರು ಮಾಡಿದರು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಿಂದ ದೀನದಲಿತರ ಉದ್ಧಾರ ಆಗಲಿಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿ ಆಗಲಿಲ್ಲ. ದೀನದಲಿತರು ಭಾಷಣಕ್ಕಷ್ಟೇ ಸೀಮಿತರಾದರು. ನಾವು ವಿದ್ಯಾವಂತರಾದವರು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ಗೆ ಈಗ ಹತಾಶೆ ಬಂದಿದೆ. ಹೊಟ್ಟೆಪಾಡಿಗಾಗಿ ಗುಳೆ ಹೋದವರು ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದು, ಇದು ದೀನದಲಿತರಿಗೆ ಮಾಡಿದ ಅವಮಾನ ಎಂದು ಅಭಿಪ್ರಾಯಪಟ್ಟರು.
ನರೇಂದ್ರ ಮೋದಿಯವರ ಸರ್ವರ ಸರ್ವತೋಮುಖ ಅಭಿವೃದ್ಧಿಯ ಕನಸು ಈಡೇರಲು ನಾವೆಲ್ಲರೂ ಅವರಿಗೆ ಬೆಂಬಲವಾಗಿ ನಿಲ್ಲಬೇಕು. ರಾಜ್ಯದ ಬಸವರಾಜ ಬೊಮ್ಮಾಯಿಯವರ ಸರಕಾರವೂ ದೀನದಲಿತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಎಂದು ವಿವರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.